ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಕರಾವಳಿಯಲ್ಲಿ ಮತ್ತೊಂದು ನೆತ್ತರು ಹರಿದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಮರಳು ಸಾಗಣೆ ಬಾಡಿಗೆಗಾಗಿ ಕರೆಸಿ ಟೆಂಪೋ ಚಾಲಕನ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಬೈಕ್ನಲ್ಲಿ ಬಂದ ಇಬ್ಬರು ಈ ಕೃತ್ಯ ಎಸಗಿದ್ದಾರೆ. ಕೊಲ್ಲರಮಜಲು ಬೆಳ್ಳೂರು ನಿವಾಸಿ ಅಬ್ದುಲ್ ಖಾದರ್ ಎಂಬುವರ ಪುತ್ರ 32 ವರ್ಷದ ಅಬ್ದುಲ್ ರಹೀಂ ಮೃತನಾಗಿದ್ದಾನೆ. ಮತ್ತೊಬ್ಬ ಯುವಕ 24 ವರ್ಷದ ಕಲಂದರ್ ಶಾಫಿ ಗಾಯಗೊಂಡಿದ್ದಾನೆ.
ಮೃತ ರಹೀಂ ಅಡ್ಡೂರಿನ ಮಸೀದಿಯಲ್ಲಿ ಕೆಲಸದಲ್ಲಿದ್ದರು..
ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ದೂರವಾಣಿ ಕರೆ ಮಾಡಿ, ಬಾಡಿಗೆಗೆ ಕರೆಯಲಾಗಿತ್ತು. ಮರಳು ತೆಗೆದುಕೊಂಡು ಹೋಗಿ ಅನ್ಲೋಡ್ ಮಾಡುವ ವೇಳೆ ದಾಳಿ ಮಾಡಲಾಗಿದೆ. ಹತ್ಯೆಗೀಡಾದ ಅಬ್ದುಲ್ ರಹೀಂ ಬಂಟ್ವಾಳದ ಅಡ್ಡೂರಿನ ಕೊಳತ್ತಮಜಲು ಮಸೀದಿಯಲ್ಲಿ ಚಟುವಟಿಕೆಯಲ್ಲಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕೊಲೆ ಹಿನ್ನೆಲೆಯಲ್ಲಿ ಬಂಟ್ವಾಳ, ಬೆಳ್ತಂಗಡಿ ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನಾದ್ಯಂತ ಮೇ 27ರ ಸಂಜೆ 6 ಗಂಟೆಯಿಂದ ಮೇ 30ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ.
ಪರಿಚಿತರಿಂದಲೇ ಹತ್ಯೆ, 15 ಮಂದಿಯ ವಿರುದ್ಧ ಕೇಸ್..
ಇನ್ನೂ ಅಬ್ದುಲ್ ರಹೀಂ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡ ಕಲಂದರ್ ಶಫಿ ಮಾಹಿತಿ ಅನ್ವಯ ನಿಸಾರ್ ಎಂಬವರ ದೂರಿನಡಿ ರಹೀಂ ಪರಿಚಯಸ್ಥರೇ ಆಗಿರುವ ದೀಪಕ್, ಸುಮಿತ್ ಸೇರಿ 15 ಜನರ ವಿರುದ್ದ ಬಿಎನ್ಎಸ್ 103, 109, 118(1), 118(2), 190, 191(1), 191(2), 191(3) ಅಡಿ ಎಫ್ಐಆರ್ ದಾಖಲಾಗಿದೆ. ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಲಂದರ್ ಶಾಫಿ ಮಾಹಿತಿ ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಇನ್ನೂ ನಿಸಾರ್ ನೀಡಿರುವ ದೂರನ್ನು ಗಮನಿಸಿದಾಗ, ಅಬ್ದುಲ್ ರಹೀಂ ಮತ್ತು ಕಲಂದರ್ ಶಾಫಿ ಅವರು ಹೊಳೆ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುತ್ತಿದ್ದರು. ಈ ವೇಳೆ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು 15 ಮಂದಿ ಏಕಾಏಕಿ ಬಂದು ದಾಳಿ ನಡೆಸಿದ್ದಾರೆ. ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹೀಂ ಅವರನ್ನು ಹೊರಗೆ ಎಳೆದು ತಲವಾರು, ಚೂರಿ, ರಾಡ್ ಗಳೊಂದಿಗೆ ಯದ್ವಾ- ತದ್ವಾ ಹಲ್ಲೆ ನಡೆಸಿದ್ದಾರೆ. ಅಲ್ಲಿದ್ದವರು ಕೂಗಾಡಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ.
ಇನ್ನೂ ಘಟನೆಯ ಬಳಿಕ ದೇರಳಕಟ್ಟೆಯ ಬಳಿ ಇರುವ ಯೆನಪೋಯಾ ಆಸ್ಪತ್ರೆಯ ಬಳಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಮುಸ್ಲಿಂ ಸಮುದಾಯದ ಜನರು ರಹೀಂ ಕೊಲೆಯನ್ನು ಖಂಡಿಸಿದ್ದರು. ಅಲ್ಲದೆ ಕಳೆದ ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ಕೊಲೆಯ ಪ್ರತೀಕಾರವಾಗಿ ಈ ರೀತಿಯ ಘಟನೆ ನಡೆದಿದೆ. ಇದು ಇಲ್ಲಿಗೆ ನಿಲ್ಲಬೇಕು, ಕರಾವಳಿ ಶಾಂತಿಯುತವಾಗಿ ಇರಬೇಕು, ಇಲ್ಲಿನ ಜನರು ನೆಮ್ಮದಿಯಿಂದ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಕ್ಷಣವೇ ಕೊಲೆಗಾರರನ್ನು ಬಂಧಿಸಬೇಕು ಕರಾವಳಿಯ ಜನರು ಕೆಂಡವಾಗಿದ್ದಾರೆ.
ಕೈ ನಾಯಕರ ವಿರುದ್ಧ ಜನಾಕ್ರೋಶ..
ಅಲ್ಲದೆ ಈಗಾಗಲೇ ಈ ಘಟನೆಯಿಂದ ಮಂಗಳೂರು ಉದ್ವಿಗ್ನಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪದೇ ಪದೇ ಕರಾವಳಿಯಲ್ಲಿ ಈ ರೀತಿಯ ನೆತ್ತರು ಹರಿಯುತ್ತಿರುವುದು ನಿಜಕ್ಕೂ ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಈ ರೀತಿಯ ಕೊಲೆಗಳು ನಡೆಯುತ್ತಿರುವುದಕ್ಕೆ ಕೈ ನಾಯಕರು ವಿರುದ್ಧ ಜನಾಕ್ರೋಶವೂ ಹೆಚ್ಚಾಗಿದೆ. ಅಲ್ಲದೆ ಸರ್ಕಾರವು ಕರಾವಳಿ ಭಾಗದಲ್ಲಿ ಕೋಮು ನಿಗ್ರಹ ದಳವನ್ನು ರಚಿಸುವುದಾಗಿ ಹೇಳಿದ್ದರೂ ಸಹ ಈ ರೀತಿಯ ಕೊಲೆಗಳು ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.