ಹಾನಗಲ್ ತಾಲೂಕಿನ ಚಿಕ್ಕವಂಶಿ ಗ್ರಾಮದಲ್ಲಿ ಮಧ್ಯರಾತ್ರಿ ಮುಸುಕುದಾರಿ ಗ್ಯಾಂಗ್ ಬಂಗಾರದ ಅಂಗಡಿಯನ್ನು ಗುರಿಯಾಗಿಸಿಕೊಂಡು ಸಿನಿಮಾ ಶೈಲಿಯಲ್ಲಿ ದರೋಡೆ ಮಾಡಿದ್ದಾರೆ.
ಸುಮಾರು 8 ಜನರ ಗ್ಯಾಂಗ್ ಮಂಕಿ ಕ್ಯಾಪ್ ಮತ್ತು ಕೈಗವಸುಗಳನ್ನ ಧರಿಸಿ ಅಂಗಡಿಗೆ ನುಗ್ಗಿದ್ದು, ಕಟರ್ ಬಳಸಿ ಬೀಗ ಒಡೆದು ಒಳಗೆ ಪ್ರವೇಶಿಸಿದ್ದಾರೆ. ಅಂಗಡಿಯಲ್ಲಿದ್ದ 300 ಗ್ರಾಂ ಚಿನ್ನ ಮತ್ತು 35 ಕೆಜಿ ಬೆಳ್ಳಿ ಸೇರಿದಂತೆ ಸುಮಾರು ₹1.20 ಕೋಟಿ ಮೌಲ್ಯದ ಆಭರಣಗಳನ್ನು ದೋಚಲಾಗಿದೆ. ಜೊತೆಗೆ ಸುಮಾರು 5 ಕ್ವಿಂಟಲ್ ತೂಕದ ಕಬ್ಬಿಣದ ಲಾಕರ್ನ್ನೂ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಣ್ಣಪ್ಪ ಭಜಂತ್ರಿ ಅವರಿಗೆ ಸೇರಿದ ಈ ಅಂಗಡಿ ಮೇಲೆ ಈ ಹಿಂದೆ ಎರಡು ಬಾರಿ ದರೋಡೆ ಯತ್ನ ನಡೆದಿದ್ದರೂ, ಈ ಬಾರಿ ಗ್ಯಾಂಗ್ ಯಶಸ್ವಿಯಾಗಿ ಕೃತ್ಯ ಎಸಗಿದೆ. ಸಿಸಿಟಿವಿಯಲ್ಲಿ ದರೋಡೆಕೋರರ ದೃಶ್ಯಗಳು ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಲಾಗಿದೆ.




