Monday, May 12, 2025

Latest Posts

ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ವರದಿ ವಿಚಾರ ತಂದಿಲ್ಲ : ಬಿಜೆಪಿಗೆ ಯತೀಂದ್ರ ಕೌಂಟರ್..‌

- Advertisement -

ಮೈಸೂರು : ನಾವು ಯಾವುದೇ ಕಾರಣಕ್ಕೂ ಕುರ್ಚಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಜಾತಿ ಗಣತಿ ವರದಿಯನ್ನು ಮುನ್ನಲೆಗೆ ತಂದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡುವ ಮೂಲಕ ತಂದೆಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಅವರು, ಕುರ್ಚಿಗೂ, ಈ ಜಾತಿ ಗಣತಿ ವರದಿಗೂ ಯಾವುದೇ ಸಂಬಂಧವಿಲ್ಲ. ಈ ವರದಿಯಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಇದರಿಂದ ಆಯಾ ಜಾತಿಗಳಲ್ಲಿರುವ ಜನಸಂಖ್ಯೆ, ಆರ್ಥಿಕ ಹಾಗೂ ಸಾಮಾಜಿಕ ವಿವರಗಳ ಜೊತೆಗೆ ಔದ್ಯೋಗಿಕ ಸ್ಥಿತಿಗತಿಯ ಮಾಹಿತಿ ದೊರೆಯಲು ಸಾಧ್ಯವಾಗುತ್ತದೆ. ಇದರ ಆಧಾರದ ಅನ್ವಯ ಮೀಸಲಾತಿಯ ಪ್ರಮಾಣವನ್ನು ತೀರ್ಮಾನಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಕುರ್ಚಿಗೆ ಆಪತ್ತೆಲ್ಲಿ ಬಂದಿದೆ? ಸುರಕ್ಷಿತವಾಗಿದೆ. ಇಳಿಸಬೇಕೆಂದು ಯಾರಾದರೂ ಹೇಳಿದ್ದಾರಾ? ನಮ್ಮ ಶಾಸಕರು ಮತ್ತು ಹೈಕಮಾಂಡ್‌ನವರು ಸಿ.ಎಂ. ಪರ ನಿಂತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅನ್ಯಾಯ ಮಾಡುವ ಯೋಚನೆ ಅದೊಂದು ಪೂರ್ವಾಗ್ರಹ ಪೀಡಿತ..

ಈ ಜಾತಿ ಗಣತಿಯ ವರದಿಯಿಂದ ರಾಜ್ಯದ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿರುವ ಮೀಸಲಾತಿಯ ಏರಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಸರ್ಕಾರ ಗೆಲುವು ಸಾಧಿಸುತ್ತದೆ. ಇದರಿಂದ ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯದವರಿಗೂ ಸಹಕಾರಿಯಾಗಲಿದೆ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಪ್ರಬಲ ಜಾತಿಗಳಿಗೆ ಅನ್ಯಾಯ ಮಾಡುತ್ತಾರೆಂಬುದು ಅದೊಂದು ಪೂರ್ವಾಗ್ರಹ ಪೀಡಿತವಾದ ವಿಚಾರವಾಗಿದೆ. ಆದರೆ ಗಣತಿಯಿಂದ ಯಾರಿಗೂ ಅನ್ಯಾಯವಾಗದಂತೆ ಆಯಾ ಜಾತಿಯ ಜನಸಂಖ್ಯೆಗೆ ಅನುಸಾರವಾಗಿ ಮೀಸಲಾತಿ ದೊರೆಯುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಜಾತಿ ಜನಗಣತಿ ಎಂದು ಕರೆಯಲ್ಪಡುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆಯ ಅನುಷ್ಠಾನವು ಪ್ರಬಲ ಸಮುದಾಯಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂಬ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿವೆ ಎಂದು ಜಾತಿ ಗಣತಿ ಕುರಿತು ಇರುವ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ.

ಎಲ್ಲರಿಗೂ ಮೀಸಲಾತಿ ದೊರೆಯಲಿದೆ..!

ಹಿಂದಿನ ಬಿಜೆಪಿಯವರ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2ಎ ಮತ್ತು 2ಬಿ ವರ್ಗಗಳಿಗೆ ಮೀಸಲಾತಿಯನ್ನು ಶೇಕಡಾ 2 ರಷ್ಟಕ್ಕೆ ಏರಿಕೆಯಾಗಿದೆ. ಅದೇ ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಆಯೋಗವು ಅದನ್ನು ಶೇಕಡಾ 2ಕ್ಕೆ ಹಾಗೂ ಹಿಂದುಳಿದ ವರ್ಗಕ್ಕೆ ಶೇಕಡಾ 32 ರಿಂದ 51ಕ್ಕೆ ಏರಿಕೆ ಮಾಡಲು ಶಿಫಾರಸು ನೀಡಿದೆ. ರಾಜ್ಯದಲ್ಲಿನ ಜಾತಿ ಗಣತಿ ವರದಿಯಲ್ಲಿನ ವಿಚಾರಗಳಿಗೆ ಅನುಸಾರವಾಗಿ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಅವರ ಜನಸಂಖ್ಯೆಯ ಆಧಾರದ ಮೇಲೆ ಶೇಕಡಾ 6ರಷ್ಟು ಮೀಸಲಾತಿ ದಕ್ಕಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ರಾಜೀನಾಮೆ ನೀಡುವ ಪ್ರಮೇಯವೇ ಬರುವುದಿಲ್ಲ..

ಮುಡಾ ಪ್ರಕರಣದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದಾಗಲೂ ಈ ವರದಿಯನ್ನು ತಂದಿರಲಿಲ್ಲ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಗೂ, ಜಾತಿ ಗಣತಿಗೂ ಯಾವುದೇ ಸಂಬಂಧವಿಲ್ಲ. ಇಡಿ ಅಧಿಕಾರಿಗಳು ನಮಗೆ ಬೇಕೆಂದು ಉದ್ದೇಶ ಪೂರ್ವಕವಾಗಿಯೇ ಹಿಂಸೆ ನೀಡುತ್ತಿದ್ದಾರೆ. ಈ ಬಗ್ಗೆ ನಾವು ಮುಂದಿನ ನ್ಯಾಯಾಲಯದಲ್ಲಿ ಮತ್ತೆ ಅಪೀಲು ದಾಖಲಿಸುತ್ತೇವೆ. ಒಂದು ವೇಳೆ ಈ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಿದರೂ ಅದರಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಮೇಯವೇ ಬರುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಶೋಕ್‌ ಆರೋಪದಲ್ಲಿ ಹುರುಳಿಲ್ಲ..

ಜಾತಿ ಗಣತಿ ವರದಿಯ ಮೂಲ ಪ್ರತಿ ಸಿದ್ದರಾಮಯ್ಯ ಮನೆಯಲ್ಲಿ ಇದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಆರ್.ಅಶೋಕ್‌ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ, ಜಾತಿ ಗಣತಿ ವರದಿಯ ಮೂಲ ಪ್ರತಿ ಹಾಳಾಗಿದ್ದರೆ ಆಯೋಗದ ಅಂದಿನ ಮುಖ್ಯಸ್ಥರು ಸ್ಪಷ್ಟನೆ ನೀಡುತ್ತಾರೆ. ದತ್ತಾಂಶ ಕಂಪ್ಯೂಟರ್‌ನಲ್ಲಿ ಶೇಖರಿಸಿ ಇಟ್ಟಿರಬಹುದು. ಅಶೋಕ್‌ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಯತೀಂದ್ರ ಬಿಜೆಪಿ ನಾಯಕರ ಆರೋಪಗಳನ್ನು ಅಲ್ಲಗಳೆದಿದ್ದಾರೆ.

- Advertisement -

Latest Posts

Don't Miss