Dharwad News: ಧಾರವಾಡ: ಧಾರವಾಡದ ವಲಯ ಕಚೇರಿ ನಂಬರ್ 1 ರಲ್ಲಿ ಬರುವ ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕೆಲಸವನ್ನು ಏಕಾಏಕಿ ಆರಂಭಿಸಿದ ಬೆನ್ನಲೇ, ವ್ಯಾಪಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಜಟಾಪಟಿ ನಡೆದಿರುವ ಘಟನೆ ನಡೆದಿದೆ.
ವಲಯ ಕಚೇರಿ ನಂಬರ್ 1 ರಲ್ಲಿ ಬರುವ ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಇಂದು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಬಡ ವ್ಯಾಪಾರಿಗಳಿಗೆ ಬೀದಿಯೇ ಆಸರೆಯಾಗಿದೆ. ಇದರ ಮೇಲೆ ಅವರ ಜೀವನ ನಡೆದಿದೆ. ದಯವಿಟ್ಟು ಬೀದಿಬದಿ ವ್ಯಾಪಾರಿಗಳನ್ನು ಎಬ್ಬಿಸಬೇಡಿ ಎಂದು ಜನಜಾಗೃತಿ ಸಂಘದ ಮುಖಂಡ ನಾಗರಾಜ ಕಿರಣಗಿ ವಲಯ ಆಯುಕ್ತರಿಗೆ ಮನವಿ ಮಾಡಿದರು. ಆದರೆ, ಇದೇ ವಿಷಯಕ್ಕೆ ವಲಯ ಆಯುಕ್ತರು ಮತ್ತು ನಾಗರಾಜ ಕಿರಣಗಿ ಅವರ ಮಧ್ಯೆ ದೊಡ್ಡ ಜಟಾಪಟಿ ನಡೆಯಿತು.
ಇದೇ ರೀತಿ ಜಟಾಪಟಿ ನಡೆಸಿದರೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರು ದಾಖಲು ಮಾಡಲಾಗುವುದು ಎಂದು ಕಿರಣಗಿಗೆ ವಲಯ ಆಯುಕ್ತರು ಬೆದರಿಕೆ ಹಾಕಿದ ಪ್ರಸಂಗವೂ ನಡೆಯಿತು. ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿ ಅವರ ಬದುಕಿಗೆ ಆಸರೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ವ್ಯಾಪಾರಸ್ಥರು ಹಾಗೂ ಜನಜಾಗೃತಿ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.