ಕೊಪ್ಪಳ: ಇತ್ತೀಚಿನ ವರ್ಷಗಳಲ್ಲಿ ಮದುವೆ ವಯಸ್ಸಿಗೆ ಬಂದ ಎಲ್ಲಾ ಯುವಕರಿಗೆ ಎದುರಾಗುವ ಬಹುದೊಡ್ಡ ಸವಾಲು ಅಂದ್ರೆ ಕನ್ಯೆ ಹುಡುಕುವುದು. ಅದ್ರಲ್ಲೂ ರೈತ ಯುವಕನಾಗಿದ್ರೆ ಹೆಣ್ಣು ಸಿಗೋದು ತುಂಬಾನೇ ಕಷ್ಟ ಆಗೋಗಿದೆ.. ಇದರಿಂದ ಬೇಸತ್ತ ಯುವಕರು ಇತ್ತಿಚೇಗೆ ಪಾದಯಾತ್ರೆ ಮಾಡೊದು, , ದೇವರಿಗೆ ಹರಕೆ ಕಟ್ಟಿಕೊಂಡಿರುವ ಅನೇಕ ಉದಾಹರಣೆಗಳು ಸಹ ಇವೆ. ಆದ್ರೆ ಇಲ್ಲೊಬ್ಬ ಯುವ ರೈತ ಜಿಲ್ಲಾಧಿಕಾರಿಗೆ ಹುಡ್ಗಿ ಹುಡುಕಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.. ಅಚ್ಚರಿ ಅನ್ಸಿದ್ರು ಸತ್ಯ. ಹಾಗಾದ್ರೆ ಈ ಘಟನೆ ನಡೆದಿರೋದು ಎಲ್ಲಿ ಅನ್ನೋದನ್ನಾ ನಾವ್ ತೋರಿಸ್ತಿವಿ ನೋಡಿ..
ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಕನ್ಯೆ ಸಿಗುವುದೇ ಕಷ್ಟವಾಗಿಬಿಟ್ಟಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆಯೇ ಇದೀಗ ಯುಕವನೊಬ್ಬ ಜಿಲ್ಲಾಧಿಕಾರಿಗೆ ವಿಶೇಷ ಬೇಡಿಕೆಯೊಂದನ್ನು ಇಟ್ಟು ಗಮನ ಸೆಳೆದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳದ ಕನಕಗಿರಿಯಲ್ಲಿ ಬುಧವಾರ ಕೊಪ್ಪಳ ಜಿಲ್ಲಾಧಿಕಾರಿ ನಳೀನ್ ಅತುಲ್ ಅವರ ನೇತೃತ್ವದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಕನಕಗಿರಿ ಪಟ್ಟಣದ ಸಂಗಪ್ಪ ಶಿರಹಟ್ಟಿ ಎಂಬ 30 ವರ್ಷದ ಯುವಕ, ತಾನು ರೈತ ಎಂಬ ಕಾರಣಕ್ಕೆ ಕನ್ಯೆ ಸಿಗುತ್ತಿಲ್ಲ. ಸಾಕಷ್ಟು ವರ್ಷಗಳಿಂದ ಕನ್ಯತೆ ಹುಡುಕುತ್ತಿದ್ದೇನೆ.. ಇದು ನನ್ನೊಬ್ಬನ ಸಮಸ್ಯೆಯಲ್ಲ. ನನ್ನಂತ ನೂರಾರು ಜನರ ಸಮಸ್ಯೆಯಾಗಿದ್ದು, ಕೃಷಿ ಮಾಡಿಕೊಂಡು ಹೋಗುವ ನಮ್ಮಂಥ ಹುಡುಗರಿಗೆ ಕನ್ಯೆ ಸಿಗುತ್ತಿಲ್ಲ. ಸಿಕ್ಕರೂ ನನ್ನಂಥವರಿಗೆ ಮದುವೆ ಮಾಡಿಕೊಡಲು ಹುಡುಗಿಯರ ಪಾಲಕರು ಒಪ್ಪುತ್ತಿಲ್ಲ ಎಂದು ರೈತ ಸಂಗಪ್ಪ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದಾರೆ.
ನವಲಿ ರಸ್ತೆಯಲ್ಲಿ ಆರು ಎಕರೆ ಜಮೀನಿದೆ. ಅಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಯತ್ನ ಮಾಡುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಮದುವೆಗೆ ಹುಡುಗಿಯರು ಸಿಗದೇ ಹೋದಲ್ಲಿ ನಮ್ಮಂಥ ಸಾವಿರಾರು ಯುವ ರೈತರು ಕೃಷಿ ಕಾಯಕದಿಂದ ವಿಮುಖವಾಗುವ ಸಾಧ್ಯತೆ ಇದೆ ಎಂದು ಯುವ ರೈತ ಅಳಲು ತೋಡಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹುಡುಗ-ಹುಡುಗಿಯರ ಜೋಡಿ ಹುಡುಕುವುದು ಕಷ್ಟಕರವಾಗುತ್ತಿರುವ ಹಿನ್ನೆಲೆ ಸಾಮಾನ್ಯವಾಗಿ ಆಯಾ ಜಾತಿ, ಧರ್ಮಗಳ ಪ್ರಮುಖರು ಆಗಾಗ್ಗೆ ವಧು-ವರರ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಪಾಲಕರ ನೆರವಿಗೆ ಧಾವಿಸುತ್ತಿದ್ದಾರೆ.ಈ ವಧು-ವರರ ಸಮಾವೇಶದಲ್ಲಿ ತಮಗೆ ಸೂಕ್ತವಾಗುವ ಜೋಡಿಯನ್ನು ಯುವಕ ಮತ್ತು ಯುವತಿಯರು ಆರಿಸಿಕೊಳ್ಳುತ್ತಾರೆ. ಹಾಗೆಯೇ ಯುವ ರೈತರಿಗಾಗಿ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಅವಿವಾಹಿತ ರೈತರಿಗಾಗಿ ವಧು-ವರರ ಸಮಾವೇಶ ಹಮ್ಮಿಕೊಳ್ಳಬೇಕು ಎಂದು ಈ ಯುವರೈತ ಸಂಗಪ್ಪ ಸಲಹೆ ನೀಡಿದ್ದಾರೆ.
ಯುವಕನ ಮನವಿ ಕೇಳಿದ ಜಿಲ್ಲಾಧಿಕಾರಿ ನಕ್ಕು ನಕ್ಕು ಸಾಕಾಗಿದ್ದಾರೆ. ಇನ್ನು ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿ ಯುವಕನ ಮನವಿ ಪತ್ರವನ್ನು ಸ್ವೀಕರಿಸಿದ್ದಾರೆ.
ಯುವಕರಿಗೆ ಕನ್ಯೆಯರು ಸಿಗುತ್ತಿಲ್ಲ ಎಂಬ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಏಕೆಂದರೆ ಇದು ಒಬ್ಬಿಬ್ಬರ ಸಮಸ್ಯೆ ಅಲ್ಲ, ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಯುವ ರೈತರ ಗೋಳು ಕೇಳೋರೆ ಇಲ್ಲ ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ.. ದೇಶದ ಬೆನ್ನಲೆಬು, ದೇಶಕ್ಕೆ ಆಹಾರ ಕೊಡುವ ಅನ್ನದಾತ ಅಂತಾ ಹೇಳುವ ಬಹುತೇಕರು ರೈತರ ಮಕ್ಕಳಿಗೆ, ಯುವ ರೈತರಿಗೆ ಕನ್ಯೆ ಕೊಡಲು ಒಪ್ಪದಿರುವುದು ವಿಪರ್ಯಾಸ.