ಹೆಣ್ಣಿನ ನಿಜವಾದ ಜೀವನ ಶುರುವಾಗುವುದೇ ಮದುವೆಯಾದ ಬಳಿಕ. ಅಪ್ಪ ಅಮ್ಮನ ಮುದ್ದಿನ ಮಗಳಾಗಿ ಬೆಳೆದ ಹೆಣ್ಣು ಬೇರೆಯವರ ಮನೆ ಬೆಳಗಲು ಹೋದಾಗ ಹೇಗಿರುತ್ತಾಳೆ. ಮತ್ತು ಆಕೆಯ ಪತಿ ಮತ್ತು ಪತಿಯ ಮನೆಯವರು ಆಕೆಯನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವgದರ ಮೇಲೆ ಹೆಣ್ಣಿನ ವೈವಾಹಿಕ ಜೀವನ ತಿಳಿಯಬಹುದು. ಆದ್ರೆ ವೈವಾಹಿಕ ಜೀವನ ಉತ್ತಮವಾಗಿರಲು ಪತಿ-ಪತ್ನಿ ಅನ್ಯೋನ್ಯವಾಗಿರಬೇಕು. ಹಾಗೆ ಅನ್ಯೋನ್ಯವಾಗಿರಲು, ಚಾಣಕ್ಯ ಹೇಳಿದ ಕೆಲ ಮಾತುಗಳನ್ನ ಅನುಸರಿಸಬೇಕು. ಆ ಮಾತುಗಳು ಯಾವುದು ಅನ್ನೋದರ ಬಗ್ಗೆ ತಿಳಿಯೋಣ.
ಮೊದಲನೇಯದಾಗಿ ಪ್ರೀತಿ. ನಿಜವಾದ ಪ್ರೀತಿ ಸಿಕ್ಕರೆ ಇಡೀ ವಿಶ್ವವನ್ನೇ ಗೆಲ್ಲಬಹುದು ಅನ್ನೋ ಮಾತಿದೆ. ಹಾಗಾಗಿ ಪತಿ ಪತ್ನಿ ಮಧ್ಯೆ ಹೆಚ್ಚಿನ ಪ್ರೀತಿ ಇರಬೇಕು ಎನ್ನುತ್ತಾರೆ ಚಾಣಕ್ಯರು. ಜೀವನದಲ್ಲಿ ಆಸ್ತಿ ಅಂತಸ್ತು ಐಶ್ವರ್ಯ ಎಲ್ಲವನ್ನೂ ಹೊಂದಿದ್ದರೂ ಕೂಡ ನಿಮ್ಮನ್ನು ಪ್ರೀತಿಸುವವರು ಇಲ್ಲದಿದ್ದರೆ ಏನು ಪ್ರಯೋಜನ..? ಹಾಗಾಗಿ ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಪ್ರೀತಿ. ಪತಿ-ಪತ್ನಿ ಮಧ್ಯೆ ಪ್ರೀತಿ ಹೆಚ್ಚಿದಷ್ಟು ಸಂಬಂಧ ಗಟ್ಟಿಗೊಳ್ಳುತ್ತದೆ.
ಎರಡನೇಯದಾಗಿ ನಂಬಿಕೆ. ಪತಿ ಪತ್ನಿ ಮಧ್ಯೆ ಎಲ್ಲಕ್ಕಿಂತ ಮುಖ್ಯವಾಗಿ ನಂಬಿಕೆ ಇರಬೇಕು. ಯಾವಾಗ ನಂಬಿಕೆ ಎಂಬ ಸೇತುವೆ ಮುರಿದು ಬೀಳುತ್ತದೆಯೋ, ಆವಾಗ ಪ್ರೀತಿ ಎಂಬ ಅರಮನೆ ಮುಟ್ಟಲಾಗುವುದಿಲ್ಲ. ಹಾಗಾಗಿ ದಾಂಪತ್ಯ ಜೀವನ ಸುಖವಾಗಿರಲು ಪ್ರೀತಿ ಸಿಗಬೇಕು, ಪ್ರೀತಿ ಸಿಗಬೇಕೆಂದರೆ, ನಂಬಿಕೆ ಉಳಿಯಬೇಕು. ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇಲ್ಲದಿದ್ದಲ್ಲಿ, ಯಾವಾಗ ನೋಡಿದರೂ ಅನುಮಾನ ಪಡುತ್ತಿದ್ದಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗುತ್ತದೆ. ಹಾಗಾಗಿ ಗಂಡ ಹೆಂಡತಿ ಮಧ್ಯೆ ನಂಬಿಕೆ ಅನ್ನೋದು ತುಂಬಾನೇ ಮುಖ್ಯ.
ಮೂರನೇಯದಾಗಿ ಮಾತುಕತೆ. ಗಂಡ ಹೆಂಡತಿ ತಮ್ಮ ಕಷ್ಟ ಸುಖಗಳನ್ನು ಒಬ್ಬರ ಬಳಿ ಒಬ್ಬರು ಹೇಳಿಕೊಳ್ಳುವ ಮನಸ್ಥಿತಿಯನ್ನು ಹೊಂದಿರಬೇಕು. ಹೀಗೆ ಕಷ್ಟ ಸುಖಗಳನ್ನ, ತಮ್ಮ ಮನಸ್ಸಿಗೆ ಬಂದ ವಿಚಾರವನ್ನ ಹೇಳಿಕೊಂಡರೆ, ಇಬ್ಬರ ಮಧ್ಯೆ ಮನಸ್ತಾಪ ಬರುವುದಿಲ್ಲ. ಆದರೆ ನೀವು ಹೆಚ್ಚು ಮಾತನಾಡದೇ, ಹೇಳಿಕೊಳ್ಳಬೇಕಾದ ವಿಷಯ ಹೇಳದೇ ಇದ್ದರೆ, ನಿಮ್ಮ ದಾಂಪತ್ಯ ಜೀವನ ಸಪ್ಪೆ ಸಪ್ಪೆಯಾಗಿರುತ್ತದೆ.
ನಾಲ್ಕನೇಯದಾಗಿ ಉದಾರ ಮನಸ್ಸು. ಗಂಡ ಹೆಂಡತಿ ಸಂಬಂಧ ಉತ್ತಮವಾಗಿರಲು ಉದಾರ ಮನಸ್ಸಿರುವುದು ಕೂಡ ತುಂಬ ಮುಖ್ಯ. ಪತ್ನಿಗೆ ಅವಶ್ಯಕವಾದ ವಸ್ತುವನ್ನು ಕೊಡಿಸುವ, ಪತಿಗೆ ಕಷ್ಟದ ಸಮಯದಲ್ಲಿ ಎಲ್ಲ ರೀತಿಯ ಸಹಾಯ ಮಾಡುವ ಉದಾರ ಮನಸ್ಸು ಇರಬೇಕು. ಹಾಗಂತ, ಬೇಕಾದ ಹಾಗೆ ಕೆಲಸ ಮಾಡಿಸಿಕೊಳ್ಳುವ, ಹಣ ಖರ್ಚು ಮಾಡಿಸುವ ಗುಣವಿದ್ದರೆ, ಖಂಡಿತ ಲಾಭವಿಲ್ಲ. ಆಗ ದಾಂಪತ್ಯ ಜೀವನ ಉತ್ತಮವಾಗುವ ಬದಲು ಬೇಸರ ಬಂದು ಹೋಗುತ್ತದೆ. ಹಾಗಾಗಿ ಅತಿ ಆಸೆ ಇಲ್ಲದೇ, ಸಂಗಾತಿಗೆ ಸಾಥ್ ಕೊಡುವ ಮನಸ್ಥಿತಿ ಇರುವುದು ತುಂಬಾ ಉತ್ತಮ.
ಐದನೇಯದಾಗಿ ಒಬ್ಬರಿಗೊಬ್ಬರು ಗೌರವ ನೀಡಬೇಕು. ಕಂಡವರ ಎದುರಿಗೆ ಗಂಡ ಹೆಂಡತಿಯನ್ನು ಅಥವಾ ಹೆಂಡತಿ ಗಂಡನನ್ನು ಅವಮಾನಿಸುವುದಾಗಲಿ, ಬೇಡದ ಮಾತುಗಳನ್ನು ಆಡುವುದಾಗಲಿ ಮಾಡಬಾರದು. ಇದರಿಂದ ಜಗಳವಾಗುವುದೇ ಹೆಚ್ಚು. ಅಲ್ಲದೇ, ಬೇರೆಯವರು ನಿಮ್ಮನ್ನು ಆಡಿಕೊಳ್ಳುವಂತಾಗುತ್ತದೆ. ಪತಿ-ಪತ್ನಿ ಮಧ್ಯೆ ಒಳ್ಳೆಯ ಸಂಬಂಧ ಇಲ್ಲವೆಂದು ಕಾಣುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಹಾಗಾಗಿ ಯಾರ ಎದುರಿಗೂ ನಿಮ್ಮ ಬಾಳ ಸಂಗಾತಿಯನ್ನ ಬಿಟ್ಟುಕೊಡಬೇಡಿ.