ತಮಿಳು ನಟ ರವಿ ಮೋಹನ್ ಇದೀಗ ತಮ್ಮ ವೈಯಕ್ತಿಕ ಜೀವನದ ಸಂಕಷ್ಟಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ, ಅವರ ಹೇಳಿಕೆ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿ ಆರತಿ ರವಿ ಜೊತೆ ನಡೆಯುತ್ತಿರುವ ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೆ ತಮ್ಮ ಯಾವುದೇ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿ ಮೋಹನ್, ʼನನ್ನ ಮಕ್ಕಳನ್ನು ನೋಡಲು ಕೂಡ ಅವಕಾಶ ಕೊಡುತ್ತಿಲ್ಲ. ನಾನು ನನ್ನನ್ನೇ ನೋಯಿಸಿಕೊಳ್ಳಲು ಆರಂಭಿಸಿದ್ದೇನೆʼ ಎಂದು ಹೇಳಿ ಭಾವುಕರಾದರು. ಅವರ ಕೈ ಮೇಲೆ ಇರುವ ಗಾಯದ ಗುರುತುಗಳನ್ನು ತೋರಿಸಿ, ʼಜೂಮ್ ಮಾಡಿ ನೋಡಿ… ಒಂದು ದಿನ ನಾನು ಈ ಲೋಕವನ್ನೇ ಬಿಟ್ಟು ಹೋಗಬಹುದುʼ ಎಂದು ಹೇಳಿದ ಮಾತುಗಳು ಅಚ್ಚರಿ ಮೂಡಿಸಿವೆ.
ಇತ್ತೀಚೆಗೆ ನಟಿ ಕೆನಿಷಾ ಜೊತೆಗಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದ ವೇಳೆ, ಈ ಕುರಿತು ಕೂಡ ರವಿ ಮೋಹನ್ ಪ್ರತಿಕ್ರಿಯೆ ನೀಡಿದ್ದಾರೆ. ʼಅವಳು ಎಲ್ಲಿದ್ದರೂ ಸಂತೋಷವಾಗಿರಲಿ. ಅವಳ ಮೇಲೆ ನಡೆದ ಸೈಬರ್ ದಾಳಿ ತಪ್ಪುʼ ಎಂದು ಹೇಳಿದ್ದಾರೆ. ಇದೇ ವೇಳೆ ಕೆನಿಶಾ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮತ್ತು ರವಿ ಮೋಹನ್ ನಡುವಿನ ಸಂಬಂಧ ಮುರಿದಿರುವ ಸುಳಿವು ನೀಡಿದ್ದರು.
ʼಮೊದಲು ನನ್ನ ವೈಯಕ್ತಿಕ ಜೀವನ ಸರಿಪಡಿಸಿಕೊಳ್ಳುತ್ತೇನೆ. ನನ್ನ ಹೆಸರಿನ ಮೇಲೆ ಬಂದಿರುವ ಆರೋಪಗಳನ್ನು ಕ್ಲೀನ್ ಮಾಡಿಕೊಂಡ ನಂತರವೇ ಮತ್ತೆ ಸಿನಿಮಾಗೆ ಮರಳುತ್ತೇನೆʼ ಎಂದು ರವಿ ಮೋಹನ್ ಸ್ಪಷ್ಟಪಡಿಸಿದ್ದಾರೆ. ಅವರ ಈ ಭಾವುಕ ಹೇಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿವೆ.




