ಬಿಜೆಪಿಯವರು 1 ಲಕ್ಷ ಕೋಟಿ ಸಾಲ ಇಟ್ಟು ಹೋಗಿದ್ದರು. ಆದ್ರೀಗ ಸತ್ಯ ಹರಿಶ್ಚಂದ್ರರಂತೆ ಮಾತಾಡ್ತಿದ್ದಾರೆ: ರಾಮಲಿಂಗಾರೆಡ್ಡಿ

Hubli News: ಹುಬ್ಬಳ್ಳಿ: ಐದು ವರ್ಷ ನಾನೇ ಇರ್ತೇನೆ ಅಂತ ಸಿಎಂ ಹೇಳಿದ್ದಾರೆ. ಹೀಗಾಗಿ ಅದರ ಬಗ್ಗೆ ನಮ್ಮನ್ನು ಏನೂ ಕೇಳಬೇಡಿ. ಮಲ್ಲಿಕಾರ್ಜುನ ಖರ್ಗೆಯವರು ಎಲ್ಲಿಯೂ ಮಾತನಾಡಬೇಡಿ ಅಂತ ಹೇಳಿದ್ದಾರೆ. ಹೀಗಾಗಿ ಸಿಎಂ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ನಗರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸುರ್ಜೇವಾಲರು ನಮ್ಮನ್ನು ಕೂಡಾ ಕರೆದಿದ್ದರು. ಶಾಸಕರು ಹೇಳಿದ ಅಹವಾಲು ಆಧಾರದ ಮೇಲೆ ಕರೆದು ಮಾತನಾಡಿದ್ದಾರೆ. ಕ್ಯಾಬಿನೆಟ್ ಪುನರ್ ರಚನೆ ಬಗ್ಗೆ ಗೊತ್ತಿಲ್ಲ ಎಂದರು.

ಬಿಜೆಪಿಯವರು ನಮ್ಮ ಸಾಧನಾ ಸಮಾವೇಶ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಸಾಧನೆ ಮಾಡಿದ್ದೇವೆ, ಸಮಾವೇಶ ಮಾಡ್ತೇವೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಅವರ‌ ಸಾಧನೆ ಶೂನ್ಯವಾಗಿತ್ತು. ಹೀಗಾಗಿ ಅವರು ಸಾಧನಾ ಸಮಾವೇಶ ಮಾಡಿಲ್ಲ ಎಂದರು.

ಬಿಜೆಪಿಯವರು ಒಂದು ಲಕ್ಷ ಕೋಟಿ ಸಾಲ ಇಟ್ಟು ಹೋಗಿದ್ದರು. ಆದ್ರೆ ಇದೀಗ ಸತ್ಯ ಹರಿಶ್ಚಂದ್ರ ರಂತೆ ಮಾತಾಡ್ತಿದ್ದಾರೆ ಎಂದ ಅವರು, ಆಗಸ್ಟ್ 5ಕ್ಕೆ ಸಾರಿಗೆ ನಿಗಮಗಳ ಒಕ್ಕೂಟದಿಂದ ಹೋರಾಟ‌ ವಿಚಾರದ ಕುರಿತು ಮಾತನಾಡಿ, ಸಿಎಂ, ಅವರನ್ನು ಕರೆದು ಮಾತಾಡ್ತಾರೆ. ಇನ್ನು ಹದಿನೇಳು ದಿನ ಇದೆ, ಸಮಸ್ಯೆ ಬಗೆಹರಿಸ್ತಾರೆ. ಶಕ್ತಿ ಯೋಜನೆ ಬ್ಯಾಲೆನ್ಸ್ ಸ್ವಲ್ಪ ಇದೆ, ಎರಡು ಸಾವಿರ ಕೋಟಿ ಸಾಲ ಕೊಡಿಸಿದ್ದಾರೆ. ದೇವಸ್ಥಾನದ ಒಂದು ರೂಪಾಯಿ ಹಣ ಸರ್ಕಾರಕ್ಕೆ ಬರಲ್ಲ. ಬೇರೆ ದೇವಸ್ಥಾನಕ್ಕೆ ಕೂಡಾ ಕೊಡಲು ಬರೋದಿಲ್ಲ. ಕೆಲವರು ಮಸೀದಿಗೆ ಕೊಟ್ಟರು, ಸರ್ಕಾರಕ್ಕೆ ತಗೊಂಡ್ರು ಅಂತ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

About The Author