ಕನ್ನಡದ ಬಿಗ್ ಬಾಸ್ ಪ್ರತಿಯೊಂದು ಸೀಸನ್ ಆರಂಭಕ್ಕೂ ಮುನ್ನ ಹಲವಾರು ಹೆಸರುಗಳು ಓಡಾಡುವುದು ರೂಢಿಯಾಗಿದೆ. ‘ಅವರು ಬರ್ತಾರೆ, ಇವರು ಬರ್ತಾರೆ’ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತವೆ. ಹಿಂದಿನ ದಿನಗಳಲ್ಲಿ ವೈರಲ್ ಆದ ಹತ್ತು ಹೆಸರುಗಳಲ್ಲಿ ಕನಿಷ್ಠ ಐದು ಮಂದಿ ನಿಜವಾಗಿಯೂ ದೊಡ್ಮನೆಗೆ ಪ್ರವೇಶ ಮಾಡುತ್ತಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಯಾವ ಹೆಸರು ಹರಿದಾಡುತ್ತದೆಯೋ ಅದು ನಿಜವಾಗುತ್ತದೆಯೆಂಬ ಖಚಿತತೆ ಇಲ್ಲ.
ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಅನೇಕ ಸೆಲೆಬ್ರಿಟಿಗಳ ಹೆಸರುಗಳೊಂದಿಗೆ ಹಿರಿಯ ನಟಿ ಸುಧಾರಾಣಿ ಅವರ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಅವರು ಅದನ್ನು ತಮ್ಮದೇ ಸ್ಟೈಲ್ನಲ್ಲಿ ಅಲ್ಲಗಳೆದಿದ್ದಾರೆ.
ಸುಧಾರಾಣಿ ಅವರು ಹಲವು ದಶಕಗಳಿಂದ ಸಿನಿರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಯಕಿಯಾಗಿ ಹಾಗೂ ಪೋಷಕ ಪಾತ್ರಗಳ ಮೂಲಕ ಜನಮನ ಗೆದ್ದಿದ್ದಾರೆ. ಇತ್ತೀಚೆಗೆ ಅವರು ಕಿರುತೆರೆಯಲ್ಲೂ ಕಾಣಿಸಿಕೊಂಡು, ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸಿದ್ದರು. ಆ ಧಾರಾವಾಹಿ ಈಗ ಮುಗಿದಿರುವುದರಿಂದ, ಅವರ ಹೆಸರು ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಸೇರಿಕೊಂಡಿತ್ತು.
ಈ ಕುರಿತು ಸ್ಪಷ್ಟನೆ ನೀಡಿದ ಸುಧಾರಾಣಿ, ಇನ್ಸ್ಟಾಗ್ರಾಮ್ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಮೀಮ್ ಪೇಜ್ಗಳ ಸ್ಕ್ರೀನ್ಶಾಟ್ಗಳನ್ನು ಸೇರಿಸಿ, ಕೊನೆಯಲ್ಲಿ ತಮ್ಮ ಸಿನಿಮಾದ ಪ್ರಸಿದ್ಧ ಡೈಲಾಗ್ ಯಾರ್ ಹೇಳಿದ್ದು? ಎಂಬುದನ್ನು ಬಳಸಿದ್ದಾರೆ. ಈ ಮೂಲಕ ತಾವು ಬಿಗ್ ಬಾಸ್ಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ