ಬೆಂಗಳೂರು: ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಕರೊನಾ ಸೋಂಕಿಗೆ ಬಲಿಯಾಗಿದ್ದ ವಿಧವೆ ಸಹಿತ ಇಬ್ಬರ ಮೃತದೇಹಗಳು ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ 15 ತಿಂಗಳ ಕಾಲ ಅಂತ್ಯಸಂಸ್ಕಾರವನ್ನೂ ಕಾಣದೆ ಶವಾಗಾರದ ಶೈತ್ಯಪೆಟ್ಟಿಗೆಯಲ್ಲಿ ಕೊಳೆಯುತ್ತಿದ್ದ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.
ಇದು ಇಎಸ್ಐ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. 2019ರ ಡಿಸೆಂಬರ್ನಲ್ಲಿ ಕರೊನಾ ಕಾಣಿಸಿಕೊಂಡು, 2020ರ ಮಾರ್ಚ್ನಲ್ಲಿ ಭಾರತದಲ್ಲಿ ಲಾಕ್ಡೌನ್ ವಿಧಿಸಲಾಯಿತು. ಎಲ್ಲೆಡೆ ಗಂಭೀರತೆ ಪಡೆದು ಸೋಂಕಿತರ ಮನೆ ಬಳಿಗೆ ಆಂಬುಲೆನ್ಸ್ ಕಳುಹಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಗುಣಮುಖರಾದರೆ ಮನೆ ಬಳಿಗೆ ಬಿಡುತ್ತಿದ್ದರು.
ಸಾವನ್ನಪ್ಪಿದ್ದವರ ಶವವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡದೆ ಬಿಬಿಎಂಪಿ ವತಿಯಿಂದಲೇ ಕರೊನಾ ಮಾರ್ಗಸೂಚಿ ಪ್ರಕಾರ ಶವ ಸಂಸ್ಕಾರ ನಡೆಸಲಾಗುತ್ತಿತ್ತು. ಮೊದಲ ಅಲೆಯಲ್ಲಿ ಇದೇ ಮಾರ್ಗಸೂಚಿ ಪಾಲನೆ ಮಾಡಲಾಯಿತು. ಮೊದಲ ಅಲೆಯಲ್ಲೇ ದುರ್ಗಾ ಮತ್ತು ಮುನಿರಾಜು ಕರೊನಾ ಸೋಂಕು ತಗುಲಿ ಚಿಕಿತ್ಸೆಗೆಂದು ಇಎಸ್ಐ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಶವಗಳನ್ನು ಶವಗಾರಕ್ಕೆ ಸ್ಥಳಾಂತರ ಮಾಡಿದ್ದಾರೆ. ಮೃತರ ಕುಟುಂಬಕ್ಕೆ ವಿಷಯ ತಿಳಿಸಿದ ಬಳಿಕ ಶವ ಸಂಸ್ಕಾರಕ್ಕೆ ಬಿಬಿಎಂಪಿಗೆ ಹಸ್ತಾಂತರ ಮಾಡಬೇಕಿತ್ತು. ಅದನ್ನು ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ ಎನ್ನಲಾಗುತ್ತಿದೆ.