ಸಾಕಿದ ಬೆಕ್ಕು ಮತ್ತು ನಾಯಿ ಆ ಮನೆಯವರಿಗೆ ಎಷ್ಟು ಅಚ್ಚುಮೆಚ್ಚಿನದ್ದಾಗಿರುತ್ತದೆ ಎಂದು ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು ನಮ್ಮ ಮನೆಯ ನಾಯಿ ತೀರಿಹೋಯಿತು, ಬೆಕ್ಕು ತೀರಿಹೋಯಿತು ಎಂದು ಕಣ್ಣೀರು ಹಾಕುತ್ತಾರೆ. ಅದನ್ನು ನೋಡಿ ಹಲವರು ಏನಿದು ಹುಚ್ಚುತನ ಯಕಶ್ಚಿತ್ ನಾಯಿ, ಬೆಕ್ಕು ಸತ್ತಿದ್ದಕ್ಕೆ ಯಾರಾದ್ರೂ ಇಷ್ಟು ಅಳ್ತಾರಾ, ಹುಚ್ಚರಿವರು ಅಂತಾನೂ ಹೇಳ್ತಾರೆ. ಆದ್ರೆ ನಾಯಿ, ಬೆಕ್ಕು ಸಾಕಿದವರಿಗೆ ಅವರ ಸಂಕಟ ಅರ್ಥವಾಗತ್ತೆ. ಯಾಕಂದ್ರೆ ಸಾಕು ಪ್ರಾಣಿಗಳು ಆ ಮನೆಯ ಮಕ್ಕಳಂತೆ ಇರುತ್ತದೆ.
ಕೊಯಂಬತ್ತೂರಲ್ಲಿ ವ್ಯಕ್ತಿಯೋರ್ವ ತನ್ನ ಮುದ್ದಿನ ಬೆಕ್ಕಿಗಾಗಿ ಸೀಮಂತ ಏರ್ಪಡಿಸಿದ್ದಾರೆ. ಇದು ನೋಡುವವರಿಗೆ ವಿಚಿತ್ರವೆನ್ನಿಸಿದರೂ, ಆ ವ್ಯಕ್ತಿ ಮತ್ತು ಆತನ ಕುಟುಂಬಸ್ಥರಿಗೆ ಖುಷಿಯ ವಿಷಯವೇ. ವಿ.ಕೆ. ಉಮಾ ಮಹೇಶ್ವರನ್ ಎಂಬುವವರು, ತಮ್ಮ ಮನೆಯ ಎರಡು ಪರ್ಷಿಯನ್ ಬೆಕ್ಕುಗಳ ಸೀಮಂತವನ್ನು, ಪೆಟ್ ಕ್ಲೀನಿಕ್ನಲ್ಲಿ ಮಾಡಿದ್ದಾರೆ. ಡಾಕ್ಟರ್ ವೇಣುಗೋಪಾಲ್ ಚೀಫ್ ಗೆಸ್ಟ್ ಆಗಿ ಆಗಮಿಸಿದ್ದರು. ಇನ್ನು ಕ್ಷೀರಾ ಮತ್ತು ಐರಿಷ್ ಎಂಬುದು ಆ ಮುದ್ದಾದ ಬೆಕ್ಕುಗಳ ಹೆಸರು.
ಈ ಬಗ್ಗೆ ಮಾತನಾಡಿದ ಬೆಕ್ಕುಗಳ ಮಾಲೀಕ ಉಮಾ ಮಹೇಶ್ವರನ್, ನಾವು ಪ್ರತೀ ತಿಂಗಳು ಈ ಬೆಕ್ಕುಗಳನ್ನ ಕ್ಲೀನಿಕ್ಗಳಿಗೆ ತೆಗೆದುಕೊಂಡು ಬರ್ತೇವೆ. ಅವುಗಳಿಗೆ ಮೀನು, ಮಾಂಸ ಸೇರಿ ಉತ್ತಮ ಆಹಾರಗಳನ್ನೇ ಕೊಡುತ್ತೇವೆ. ಅವುಗಳಿಗೆ ಹುಟ್ಟುವ ಮಕ್ಕಳು ಆರೋಗ್ಯವಾಗಿರಲಿ ಎಂಬುದಷ್ಟೇ ನಮ್ಮ ಉದ್ದೇಶ ಎಂದು ಹೇಳಿದ್ದಾರೆ.