ಯುವಕರು ಈ ದೇಶದ ಶಕ್ತಿ-ಅವರೇ ಮುಂದಿನ ಭವಿಷ್ಯ: ಕಾಂಗ್ರೆಸ್ ವಿದ್ಯಾರ್ಥಿಗಳೊಂದಿಗೆ ನಿಂತಿದೆ: ಸಿಎಂ ಡಿಕೆಶಿ

Political News: ದೆಹಲಿಯ ಪ್ರಧಾನ ಮಂತ್ರಿ ನಿವಾಸದ ಎದುರು ವಿದ್ಯಾರ್ಥಿಗಳ ಪರವಹಿಸಿ, ಕಾಂಗ್ರೆಸ್ ನಡೆಸಿದ ಪ್ರತಿಭಟನೆ ನಿಲ್ಲಿಸಿ, ಪೋಲೀಸರು ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಅಖಿಲೇಶ್ ಯಾದವ್ ಸೇರಿ ಹಲವು ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿಗರು, ವಿದ್ಯಾರ್ಥಿಗಳು ಸೇರಿ ಹಲವರನ್ನು ವಶಕ್ಕೆ ಪಡೆದಿತ್ತು.

ಈ ವೇಳೆ ಆ ಪ್ರತಿಭಟನೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸಹ ಭಾಗವಹಿಸಿದ್ದರು. ಆದರೆ ಪೋಲೀಸರು ಪ್ರತಿಭಟನೆ ನಿಲ್ಲಿಸಿದ್ದು, ಈ ವೇಳೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಬಳಿಕ ನವದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿ, ಮಾತನಾಡಿದ್ದು, ಯುವಕರು ಈ ದೇಶದ ಆಸ್ತಿ ಮತ್ತು ನಮ್ಮ ನಾಳಿನ ಭವಿಷ್ಯ. ಭಾರತದ ಉಜ್ವಲ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆಯೇ ನಿಂತಿದೆ. 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ಅವರ ಕನಸು ಮತ್ತು ಶ್ರಮವನ್ನು ಸಂಪೂರ್ಣವಾಗಿ ಮಣ್ಣುಪಾಲು ಮಾಡಿವೆ. ತಮಗೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಹಾಗೂ ತಮ್ಮ ನೋವನ್ನು ವ್ಯಕ್ತಪಡಿಸಲು ದೇಶದಾದ್ಯಂತ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ, ಶಾಂತಿಯುತವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.

ಆದರೆ ಪ್ರತಿಭಟನೆ ಮಾಡುತ್ತಿರುವ ಯುವಜನರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯವಾಗಿದೆ. ದೇಶದ ಮುಂದಿನ ಭವಿಷ್ಯವಾದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಈ ಅನ್ಯಾಯ, ನಿಮ್ಮದೇ ಮಕ್ಕಳ ಮೇಲೆ ಮಾಡುತ್ತಿರುವ ಹಲ್ಲೆಯಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಈ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳು, ಯುವಜನರು ಮತ್ತು ಪೋಷಕರ ಪರವಾಗಿ ಗಟ್ಟಿಯಾಗಿ ನಿಂತಿದ್ದು, ಅವರ ಭಾವನೆಗಳಿಗೆ ಸ್ಪಂದಿಸಿ ಧ್ವನಿ ಎತ್ತಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ರಾಹುಲ್ ಗಾಂಧಿ ಅವರು ಹೋರಾಟದ ಮುಂಚೂಣಿಯಲ್ಲಿದ್ದರೆ, ಪ್ರಿಯಾಂಕಾ ಗಾಂಧಿ ಅವರು ಕೂಡ ನೇರವಾಗಿ ಭಾಗಿಯಾಗಿದ್ದಾರೆ. ಸಂಕಷ್ಟದಲ್ಲಿದ್ದಾಗ ಜನರ ಪರವಾಗಿ ನಿಂತು ಹೋರಾಡುವುದೇ ಗಾಂಧಿ ಕುಟುಂಬದ ನೈಜ ಶಕ್ತಿಯಾಗಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಮ್ಮ ನಾಯಕರನ್ನು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿರುವ ಸರ್ಕಾರದ ಸರ್ವಾಧಿಕಾರಿ ನಡೆಯನ್ನು ಕರ್ನಾಟಕ ರಾಜ್ಯ ಸೇರಿದಂತೆ ಇಡೀ ದೇಶವು ತೀವ್ರವಾಗಿ ಖಂಡಿಸುತ್ತದೆ. ಇದು ಭಾರತದ ಯುವಜನತೆಯ ಬದುಕಿನ ಪ್ರಶ್ನೆಯಾಗಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಈ ಹೋರಾಟ ಮುಂದುವರಿಯಲಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

About The Author