Haveri News: ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು. ಅದರಂತೆ ನಿನ್ನೆ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನು ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಸಲ್ಲಿಕೆ ವಿಚಾರದ ಬಗ್ಗೆ ಹಾವೇರಿಯಲ್ಲಿ ಶಾಸಕ ಬಸವರಾಜ್ ಶಿವಣ್ಣನವರ್ ಪ್ರತಿಕ್ರಿಯಿಸಿದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ನಾಗೇಂದ್ರ ರಾಜೀನಾಮೆ ವಿಚಾರ ಸಂತೋಷ ಪಡುವಂತದ್ದಲ್ಲ. ಒಬ್ಬ ಒಳ್ಳೆಯ ಜನಪ್ರತಿನಿಧಿ ನಾಗೇಂದ್ರ – 4 ಬಾರಿ ಆಯ್ಕೆಯಾದವರು. ಕೋರ್ಟ್ ಎಲ್ಲೂ ನಾಗೇಂದ್ರರನ್ನು ಆರೋಪಿ ಅಂತ ಹೇಳಿಲ್ಲ. ವಿರೋಧ ಪಕ್ಷದವರು ಆರೋಪ ಮಾಡಿ ರಾಜೀನಾಮೆಗೆ ಆಗ್ರಹಿಸಿದ್ದರು. ಹಾಗಾಗಿ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಕೊಡುವಂತಹ ಸನ್ನಿವೇಶ ಕೂಡ ಇರಲಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಅಂತ ರಾಜೀನಾಮೆ ನೀಡಿದ್ದಾರೆ. ನಾಗೇಂದ್ರ ರಾಜೀನಾಮೆ ಬಳಿಕ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆ ಇದೆ. ನಾನು ಮಂತ್ರಿ ಮಂಡಲ ಸೇರ್ಪಡೆಗೆ ಅಪೇಕ್ಷೆ ಪಟ್ಟಿದ್ದು ನಿಜ. ಸಿದ್ದರಾಮಯ್ಯ ಸಾಹೇಬರು ನನ್ನ ಪರವಾಗಿ ಮಾತನಾಡಿದ್ದಾರೆ.
ಹೈಕಮಾಂಡ್ ಸಂದಿಗ್ಧ ಸ್ಥಿತಿಯಲ್ಲಿ ಏನು ನಿರ್ಧಾರ ಮಾಡುತ್ತೋ ಅದಕ್ಕೆ ಬದ್ಧ. ನನಗೆ ಈಗಲೂ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಸಮುದಾಯವಾರು ಆಧಾರದ ಮೇಲೆ ನಿರ್ಧಾರಕ್ಕೂ ಬದ್ಧತೆ ನೀಡಿರುವ ಬಸವರಾಜ್ ಅವರು, ಹೈಕಮಾಂಡ್ ನಿರ್ಧಾರವೇ ಅಂತಿಮ ಅಂತಾ ಸ್ಪಷ್ಟನೆ ನೀಡಿದ್ದಾರೆ.
