Political News: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ಆಕ್ರೋಶ ಜೋರಾಗಿದೆ. ಅಮಾಯಕ 11 ಜನರು ಪ್ರಾಣ ಕಳೆದುಕೊಂಡಿದ್ದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಆರೋಪ – ಪ್ರತ್ಯಾರೋಪಗಳು ನಡೆಯುತ್ತಿದ್ದು, ಸರ್ಕಾರದ ಬೇಜವಾಬ್ದಾರಿ ವಿಪಕ್ಷಗಳು ಕೆರಳಿ ಕೆಂಡವಾಗಿವೆ.
ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ವ್ಯಂಗ್ಯವಾಡಿದ ಬಿಜೆಪಿ ಸಂಸದ..
ಈಗಾಗಲೇ ಸಿಎಂ, ಡಿಸಿಎಂ ಹಾಗೂ ಗೃಹ ಮಂತ್ರಿಗಳು ಈ ಘಟನೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಗ್ರಹಿಸುತ್ತಿದ್ದಾರೆ. ಈ ನಡುವೆಯೇ ಇಡೀ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಹಾಗೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಬಗ್ಗೆ ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ.
18 ವರ್ಷಗಳ ಬಳಿಕ ತಮ್ಮ ಅದ್ಭುತ ಪ್ರದರ್ಶನದಿಂದ IPL ಕಪ್ ಗೆದ್ದಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಸಂಭ್ರಮಾಚರಣೆ ವೇಳೆ ಆರ್ಸಿಬಿ ಆಡಳಿತ ಮಂಡಳಿಯು ಭದ್ರತಾ ಕ್ರಮಗಳ ಕಳಪೆ ವ್ಯವಸ್ಥೆ ಮಾಡಿತ್ತು ಎಂದು ಆರೋಪಿಸಿದ್ದಾರೆ.
ಆರ್ಸಿಬಿ ಗೆಲ್ಲಿಸಿದ್ದಕ್ಕಾಗಿ ನಾವು ನಿಮಗೆ ಋಣಿಯಾಗಿದ್ದೇವೆ..!
18 ವರ್ಷಗಳ ಬಳಿಕ ನಮಗೆ ಐಪಿಎಲ್ ಕಪ್ ಗೆಲ್ಲಿಸಿದ್ದಕ್ಕಾಗಿ ನಾವು ಆರ್ಸಿಬಿ ಅಭಿಮಾನಿಗಳು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಋಣಿಯಾಗಿದ್ದೇವೆ. ನೀವಿಬ್ಬರೂ ಮೈದಾನದಲ್ಲಿ ಅದ್ಭುತ ಕ್ರಿಕೆಟ್ ಮತ್ತು ನಾಯಕತ್ವ ಕೌಶಲ್ಯವನ್ನು ಪ್ರದರ್ಶಿಸಿದರು, ಅಲ್ಲದೆ ನಮ್ಮ ಕ್ಲಬ್ಗೆ ದೀರ್ಘಕಾಲದ ನಂತರ ಈ ವೈಭವವನ್ನು ತಂದುಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಅಮಾನತು ಉತ್ತಮವಾದ ಕ್ರಮವಾಗಿದೆ..
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತು ಅವರ ಕುಟುಂಬಗಳಿಗೆ ಟ್ರೋಫಿ ಗೆದ್ದುಕೊಟ್ಟಿದ್ದಕ್ಕಾಗಿ ಸನ್ಮಾನಿಸಲು ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಇತರ ಆಟಗಾರರು ಮತ್ತು ಆರ್ಸಿಬಿ ಆಡಳಿತ ಮಂಡಳಿ ಭದ್ರತಾ ಕ್ರಮಗಳ ಕಳಪೆ ವ್ಯವಸ್ಥೆ ಮಾಡಿದ್ದಕ್ಕಾಗಿ ನಾವು ತುಂಬಾ ಅಸಮಾಧಾನಗೊಂಡಿದ್ದೇವೆ. ಆರ್ಸಿಬಿ ಆಡಳಿತ ಮಂಡಳಿಯನ್ನು ಬಂಧಿಸಲಾಗಿದೆ ಮತ್ತು ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಲಾಗಿದೆ ಎಂಬುದು ಉತ್ತಮ ಕ್ರಮವಾಗಿದೆ. ಬೆಂಗಳೂರಿನಲ್ಲಿ ಭದ್ರತೆಗೆ ಅವರೇ ಮೊದಲು ಜವಾಬ್ದಾರಿ ಹೊರಬೇಕಾದವರು ಎಂದು ಕಿಡಿ ಕಾರಿದ್ದಾರೆ.
ಇನ್ನೂ ಇಷ್ಟೆಲ್ಲಾ ಆದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಈಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಾಪಸ್ ಹೋಗಿ ತಮ್ಮ ಮುಂದಿನ ಐಪಿಎಲ್ ಗಾಗಿ ಅಭ್ಯಾಸವನ್ನು ಪ್ರಾರಂಭಿಸಬಹುದು ಎಂದು ತೇಜಸ್ವಿ ಸೂರ್ಯ ತಮ್ಮ ಟ್ಟೀಟ್ಟರ್ ಪೋಸ್ಟ್ನಲ್ಲಿ ಸರ್ಕಾರದ ಬಗ್ಗೆ ವ್ಯಂಗ್ಯ ಭರಿತವಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ.