ಪುನೀತ್ ರಾಜಕುಮಾರ್ ಅಗಲಿಕೆಯಿಂದ ಕನ್ನಡ ಚಿತ್ರರಂಗ ಇನ್ನೂ ಚೇತರಿಸಿಕೊಂಡಿಲ್ಲ. ಅಪ್ಪು ಅಗಲಿಕೆಯ ಬಳಿಕ ಅವರ ಸಿನಿಮಾಗಳ ಮೂಲಕ ಅವರನ್ನು ಮತ್ತೆ ಕಣ್ತುಂಬಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಅಪ್ಪು ಅಗಲಿಕೆಯ ಬಳಿಕ ಬಿಡುಗಡೆಯಾದ ‘ಜೇಮ್ಸ್’ ಸಿನಿಮಾವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು ಇದಕ್ಕೆ ಉದಾಹರಣೆಯಾಗಿದೆ.
ಜೇಮ್ಸ್ ಸಿನಿಮಾದ ಬಳಿಕ ಮತ್ತೊಮ್ಮೆ ಪುನೀತ್ ರಾಜಕುಮಾರ್ ಅವರನ್ನು ತೆರೆಯ ಮೇಲೆ ಯಾವಾಗ ನೋಡುವೆವೊ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿ ಒಂದು ಹೊರಬಿದ್ದಿದೆ.
ಪುನೀತ್ ರಾಜಕುಮಾರ್ ರವರು ನಿರ್ಮಾಣ ಮಾಡಿ, ಸ್ವತಃ ತಾವೇ ಕಾಣಿಸಿಕೊಂಡಿರುವ ‘ಗಂಧದಗುಡಿ’ ಡಾಕ್ಯುಮೆಂಟರಿ ಸಿನಿಮಾ ನವೆಂಬರ್ ನಲ್ಲಿ ತೆರೆಗೆ ಬರಲಿದೆ.
ಹಲವು ಉತ್ತಮ ಹವ್ಯಾಸಗಳನ್ನು ಹೊಂದಿದ ಪುನೀತ್ ರಾಜಕುಮಾರ್ ಅವರಿಗೆ ಪ್ರವಾಸದ ಹವ್ಯಾಸವು ಕೂಡ ಇತ್ತು. ಕರ್ನಾಟಕದ ಪರಿಸರ ಸಂಪತ್ತಿನ ಬಗ್ಗೆಯೂ ಕೂಡ ಗೌರವ ಇದ್ದ ಪುನೀತ್ ರವರು, ರಾಜ್ಯದ ಪ್ರಕೃತಿ ಸಂಪತ್ತನ್ನು, ರಾಜ್ಯದ ನೈಸರ್ಗಿಕ ಭಿನ್ನತೆಯನ್ನು ಪರಿಚಯಿಸುವ ದೃಷ್ಟಿಯಿಂದ ರಾಜ್ಯದ ಹಲವು ಪ್ರದೇಶಗಳನ್ನು ಅಡ್ಡಾಡಿ ಡಾಕ್ಯುಮೆಂಟರಿ ಸಿನಿಮಾ ಮಾಡಿದ್ದು ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಟ್ಟಿದ್ದಾರೆ.
ಈ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಬಾರಿ ವೈರಲ್ ಆಗಿದೆ. ಈ ಸಿನಿಮಾಗೆ ಪಿ ಆರ್ ಕೆ ಬಂಡವಾಳ ಹೂಡಿದ್ದು, ಸಿನಿಮಾವನ್ನು ಅವರೇ ಬಿಡುಗಡೆ ಮಾಡಲಿದ್ದಾರೆ. ಪುನೀತ್ ಅಗಲಿಕೆಯ ಬಳಿಕವೂ ಕೂಡ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಪಿ ಆರ್ ಕೆಯ ಪ್ರಸ್ತುತ ಮಾಲಕಿ, ನಿರ್ವಾಹಕಿ ಅಶ್ವಿನಿ ಪುನೀತ್ ರಾಜಕುಮಾರ್ ರವರು ನಿರ್ಧರಿಸಿದ್ದಾರೆ.
ಇನ್ನು ಈ ಸಿನಿಮಾವನ್ನು ನವೆಂಬರ್ ನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ಕನ್ನಡ ರಾಜ್ಯೋತ್ಸವದ ದಿನದಂದು ಸಿನಿಮಾ ತೆರೆಗೆ ಬಂದರು ಅಚ್ಚರಿ ಇಲ್ಲ.
ಇದಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ನಿಧನವಾಗುವ ಮುನ್ನ ನಟಿಸಿದ್ದ ಇನ್ನೊಂದು ಸಿನಿಮಾ ಸಹ ತೆರೆಗೆ ಬರಬೇಕಿದೆ. ಅದುವೇ ಡಾರ್ಲಿಂಗ್ ಕೃಷ್ಣ ನಟಿಸಿರುವ ‘ಲಕ್ಕಿ ಮ್ಯಾನ್’ ತಮಿಳಿನ ‘ಓ ಮೈ ಕಡವುಲೇ’ ಸಿನಿಮಾದ ರಿಮೇಕ್ ಆಗಿರುವ ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ದೇವರ ಪಾತ್ರದಲ್ಲಿ ನಟಿಸಿದ್ದಾರೆ.