ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು, ಬೇಕಾಗಿಯೇ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಇದಕ್ಕೆ ತಕ್ಕ ಪ್ರತ್ತ್ಯುತ್ತರವನ್ನು ಭಾರತೀಯ ಸೇನೆಯು ನೀಡುವ ಮೂಲಕ ರಣಹೇಡಿಗಳ ಪ್ಲಾನ್ ವಿಫಲಗೊಳಿಸುತ್ತಿವೆ. ಈ ನಡುವೆ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ಪಾಕಿಸ್ತಾನ ಭಾರತದ ಗಡಿ ನಿಯಂತ್ರಣ ರೇಖೆಯಾದ್ಯಂತ ಹಾಗೂ ದೇಶದ ಇನ್ನುಳಿದ 26ಕ್ಕೂ ಅಧಿಕ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲು ಮುಂದಾಗಿತ್ತು. ಇದಕ್ಕಾಗಿಯೇ ಪಾಕ್ನಿಂದ ಬಂದ ಡ್ರೋನ್ ಹಾಗೂ ಮಿಸೈಲ್ಗಳನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ಹೊಡೆದುರುಳಿಸಿದೆ.
ಇನ್ನೂ ಈ ಕುರಿತು ನವದೆಹಲಿಯಲ್ಲಿಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಪಾಕಿಸ್ತಾನದ ಕುತಂತ್ರಗಳನ್ನು ಹಾಗೂ ಹಸಿ ಹಸಿ ಸುಳ್ಳುಗಳನ್ನು ಮತ್ತೊಮ್ಮೆ ಬಹಿರಂಗಗೊಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಸೋಫಿಯಾ ಖುರೇಷಿ, ಪಾಕಿಸ್ತಾನ ಸೇನೆಯು ಗಡಿ ಪ್ರದೇಶಗಳಿಗೆ ತನ್ನ ಸೈನಿಕರನ್ನು ನಿಯೋಜಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಪಾಕಿಸ್ತಾನದ ಸೇನಾ ಪಡೆಗಳು ಇಡೀ ಪಶ್ಚಿಮ ಭಾಗದಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಮುಂದುವರೆಸಿವೆ. ಭಾರತೀಯ ಸೇನೆಯ ಚೆಕ್ ಪೋಸ್ಟ್ಗಳನ್ನು ಗುರಿಯಾಗಿಸಿಕೊಂಡು ಯುಸಿಎಪಿ ಡ್ರೋನ್ಗಳು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಫೈಟರ್ ಜೆಟ್ಗಳನ್ನು ಬಳಸಿ ದಾಳಿ ನಡೆಸಲಾಗುತ್ತಿದೆ. ಇದಕ್ಕೆ ನಮ್ಮ ಪಡೆಗಳು ತಕ್ಕ ಉತ್ತರ ನೀಡುತ್ತಿವೆ ಎಂದು ಹೇಳಿದ್ದಾರೆ.
ಪಾಕ್ನ ಬೇಜವಾಬ್ದಾರಿತನಕ್ಕೆ ಸಾಕ್ಷ್ಯಿ..
ಎಲ್ಒಸಿಯಲ್ಲಿ ಭಾರೀ ಗುಂಡಿನ ದಾಳಿ ನಡೆದಿದೆ. ಎಲ್ಒಸಿ ಮತ್ತು ಅಂತರಾಷ್ಟ್ರೀಯ ಗಡಿ ಐಬಿಯಲ್ಲಿ, ಪಾಕಿಸ್ತಾನದ ಫೈಟರ್ ಜೆಟ್ಗಳು 26ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿಗೆ ಪ್ರಯತ್ನಿಸಿದವು. ಭಾರತೀಯ ಸಶಸ್ತ್ರ ಪಡೆಗಳು ಪಾಕ್ನ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಖಂಡನೀಯ ಬೆಳವಣಿಗೆಯಲ್ಲಿ, ಪಾಕಿಸ್ತಾನವು ಶ್ರೀನಗರ, ಅವಂತಿಪುರ ಮತ್ತು ಉಧಂಪುರ್ ವಾಯುನೆಲೆಗಳಲ್ಲಿರುವ ಆಸ್ಪತ್ರೆಗಳು ಮತ್ತು ಶಾಲಾ ಆವರಣಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿರುವುದು ಅವರ ದುರ್ವರ್ತನೆ, ಬೇಜವಾಬ್ದಾರಿಯನ್ನು ತೋರಿಸುತ್ತಿದೆ. ಇಂದು ಬೆಳಗಿನ ಜಾವ 1.40ಕ್ಕೆ ಪಂಜಾಬ್ನ ವಾಯುನೆಲೆಯನ್ನು ನಾಶಪಡಿಸಲು ಪಾಕ್ ಹೈ-ಸ್ಪೀಡ್ ಕ್ಷಿಪಣಿಯನ್ನು ಬಳಸಿದೆ, ಆದರೆ ಅದು ಫೇಲ್ ಎಂದು ಖುರೇಷಿ ತಿಳಿಸಿದ್ದಾರೆ.
ಆರು ಮಿಲಿಟರಿ ಕೇಂದ್ರ ಢಮಾರ್..
ಭಾರತವು ಪಾಕಿಸ್ತಾನದ ಆರು ಮಿಲಿಟರಿ ಕೇಂದ್ರಗಳಾದ ರಫಿಕಿ, ಮುರಿದ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಜುನಿಯಾಗಳ ಮೇಲೆ ಭಾರತೀಯ ಯುದ್ಧ ವಿಮಾನಗಳಿಂದ ವಾಯು-ಉಡಾವಣೆಯ ನಿಖರ ಶಸ್ತ್ರಾಸ್ತ್ರಗಳನ್ನು ಬಳಸಿ ವೈಮಾನಿಕ ದಾಳಿ ನಡೆಸಿ ಈ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಅಲ್ಲದೆ ನಿಖರವಾದ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡು ಪಸ್ರೂರ್ ಮತ್ತು ಸಿಯಾಲ್ಕೋಟ್ನಲ್ಲಿರುವ ಎರಡು ಸ್ಥಳಗಳಲ್ಲಿ ಪಾಕಿಸ್ತಾನದ ರಾಡಾರ್ ತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಎಲ್ಲ ದಾಳಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗಿದೆ..
ಇನ್ನೂ ಪಾಕ್ ಸೇನೆಯು ತನ್ನ ಸೈನ್ಯವನ್ನು ಗಡಿ ಪ್ರದೇಶಗಳತ್ತ ನಿಯೋಜನೆ ಮಾಡುತ್ತಿರವುದು ನಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ಪ್ರತ್ಯುತ್ತರ ನೀಡಲು ಭಾರತೀಯ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಅಲ್ಲದೆ, ಪಾಕಿಸ್ತಾನವು ಭಾರತದ ಪ್ರಮುಖ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿರುವುದಾಗಿ ಸುಳ್ಳು ಹೇಳಿದೆ ಎಂದು ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನಿ ಪಡೆಗಳು ಗಡಿಯಲ್ಲಿ ದಾಳಿಯನ್ನು ರೂಪಿಸುವುದನ್ನು ಗಮನಿಸಲಾಗಿದೆ, ಇದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶವನ್ನು ಸೂಚಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳು ಕಾರ್ಯಾಚರಣೆಯ ಸನ್ನದ್ಧತೆಯನ್ನು ಇನ್ನಷ್ಟು ಹೆಚ್ಚಿನ ಸ್ಥರಕ್ಕೆ ಕೊಂಡೊಯ್ದಿದೆ, ಅಲ್ಲದೆ ಪಾಕಿಗಳ ಎಲ್ಲ ರೀತಿಯ ಪ್ರತಿಕೂಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗಿದೆ. ದಾಳಿಗಳಿಗೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಲಾಗಿದೆ. ಪಾಕಿಸ್ತಾನದ ಕಡೆಯಿಂದ ದಾಳಿ ನಿಂತರೆ, ಭಾರತೀಯ ಸಶಸ್ತ್ರ ಪಡೆಗಳು ಸಹ ದಾಳಿಗೆ ಮುಂದಾಗುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಪಾಕ್ನ ಸುಳ್ಳು ಸುದ್ದಿ ನಂಬಬೇಡಿ..
ಬಳಿಕ ಮಾತನಾಡಿದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ, ಭಾರತೀಯ ಸೇನೆ ವಿರುದ್ದ ಪಾಕಿಸ್ತಾನ ನೀಡುತ್ತಿರುವ ಹೇಳಿಕೆಗಳು ಸುಳ್ಳು, ತಪ್ಪು ಮಾಹಿತಿಯನ್ನು ಹೊಂದಿವೆ. ಅಲ್ಲದೆ ಪೂರ್ವ ನಿಯೋಜಿತ ಪ್ರಚಾರದಿಂದ ಕೂಡಿದೆ, ಇಷ್ಟೇ ಅಲ್ಲದೆ ಪಾಕಿಸ್ತಾನದ ಸುದ್ದಿ ಸಂಸ್ಥೆಗಳು ಇದನ್ನು ಬೆಂಬಲಿಸುತ್ತಿವೆ. ದೇಶದಲ್ಲಿನ ವಿವಿಧ ಮಿಲಿಟರಿ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿ ನಾಶಪಡಿಸಿರುವುದಾಗಿ ಪಾಕ್ ನೀಡಿರುವ ಹೇಳಿಕೆಗಳು ಸಂಪೂರ್ಣ ಸುಳ್ಳಾಗಿದೆ. ಸೂರತ್ಗಢದ ಸಿರ್ಸಾದಲ್ಲಿರುವ ವಾಯುಪಡೆಯ ನೆಲೆಗಳು ನಾಶವಾಗಿವೆ ಮತ್ತು ಅದಮ್ಪುರದಲ್ಲಿರುವ S-400 ನೆಲೆಯ ಕುರಿತು ನೀಡಿರುವ ಹೇಳಿಕೆಗಳೂ ಸುಳ್ಳು ಎಂದು ವಿದೇಶಾಂಗ ಕಾರ್ಯದರ್ಶಿ ಮಿಸ್ತ್ರಿ ವಾಗ್ದಾಳಿ ನಡೆಸಿದ್ದಾರೆ.