ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಅವರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಹೌದು, ಪವಿತ್ರಾ ಗೌಡ ಅವರ ಮೊದಲ ಪತಿ ಸಂಜಯ್ ಸಿಂಗ್ ರಾಜಸ್ಥಾನದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಈಗ ತಡವಾಗಿ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಸುಮಾರು 7 ರಿಂದ 8 ತಿಂಗಳ ಹಿಂದೆಯೇ ಸಂಜಯ್ ಸಿಂಗ್ ಕೊನೆಯುಸಿರೆಳೆದಿದ್ದರಂತೆ! ಕಳೆದ ಕೆಲವು ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ರಾಜಸ್ಥಾನದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕೇಳಿ ಬಂದಿದೆ. ಪವಿತ್ರಾ ಗೌಡ ಅವರೊಂದಿಗಿನ ವಿಚ್ಛೇದನದ ಬಳಿಕ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರು ಮದ್ಯವ್ಯಸನಕ್ಕೆ ತುತ್ತಾಗಿದ್ದರು ಎನ್ನಲಾಗಿದ್ದು, ಇದೇ ಅವರ ಅಕಾಲಿಕ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಜ್ಞಾಪಕ ಇರಬಹುದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಬಂಧನಕ್ಕೊಳಗಾದ ಸಂದರ್ಭದಲ್ಲಿ ಸಂಜಯ್ ಸಿಂಗ್ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಪವಿತ್ರಾ ಜೊತೆಗಿನ ತಮ್ಮ ಹಳೆಯ ದಿನಗಳು ಹಾಗೂ ದಾಂಪತ್ಯ ಜೀವನದ ವಿವರಗಳನ್ನು ಹಂಚಿಕೊಂಡಿದ್ದರು. ಆ ಸಂದರ್ಶನ ನೀಡಿ ತಮ್ಮ ಊರಿಗೆ ಮರಳಿದ ಕೆಲವೇ ತಿಂಗಳುಗಳಲ್ಲಿ ಅವರು ಸಾವನ್ನಪ್ಪಿದ್ದಾರೆ.
2007-2008ರ ಅವಧಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಸಂಜಯ್ ಮತ್ತು ಪವಿತ್ರಾ ದಂಪತಿಗೆ ಓರ್ವ ಹೆಣ್ಣು ಮಗಳಿದ್ದಾಳೆ. ಆದರೆ ಹೊಂದಾಣಿಕೆಯ ಕೊರತೆಯಿಂದ 2011ರಲ್ಲೇ ಇವರು ಕಾನೂನಾತ್ಮಕವಾಗಿ ಡಿವೋರ್ಸ್ ಪಡೆದು ಬೇರೆಯಾಗಿದ್ದರು. ಒಟ್ಟಿನಲ್ಲಿ, ಹಲವು ವರ್ಷಗಳಿಂದ ಒಂಟಿಯಾಗಿದ್ದ ಸಂಜಯ್ ಸಿಂಗ್ ಅವರ ಈ ಅಕಾಲಿಕ ಅಂತ್ಯ ಈಗ ಎಲ್ಲರಲ್ಲೂ ಬೇಸರ ಮೂಡಿಸಿದೆ ಅಂತ ಹೇಳಬಹುದು!
