ದೀಪಗಳ ಹಬ್ಬ ದೀಪಾವಳಿಯ ಸಂಭ್ರಮಾಚರಣೆಯು ನಗರದಲ್ಲಿ ಹಲವು ಕುಟುಂಬಗಳಿಗೆ ಆತಂಕ ತಂದಿದೆ. ಪಟಾಕಿ ಸಿಡಿತದ ವೇಳೆ ಮೂರು ವರ್ಷದ ಮಗು ಸೇರಿದಂತೆ ಒಟ್ಟು 12 ಮಕ್ಕಳು ಮತ್ತು ಇಬ್ಬರು ಯುವಕರು ಕಣ್ಣಿನ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ಪಟಾಕಿ ಹಚ್ಚುತ್ತಿದ್ದಾಗ, ಮೂರು ವರ್ಷದ ಕಂದನ ಎರಡೂ ಕಣ್ಣುಗಳಿಗೆ ಹೊಗೆ ಮತ್ತು ಕಿಡಿ ತಾಗಿ ಗಂಭೀರವಲ್ಲದ ಗಾಯವಾಗಿದೆ.
ಮಗುವನ್ನು ನಾರಾಯಣ ನೇತ್ರಾಲಯಕ್ಕೆ ದಾಖಲಿಸಲಾಗಿದ್ದು, ವೈದ್ಯರು ಕಣ್ಣುಗಳನ್ನು ಸ್ವಚ್ಛಗೊಳಿಸಿ, ಔಷಧಿ ನೀಡಿ ಹೆಚ್ಚಿನ ಆರೈಕೆ ಮಾಡುತ್ತಿದ್ದಾರೆ. ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿ ಇಲ್ಲಿ ಚಿಕಿತ್ಸೆ ಪಡೆದ ಐದೂ ಮಕ್ಕಳು 8 ರಿಂದ 12 ವರ್ಷದೊಳಗಿನವರಾಗಿದ್ದಾರೆ. 12 ವರ್ಷದ ಬಾಲಕಿಯೊಬ್ಬಳ ಕಣ್ಣಿನ ಕಾರ್ನಿಯಾ ಮೇಲೆ ಬಿದ್ದಿದ್ದ ಕಿಡಿಗಳನ್ನು ವೈದ್ಯರು ಯಶಸ್ವಿಯಾಗಿ ತೆಗೆದು, ಆ್ಯಂಟಿಬಯಾಟಿಕ್ ಮತ್ತು ಲೂಬ್ರಿಕೆಂಟ್ ಹನಿಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ.
ಇಲ್ಲಿ ದಾಖಲಾದ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿತದಿಂದಾಗಿ ಬೆಂಗಳೂರಿನಲ್ಲಿ ಹಲವು ಕುಟುಂಬಗಳು ಆತಂಕಕ್ಕೆ ಒಳಗಾಗಿವೆ. ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ಮೂರು ವರ್ಷದ ಮಗು ಸೇರಿದಂತೆ ಒಟ್ಟು 12 ಮಕ್ಕಳು ಮತ್ತು ಇಬ್ಬರು ಯುವಕರು ಕಣ್ಣಿನ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಿನ ಮಕ್ಕಳು ಪಟಾಕಿ ನೋಡುವಾಗ ಗಾಯಗೊಂಡಿದ್ದಾರೆ. ದೆಹಲಿಯಲ್ಲೂ ಕೂಡ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರು ಎಚ್ಚರ ವಹಿಸಿ, ಕಣ್ಣಿನ ಗಾಯವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ

