Sandalwood News: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ, ವಯೋಸಹಜ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೇ, ಇಂದು ಮುಂಜಾನೆ ಸರೋಜಾ ಅವರು ನಿಧನರಾಗಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಸುದೀಪ್ ನಿವಾಸಕ್ಕೆ ತರಲಾಗುತ್ತದೆ. ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಸರೋಜಾ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ. ಇನ್ನು ತಾಯಿಯ ಅನಾರೋಗ್ಯದ ಕಾರಣ, ಸುದೀಪ್ ನಿನ್ನೆ ಬೇಗ ಶೂಟಿಂಗ್ ಮುಗಿಸಿ, ಮನೆಗೆ ತೆರಳಿದ್ದರು.
ಇನ್ನು ನವರಾತ್ರಿಯಲ್ಲಿ ಬಿಗ್ಬಾಸ್ ವೇದಿಕೆ ಮೇಲೆ ಬರುವಾಗ ಸುದೀಪ್ ಶೇರ್ವಾನಿ ಹಾಕಿಕೊಂಡು, ಚಪ್ಪಲಿ ಧರಿಸದೇ, ಬರೀಗಾಲಿನಲ್ಲಿ ಬಂದಿದ್ದರು. ಕ್ಯಾಮೆರಾ ನೋಡಿ, ನೋಡಿ ಅಮ್ಮ ಚಪ್ಪಲಿ ಧರಿಸದೇ, ಬರಿಗಾಲಿನಲ್ಲಿ ಬಂದಿದ್ದೇನೆ ಎಂದಿದ್ದರು. ಈ ಮೂಲಕ ನವರಾತ್ರಿಯಾದ ಕಾರಣ, ವೇದಿಕೆಯ ಮೇಲೆ ಚಪ್ಪಲಿ ಧರಿಸದೇ ಹೋಗಬೇಕು ಎಂದು ಅವರ ತಾಯಿ ಅವರಿಗೆ ಹೇಳಿದ್ದಾರೆಂದು ಕಿಚ್ಚ ತಿಳಿಸಿದ್ದರು.
ಪ್ರತೀ ಬಾರಿ ಮಂಗಳೂರಿನ ಬಗ್ಗೆ ಮಾತನಾಡುವಾಗ, ತುಳು ಭಾಷೆಯ ಬಗ್ಗೆ ಮಾತನಾಡುವಾಗ, ನನ್ನ ತಾಯಿ ತುಳುನಾಡಿನವರು, ನಾವು ಕನ್ನಡ ಮಾತನಾಡುತ್ತೇವೆ ಎಂದು ನಮ್ಮನ್ನು ಬೇರೆಯವರಂತೆ ನೋಡಬೇಡಿ. ನನ್ನ ತಾಯಿ ತುಳು ಭಾಷೆ ಮಾತನಾಡುತ್ತಾರೆ. ಆದರೆ ನನಗೆ ತುಳು ಬರುವುದಿಲ್ಲ. ಆದರೆ ನಾನು ಭಾಷೆಯನ್ನು ಗೌರವಿಸುತ್ತೇನೆ ಎಂದಿದ್ದರು.