ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಕರ್ನಾಟಕದಲ್ಲಿ ಎನ್ಡಿಎ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದ್ದು, ಈ ಕುರಿತ ವಿಸ್ತೃತ ವರದಿ ಇಲ್ಲಿದೆ ನೋಡಿ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ದೇಶದ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಹಾಗೂ ಕರ್ನಾಟಕದಲ್ಲಿ ಎನ್ಡಿಎ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚಿಸಿ, ಪ್ರಧಾನಿಯವರಿಂದ ಮಾರ್ಗದರ್ಶನ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಜೊತೆಗೆ, ತಾವು ನಿರ್ವಹಿಸುತ್ತಿರುವ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವಾಲಯಗಳ ವತಿಯಿಂದ ಕೈಗೊಂಡಿರುವ ಪ್ರಮುಖ ಕಾರ್ಯಕ್ರಮಗಳ ಬಗ್ಗೆಯೂ ಪ್ರಧಾನಿಗಳಿಗೆ ವಿವರಿಸಿದ್ದಾಗಿ ಅವರು ತಿಳಿಸಿದರು. ಇನ್ನು ಈ ಭೇಟಿಯ ಕುರಿತು ಹರ್ಷ ವ್ಯಕ್ತಪಡಿಸಿರುವ ನಿಖಿಲ್ ಕುಮಾರಸ್ವಾಮಿ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವುದು ತಮಗೆ ಅತ್ಯಂತ ಸಂತಸ ತಂದಿದೆ ಎಂದಿದ್ದಾರೆ.
ಬಾಲ್ಯದಲ್ಲಿ ತಮ್ಮ ತಾತ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿ ದೇಶ ಹಾಗೂ ರಾಜ್ಯದ ಪ್ರಗತಿಗಾಗಿ ಶ್ರಮಿಸುವುದನ್ನು ನೋಡಿದ್ದೆ ಎಂದು ಸ್ಮರಿಸಿರುವ ಅವರು, ಇಂದು ಎನ್ಡಿಎ ಪಾಲುದಾರರಾಗಿ ಪ್ರಧಾನಿ ಮೋದಿ ಅವರ ಜೊತೆ ನಿಂತಿರುವುದು ನಿಜಕ್ಕೂ ಒಂದು ಸಂಭ್ರಮದ ಕ್ಷಣ ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿಯವರ ಸ್ಪೂರ್ತಿದಾಯಕ ಚಿಂತನೆಗಳು ಹಾಗೂ ಕರ್ನಾಟಕದ ಬಗ್ಗೆ ಅವರಿಗಿರುವ ವಿಶೇಷ ಕಾಳಜಿಯನ್ನು ಕೊಂಡಾಡಿರುವ ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಈ ಭೇಟಿಯು, ರಾಜ್ಯ ರಾಜಕಾರಣ ಹಾಗೂ ಮುಂಬರುವ ರಾಜಕೀಯ ಸಿದ್ಧತೆಗಳ ದೃಷ್ಟಿಯಿಂದ ತೀವ್ರ ಕುತೂಹಲ ಮೂಡಿಸಿದೆ.
