Saturday, May 24, 2025

Latest Posts

ಪಾಕಿಗಳೊಂದಿಗೆ ಸೆಣಸಾಡಿ ಶೌರ್ಯ : ಗುಂಡಿನ ಚಕಮಕಿಯಲ್ಲಿ ಆಂಧ್ರದ ಯೋಧ ಹುತಾತ್ಮ..!

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರಪ್ರದೇಶ ಮೂಲದ ಯೋಧ ಹುತಾತ್ಮರಾಗಿದ್ದಾರೆ. ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕಲ್ಲಿತಾಂಡ ಗ್ರಾಮದ ಯೋಧ ಮುರಳಿ ನಾಯ್ಕ್ ಪಾಕಿಸ್ತಾನದ ಸೇನೆಯೊಂದಿಗಿನ ಸಂಘರ್ಷದ ವೇಳೆ ವೀರ ಮರಣವನ್ನಪ್ಪಿದ್ದಾರೆ.

ಇನ್ನೂ ಗುರುವಾರ ರಾತ್ರಿ ಭಾರತದ ವಿರುದ್ಧ ಪಾಕಿಸ್ತಾನ ಸೇನೆ ಜಮ್ಮು ಕಾಶ್ಮೀರ ಗಡಿಯಲ್ಲಿ ಗುಂಡಿನ ದಾಳಿ ನಡೆಸಿತು. ಈ ವೇಳೆ ಭಾರತೀಯ ಸೇನೆಯೂ ಪ್ರತಿದಾಳಿ ನಡೆಸಿ ಪಾಕ್‌ಗೆ ತಿರುಗೇಟು ನೀಡಿದೆ. ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮುರಳಿ ನಾಯ್ಕ್ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ. ಮುರುಳಿ ತ್ಯಾಗ, ದೇಶ ಪ್ರೇಮ ಮರೆಯಲಾಗದು ಎಂದು ಅವರು ತಮ್ಮ ಟ್ವಿಟ್ಟರ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನ ಸೇನೆಯು ಆರಂಭಿಸಿದ ಭಾರೀ ಫಿರಂಗಿ ಮತ್ತು ಗುಂಡಿನ ದಾಳಿಯಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ, ಅವರನ್ನು ಚಿಕಿತ್ಸೆಗಾಗಿ ನವದೆಹಲಿಗೆ ವಿಮಾನದಲ್ಲಿ ಸಾಗಿಸುವ ಪ್ರಯತ್ನಗಳು ವಿಫಲವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶಕ್ಕಾಗಿ ತಮ್ಮನ್ನೇ ತಾನೇ ಸಮರ್ಪಿಸಿಕೊಂಡ ಯೋಧ..

25 ವರ್ಷದ ಹುತಾತ್ಮ ಯೋಧ ಮುರಳಿ ನಾಯ್ಕ್‌ ಅವರು, ಮುದವತ್ ಶ್ರೀರಾಮ್ ನಾಯಕ್ ಮತ್ತು ಮುದವತ್ ಜ್ಯೋತಿ ಬಾಯಿ ಅವರ ಏಕೈಕ ಪುತ್ರರಾಗಿದ್ದರು. ಮುರುಳಿ ತಂದೆ ಹಾಗೂ ತಾಯಿ ಇಬ್ಬರೂ ಕೃಷಿ ಕಾರ್ಮಿಕರಾಗಿದ್ದಾರೆ. ಇನ್ನೂ ಶುಕ್ರವಾರ ಬೆಳಿಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ದುಃಖತಪ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ ದೇಶ ಸೇವೆಗಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಂಡ ಮುರಳಿ ನಾಯಕ್ ಅವರ ಧೈರ್ಯ ಮತ್ತು ಸಾಹಸಕ್ಕೆ ನಾವು ವಂದಿಸುತ್ತೇವೆ. ಅವರ ತ್ಯಾಗವನ್ನು ಮರೆಯಲಾಗುವುದಿಲ್ಲ ಎಂದು ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಮುರುಳಿ ಸಾವಿನ ಸುದ್ದಿ ಕೇಳಿ ಸುತ್ತಮುತ್ತಲಿನ ಗ್ರಾಮಗಳ ಜನರು ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಭೇಟಿ ನೀಡಿದ್ದಾರೆ. ಅವರ ಪಾರ್ಥೀವ ಶರೀರವು ಮೇ 10, ಶನಿವಾರ ಬೆಳಿಗ್ಗೆ ಅಂತಿಮ ವಿಧಿವಿಧಾನಗಳಿಗಾಗಿ ಕಲ್ಲಿ ತಾಂಡಾಗೆ ಆಗಮಿಸುವ ನಿರೀಕ್ಷೆಯಿದೆ.

ಪಾಕ್‌ನಿಂದ ವಿಫಲ ದಾಳಿ ಯತ್ನ..

ಗುರುವಾರ, ಪಾಕಿಸ್ತಾನ ಪಡೆಗಳು ದೇಶದ ಉತ್ತರ ಮತ್ತು ಪಶ್ಚಿಮದಲ್ಲಿರುವ 15 ನಗರಗಳಲ್ಲಿನ ಹಲವಾರು ಮಿಲಿಟರಿ ಗುರಿಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಲು ಮಾಡಿದ ಪ್ರಯತ್ನಗಳನ್ನು ವಿಫಲಗೊಳಿಸಿದ್ದೇವೆ ಮತ್ತು ಆ ದೇಶದ ಹಲವಾರು ಸ್ಥಳಗಳಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ಜಾಲವನ್ನು ಗುರಿಯಾಗಿಸಿಕೊಂಡಿದ್ದೇವೆ ಮತ್ತು ಲಾಹೋರ್‌ನಲ್ಲಿರುವ ಒಂದನ್ನು ಪ್ರತಿದಾಳಿಯಲ್ಲಿ ನಾಶಪಡಿಸಿದ್ದೇವೆ ಎಂದು ಭಾರತೀಯ ಸೇನೆ ಹೇಳಿತ್ತು.

ಏಪ್ರಿಲ್ 22 ರಂದು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಪಿಒಕೆದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ದಾಳಿ ಮಾಡಿತ್ತು. ಇದಾದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ.ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಕಾರ್ಯಾಚರಣೆಯಲ್ಲಿ ಕನಿಷ್ಠ 100 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

- Advertisement -

Latest Posts

Don't Miss