Thursday, June 5, 2025

Latest Posts

ಘೋಷಣೆ, ಆಕ್ರೋಶ.! ಕೆನಾಲ್ ಗಲಾಟೆ! ಬ್ಲ್ಯಾಕ್ ಮೇಲ್ ತಂತ್ರವನ್ನ ಬಿಚ್ಚಿಡ್ತೀನಿ!: ಡಿ.ಕೆ.ಶಿವಕುಮಾರ್

- Advertisement -

Political News: ಹೇಮಾವತಿ ನಾಲಾ ಜೀಡಣೆ ಯೋಜನೆ ವಿರುದ್ಧ ಹೋರಾಟಗಾರರ ಬ್ಲ್ಯಾಕ್ ಮೇಲ್, ಬೇಡಿಕೆ ಏನೆಂಬುವುದನ್ನು ಸಮಯ ಬಂದಾಗ ಎಲ್ಲ ಬಹಿರಂಗಪಡಿಸುತ್ತೇನೆ. ಕಾನೂನು ಕೈಗೆತ್ತಿಕೊಂಡು ಸರ್ಕಾರವನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆ ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ. ಪ್ರತಿಭಟನಾನಿರತರ ಬ್ಲ್ಯಾಕ್‌ಮೇಲ್‌, ಬೇಡಿಕೆ ಏನೆಂಬುದನ್ನು ಎಲ್ಲ ಬಯಲಿಗೆ ತರುತ್ತೇನೆ. ಕಳೆದ 10ಕ್ಕೂ ಹೆಚ್ಚಿನ ವರ್ಷಗಳಲ್ಲಿ ಕುಣಿಗಲ್‌ ತಾಲೂಕಿನ ಹೇಮಾವತಿ ನೀರಿನ ಪಾಲಿನಲ್ಲಿ ಶೇಕಡಾ 92ರಷ್ಟು ಬಳಕೆಯಾಗದೆ ಅಲ್ಲಿನ ಜನರಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಅದನ್ನು ಬಿಟ್ಟು ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುತ್ತಿದ್ದೇವೆ ಎಂಬುದು ಸುಳ್ಳು ಎಂದು ಹೋರಾಟಗಾರರ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.

ಈ ಯೋಜನೆಯನ್ನ ರಾಜಕೀಯಕ್ಕಾಗಿ ವಿರೋಧಿಸಲಾಗುತ್ತಿದೆ..

ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆಯನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸಲಾಗುತ್ತಿದೆ. ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಆಗಿನ ತುಮಕೂರಿನ ಉಸ್ತುವಾರಿ ಸಚಿವರಾಗಿದ್ದಾಗ ಮಾಧುಸ್ವಾಮಿ ಈ ಯೋಜನೆ ತಡೆ ಹಿಡಿದಿದ್ದರು. ಆರಂಭದಲ್ಲಿ ಈ ಯೋಜನೆ ವೆಚ್ಚ 600 ಕೋಟಿ ರೂಪಾಯಿ ಇತ್ತು. ಈಗ ಅದು 900ರಿಂದ 1 ಸಾವಿರ ಕೋಟಿ ರೂಪಾಯಿಗೂ ಹೆಚ್ಚಳವಾಗುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೇಮಾವತಿ ನೀರಿನ ಅಗತ್ಯವಿಲ್ಲ..!

ಯೋಜನೆ ವಿಚಾರವಾಗಿ ಬಿಜೆಪಿ ಶಾಸಕರಿಗೆ ಅಸೂಯೆ ಶುರುವಾಗಿದೆ. ಅದಕ್ಕಾಗಿಯೇ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಕಳೆದ 10ರಿಂದ 12 ವರ್ಷಗಳಿಂದ ಕುಣಿಗಲ್‌ ತಾಲೂಕಿಗೆ ಅದರ ಪಾಲಿನ ನೀರು ತಲುಪಿಲ್ಲ. ಹೀಗಾಗಿ ಯೋಜನೆ ಕೈಗೊಳ್ಳಲಾಗಿದೆ. ಯೋಜನೆಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೇಮಾವತಿ ನೀರಿನ ಅಗತ್ಯವಿಲ್ಲ. ಆ ಜಿಲ್ಲೆಗೆ ಪ್ರತ್ಯೇಕ ನೀರಾವರಿ ಯೋಜನೆ ರೂಪಿಸಲಾಗಿದೆ. ಅಲ್ಲದೆ, ತುಮಕೂರು ಜಿಲ್ಲೆಯ ಕೆಲ ಭಾಗ ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿದೆ. ಆದರೂ, ಕಾವೇರಿ ಜಲಾನಯನದ ಹೇಮಾವತಿ ನೀರು ನೀಡಲಾಗುತ್ತಿದೆ. ಅಲ್ಲದೆ, ಕುಣಿಗಲ್‌ ತಾಲೂಕಿಗೆ ಹೇಮಾವತಿ ನೀರಿನಲ್ಲಿ 3.3 ಟಿಎಂಸಿ ನೀರು ಪಾಲು ಸಿಕ್ಕಿದೆ. ಅದನ್ನು ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬ್ಲ್ಯಾಕ್​ ಮೇಲ್ ಮಾಡುವ ಹೋರಾಟಗಾರರಿಗೆ ನಮ್ಮ ಯೋಜನೆ ಅರ್ಥ ಆಗುವುದಿಲ್ಲ..

ಅಷ್ಟಕ್ಕೂ ನಾವು ಇಲ್ಲಿ ಯಾವುದೇ ಅಂತಾರಾಜ್ಯ ಸಂಘರ್ಷ ಮಾಡುತ್ತಿದ್ದೇವೆಯೇ..? ಇಲ್ಲವಲ್ಲ, ನಿಮಗಿಂತ ಹೆಚ್ಚು ಶಬ್ಧ ಬಳಸುವ ಶಕ್ತಿ, ಸಾಮರ್ಥ್ಯ ನನಗೂ ಇದೆ. ಆದರೆ ಅಗತ್ಯವಿಲ್ಲ. ಇನ್ನೂ ಕುಣಿಗಲ್ ಜನ ಬೇರೆಯವರೋ..? ಅವರು ತುಮಕೂರು ಭಾಗದವರಲ್ಲವೇ..? ನಾವು ಎತ್ತಿನ ಹೊಳೆ ಯೋಜನೆಯಿಂದ ತುಮಕೂರಿನ ಹಲವು ಕೆರೆಗಳನ್ನು ತುಂಬಿಸುತ್ತಿಲ್ಲವೆ..? ಕೋಲಾರ ಹಾಗೂ ಚಿಕ್ಕಬಳ್ಳಾಪುರ ಮಾತ್ರ ನೀರು ಪೊರೈಸಲು ಈ ಯೋಜನೆಯನ್ನು ಆರಂಭಿಸಲಾಗಿತ್ತು. ತುಮಕೂರಿಗೂ ನೀರು ನೀಡುತ್ತಿಲ್ಲವೆ..? ಬ್ಲ್ಯಾಕ್​ ಮೇಲ್ ಮಾಡುವ ಹೋರಾಟಗಾರರಿಗೆ ಇದು ಅರ್ಥ ಆಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದರಲ್ಲಿ ಯಾರೂ ರಾಜಕೀಯ ಮಾಡಬೇಡಿ..

ಈ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ಶಾಸಕರಾದ ಕೃಷ್ಣಪ್ಪ, ಸುರೇಶ್‌ ಗೌಡ ಅವರು ಈ ಹಿಂದೆ ತಾಂತ್ರಿಕ ಸಮಿತಿ ರಚಿಸುವಂತೆ ಕೇಳಿದ್ದರು. ತಾಂತ್ರಿಕ ಸಮಿತಿ ರಚಿಸಿ, ಅದರ ವರದಿಯಂತೆ ಲಿಂಕ್‌ ಕೆನಾಲ್‌ ಯೋಜನೆ ಕೈಗೊಳ್ಳಲಾಗಿದೆ. ಈಗ ಯೋಜನೆಗೆ ಅಡಚಣೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಪ್ರತಿಭಟನಾನಿರತ ಶಾಸಕರು ಬಳಸುತ್ತಿರುವ ಪದಗಳಿಗಿಂತ ಹೆಚ್ಚಿನ ಪದ ಬಳಕೆ ನಾನೂ ಬಳಸಬಲ್ಲೇ ಆ ಸಾಮರ್ಥ್ಯ ನನಗೂ ಇದೆ. ಸಮಯ ಬಂದಾಗ ನಾನು ಉತ್ತರ ನೀಡುತ್ತೇನೆ. ಈಗ ಜನರ ಹಿತ ಕಾಯಬೇಕಿದೆ ಎಂದು ಹೋರಾಟಗಾರರ ಮೇಲೆ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಗೂ ಸ್ವಾಮೀಜಿಗಳಿಗೂ ಏನು ಸಂಬಂಧ..?

ಇನ್ನೂ ಪ್ರತಿಭಟನೆ ಹೆಸರಲ್ಲಿ ಯಾರೇ ಕಾನೂನು ಕೈಗೆತ್ತಿಕೊಂಡರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಕಾನೂನು ಕೈಗೆತ್ತಿಕೊಂಡು ಸರ್ಕಾರವನ್ನು ಬೆದರಿಸಲು ಸಾಧ್ಯವಿಲ್ಲ. ಅವರ ಬೇಡಿಕೆಗಳನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ. ನನಗೆ ಎಲ್ಲವೂ ತಿಳಿದಿದೆ. ಪ್ರತಿಭಟನೆಗೆ ಅನಗತ್ಯವಾಗಿ ಸ್ವಾಮೀಜಿಗಳನ್ನು ಕರೆತರಲಾಗುತ್ತಿದೆ. ಅವರಿಗೂ ಇದಕ್ಕೂ ಏನು ಸಂಬಂಧ ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಕಳೆದ ವಾರವಷ್ಟೇ ತುಮಕೂರಿನ ಗುಬ್ಬಿ ಬಳಿ ಈ ಯೋಜನೆ ವಿರೋಧಿಸಿ ಸಾವಿರಾರು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಬಳಿಕ ರೈತರ ತೀವ್ರ ಆಕ್ರೋಶಕ್ಕೆ ಮಣಿದು ಖುದ್ದು ಸಿಎಂ ಸಿದ್ದರಾಮಯ್ಯ ಅವರು ಯೋಜನೆಯ ಬಗ್ಗೆ ಮರು ಪರಿಶೀಲನೆ ನಡೆಸುವುದಾಗಿ, ಅಲ್ಲಿಯವರೆಗೂ ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಬಳಿಕ ರೈತರು ಜೆಸಿಬಿ ಮೂಲಕ ಕೆನಾಲ್​ಗೆ ಮಣ್ಣು ಹಾಕಿ ಯೋಜನೆಯ ವಿರುದ್ಧ ತಮ್ಮ ಖಂಡನೆ ವ್ಯಕ್ತಪಡಿಸಿದ್ದರು. ಇದಾದ ಬಳಿಕ ರಾಜ್ಯ ಸರ್ಕಾರ ಇಬ್ಬರು ಶಾಸಕರು, ಸ್ವಾಮೀಜಿಗಳು ಸೇರಿದಂತೆ ಒಟ್ಟು 11 ಜನರ ಮೇಲೆ ಎಫ್​ಐಆರ್ ದಾಖಲಿಸಿತ್ತು.

- Advertisement -

Latest Posts

Don't Miss