www.karnatakatv.net : ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾದ ಬಳಿಕ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ನೀಡಲಾಗಿದೆ. ಈ ಮೂಲಕ ಅಪ್ಪು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಇನ್ನು ಪುನೀತ್ ರಾಜ್ ಕುಮಾರ್ ರವರ ನೇತ್ರದಿಂದ ಇಬ್ಬರು ದೃಷ್ಟಿಹೀನರ ಬಾಳಲ್ಲಿ ಬೆಳಕು ಮೂಡಲಿದೆ. ತಮ್ಮ ತಂದೆ, ಮೇರು ನಟ ಡಾ. ರಾಜ್ ಕುಮಾರ್ ರವರ ಮಾರ್ಗದಲ್ಲಿಯೇ ನಡೆಯುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ಅಣ್ಣಾವ್ರಂತೆಯೇ ನೇತ್ರದಾನ ಮಾಡಿದ್ದಾರೆ. ಇನ್ನು ನಿನ್ನೆ ಮಧ್ಯಹ್ನ ಅಪ್ಪು ನಿಧನರಾಗುತ್ತಿದ್ದಂತೆಯೇ ಕುಟುಂಬಸ್ಥರು ನಾರಾಯಣ ನೇತ್ರಾಲಯಕ್ಕೆ ಸುದ್ದಿ ತಿಳಿಸಿ ನೇತ್ರದಾನ ಮಾಡಿದ್ದರು.
ಇನ್ನು 2006ರಲ್ಲಿ ಡಾ ರಾಜ್ಕುಮಾರ್ ನಿಧನರಾಗಿದ್ದಾಗ ಅವರ ಇಚ್ಛೆಯಂತೆಯೇ ಅವರ ಕಣ್ಣುಗಳನ್ನು ದಾನ ಮಾಡಲಾಗಿತ್ತು. ಈ ಮೂಲಕ ಅಣ್ಣಾವ್ರು ಇಬ್ಬರ ಬಾಳಿಗೆ ಬೆಳಕಾಗಿದ್ದರು. ಸದ್ಯ ಪುನೀತ್ ಕೂಡ ತಮ್ಮ ತಂದೆಯವರoತೆಯೇ ತಮ್ಮ ನೇತ್ರದಾನಕ್ಕೆ ಒಪ್ಪಿಗೆ ನೀಡಿದ್ದರು. ಮೇರು ನಟ ಡಾ.ರಾಜ್ ಕುಮಾರ್ ರಂತೆಯೇ ತೆರೆಯಲ್ಲಿ ಮತ್ತು ನಿಜಜೀವನದಲ್ಲಿ ರಿಯಲ್ ಹೀರೋ ಆಗಿದ್ದ ಪುನೀತ್ ರಾಜ್ ಕುಮಾರ್ ನೇತ್ರದಾನ ಮಾಡೋ ಮೂಲಕ ಲಕ್ಷಾಂತರ ಮಂದಿ ನೇತ್ರದಾನ ಮಾಡಲು ಸ್ಪೂರ್ತಿ ತುಂಬಿದ್ದಾರೆ.