Political News
ಬೆಂಗಳೂರು(ಫೆ.6): ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸಿಲಿಕಾನ್ ಸಿಟಿಗೆ ಆಗಮಿಸಿದ್ದಾರೆ. ಇನ್ನೇನು ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಈ ಭೇಟಿ ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ರಾಜಕೀಯ ರಂಗದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಮೋದಿ ಅವರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನೇನು ಕೆಲವೇ ಹೊತ್ತಿನಲ್ಲಿ ತುಮಕೂರಿನ ಕಡೆ ಪ್ರಧಾನಿ ನರೇಂದ್ರ ಮೋದಿ ತೆರಳಲಿದ್ದಾರೆ.
ಮೋದಿ ಆಗಮನವಾಗುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ತುಮಕೂರು ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ನ ಹೆಚ್ ಎ ಎಲ್ ಘಟಕದ ಬಳಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಈಗಾಗಲೇ ವೇದಿಕೆಯ ಬಳಿ ಐದು ಬಾಗಿಲುಗಳನ್ನು ತೆರೆಯಲಾಗಿದೆ. ನಾಲ್ಕು ಗೇಟ್ ಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದ್ದು, ಮತ್ತೊಂದು ಗೇಟ್ ಬಳಿ ಗಣ್ಯ ವ್ಯಕ್ತಿಗಳಿಗೆ ಗೇಟ್ ಗಳನ್ನು ತೆರೆಯಲಾಗಿದೆ. ಸುಮಾರು 70 ಸಾವಿರ ಆಸನಗಳನ್ನು ಮೀಸಲಿಡಲಾಗಿದೆ. ಕಾರ್ಯಕ್ರಮ ವೀಕ್ಷಿಸಲು ಎಲ್ ಇ ಡಿ ಅಳವಡಿಸಲಾಗಿದೆ.
ಹೆಚ್ ಎಎಲ್ ಘಟಕದ ಸುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ 206 ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರದ ಮಾರ್ಗವನ್ನೂ ಕೂಡ ಬದಲಾಯಿಸಲಾಗಿದೆ. ನಿಟ್ಟೂರು ಕಡೆಯಿಂದ ಆಗಮಿಸುವ ವಾಹನಗಳು ನಿಟ್ಟೂರು ಟಿಬಿ ಕ್ರಾಸ್ ತುರುವೇಕೆರೆ ಮಾರ್ಗವಾಗಿ ಟಿಬಿ ಕ್ರಾಸ್ ಗೆ ತೆರಳಬಹುದು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಎಎಲ್ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಲೋಕಾರ್ಪಣೆಗೊಳಿಸಿ, ಅದೇ ವೇದಿಕೆಯಲ್ಲಿಯೇ ಪೆಟ್ರೋಲ್ಗೆ ಶೇಕಡಾ 20ರಷ್ಟು ಎಥಾನಾಲ್ ಮಿಶ್ರಣ ಮಾಡಿ ಸಿದ್ಧಪಡಿಸಲಾಗಿರುವ ಇ-20 ಪೆಟ್ರೋಲ್ ಅನ್ನು ದೇಶದ ವಿವಿಧ ರಾಜ್ಯಗಳ 67 ಪೆಟ್ರೋಲ್ ಬಂಕ್ಗಳಲ್ಲಿ ಪ್ರಾಯೋಗಿಕವಾಗಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಒಂದು ಬಾರಿ ಬಳಸಿ ಬಿಸಾಡುವ ಹಳೇ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ತಯಾರಿಸಿದ ಸಮವಸ್ತ್ರ ಅನಾವರಣ ಮಾಡಲಿದ್ದಾರೆ.