ಬೆಂಗಳೂರು : ರಾಜ್ಯದಲಿ ವೀರಶೈವ ಹಾಗೂ ಲಿಂಗಾಯತರ ನಡುವೆ ಜಗಳ ಹಚ್ಚಿದ ಸಿದ್ದರಾಮಯ್ಯ ಈಗ ಅದರ ಬಗ್ಗೆ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಜಾತಿ ಗಣತಿ ವರದಿಯ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಈ ಮೂಲಕ ಜಾತಿ , ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿರುವ ಅವರು, ಕಾಂತರಾಜ್ ವರದಿಯನ್ನ ಸಿದ್ದರಾಮಯ್ಯ ಅನುಷ್ಠಾನಕ್ಕೆ ತರಲು ಸಾಧ್ಯವೇ ಇಲ್ಲ. ಅವರಿಗೆ ಹಿಂದುಳಿದ ಸಮುದಾಯಕ್ಕೆ ನಾಯ್ಯ ಕೊಡಿಸುವ ಬದ್ಧತೆಯಿಲ್ಲ, ಅವರು ರಾಜ್ಯದಲ್ಲಿ ಜಾತಿಗಳನ್ನು ಒಡೆಯುತ್ತಿದ್ದಾರೆ. ಕಾಂತರಾಜ ಆಯೋಗದ ಜಾತಿ ಗಣತಿ ವರದಿಯ ಹೆಸರಲ್ಲಿ ರಾಜ್ಯಕ್ಕೆ ಅವರು ಕೊಳ್ಳಿಯ ಇಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಸಿದ್ದರಾಮಯ್ಯ ಬುರ್ಖಾ ಹಾಕಿಕೊಂಡು ಓಡಾಡುವ ಸ್ಥಿತಿ ಬಂದಿದೆ..
ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾಕಾ ಪಾಟೀಲ್ ನಿಮಗೂ ಫ್ರೀ ಎಂದು ಹೇಳಿದ್ರು. ಸಿಎಂ ಆದ್ಮೇಲೆ ಕಾಕಾ ಪಾಟೀಲ್ ಅಲ್ಲ, ಸಿದ್ದರಾಮಯ್ಯಗೆ ಬುರ್ಖಾ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಆರ್ಥಿಕ ಸ್ಥಿತಿ ಕುಸಿತ ಕಂಡಿದೆ, ಈಗ ಆ ಯೋಜನೆಗಳಿಗೆಯೇ ಹಣವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗೆ 50 ಸಾವಿರ ರೂಪಾಯಿ ನೀಡುವ ರಾಜ್ಯ ಸರ್ಕಾರಕ್ಕೆ ಹಿಂದು ಹೆಣ್ಣು ಮಕ್ಕಳು ಕಾಣುವುದಿಲ್ಲವೇ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ರಾಜ್ಯದ ಜನರ ಪಾಲಿಗೆ ಸರ್ಕಾರ ಇದ್ದೂ ಸತ್ತಂತೆ..
ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಈ ವಿಚಾರವನ್ನು ಅವರದೇ ಪಕ್ಷದ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ. ಹೊರತು ಇದನ್ನು ಬಿಜೆಪಿ ಹೇಳಿಲ್ಲ, ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಅವರು ಕಳೆದ 20 ತಿಂಗಳಿನಿಂದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ ಎಂದು ಆರೋಪ ಮಾಡಿದ್ದಾರೆ. ಶಾಸಕ ರಾಜು ಕಾಗೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ ಅಂತ ಹೇಳಿದ್ದಾರೆ. ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದಾರೆ, ಜನ ಸಾಮಾನ್ಯರ ಪಾಲಿಗೆ ಈ ಸರ್ಕಾರ ಇದ್ದೂ ಸತ್ತಂತಾಗಿದೆ. ಆಡಳಿತ ಪಕ್ಷದವರೇ ಹೀಗೆ ಮಾತಾಡಿಕೊಳ್ಳುತ್ತಿದ್ದಾರೆ ಅಂದ್ರೆ ಸರ್ಕಾರದ ಸ್ಥಿತಿ ಹೀಗಾಗಬಾರದಿತ್ತು ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಯಾವುದೇ ಚುನಾವಣೆ ಸಲುವಾಗಿ ಯಾತ್ರೆ ಮಾಡ್ತಿಲ್ಲ..!
ರಾಜ್ಯದಲ್ಲಿ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ಅದಕ್ಕೋಸ್ಕರ ನಾವು ಜನಾಕ್ರೋಶ ಯಾತ್ರೆ ಮಾಡುತ್ತಿಲ್ಲ. ಯಾವುದೇ ಚುನಾವಣೆ ಸಲುವಾಗಿ ಈ ಹೋರಾಟ ನಡೆಸುತ್ತಿಲ್ಲ. ರಾಜ್ಯಾಧ್ಯಕ್ಷರ ವಿಜಯೋತ್ಸವಕ್ಕೋಸ್ಕರ ಮಾಡ್ತಿಲ್ಲ. ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಗಾಳಿಯಲ್ಲಿ ತೂರುವ ಕೆಲಸ ಮಾಡಿದೆ. ಸಿದ್ದರಾಮಯ್ಯ ಕೇವಲ ಒಂದು ಸಮುದಾಯಕ್ಕೆ ಸಿಎಂ ಆಗಿ, ಹಿಂದೂ ವಿರೋಧಿಗಳಾಗಿದ್ದಾರೆ. ಅಹಿಂದ ಹೆಸರು ಹೇಳಿ ದಲಿತರ ಹಣ ಲೂಟಿ ಮಾಡಿದ್ದಾರೆ. ಕೇವಲ ಅಲ್ಪಸಂಖ್ಯಾತರ ಹಿಂದೆ ಸಿದ್ದರಾಮಯ್ಯ ಹೊರಟಿದ್ದಾರೆ. ರಾಜ್ಯದಲ್ಲಿ ತನ್ನ ಕುರ್ಚಿ ಭದ್ರ ಮಾಡಿಕೊಳ್ಳಲು ಕಂದಕ ಸೃಷ್ಟಿ ಮಾಡಲು ಸಿಎಂ ಮುಂದಾಗಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಹರಿಹಾಯ್ದಿದ್ದಾರೆ.