ಬೆಂಗಳೂರು: ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೆ ಇವರು ಪಂಚತಾರಾ ಹೋಟೆಲಿನಲ್ಲಿ ಘಟಬಂಧನ್ ಸಭೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.ರೈತರ ಸರಣಿ ಆತ್ಮಹತ್ಯೆಗಳ ಬಗ್ಗೆ ಘಟಬಂಧನ್ ಸಭೆಯಲ್ಲಿ ಚರ್ಚೆ ಮಾಡುತ್ತೀರಾ?
ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಮನ್ನು ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಇದ್ದಿದಕ್ಕೆ ಟೀಕೆ ಮಾಡಿದ್ದರು. ನಾವಿದ್ದರೆ ತಪ್ಪು, ಅವರಿದ್ದರೆ ಸರಿ. ಯಾಕೆಂದರೆ ನಾವು ರೈತ ಮಕ್ಕಳು ಅಲ್ಲವೇ? ಅದನ್ನು ಅವರು ಸಹಿಸಲು ಆಗುತ್ತಿಲ್ಲ. ಅವರು ಹೊಲದಲ್ಲಿ ಉತ್ತಿ, ಬಿತ್ತಿ ಬೆಳೆ ತೆಗೆದು ದುಡಿಮೆ ಮಾಡಿ ಹೋಟೆಲ್ ಬಿಲ್ಲು ಕಟ್ಟುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಾರಂಭವಾಗಿ, ವೆಸ್ಟ್ ಎಂಡ್ ಹೋಟೆಲ್ ವರೆಗೂ ಕಟೌಟ್ ಗಳು ರಾರಾಜಿಸ್ತಿವೆ. ಯಾರ ಸಮಾಧಿ ಮೇಲೆ ವಿಜೃಂಭಣೆಯಿಂದ ಈ ಸಭೆ ನಡೆಸುತ್ತಿದ್ದೀರಿ? ಎರಡು ತಿಂಗಳಿಂದ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಎಲ್ಲೆಲ್ಲೂ ಕಟೌಟ್ ಗಳು ಕಣ್ಣಿಗೆ ರಾಚುತ್ತಿವೆ. ರೈತರ ಸಮಾಧಿಯ ಮೇಲೆ ಈ ಸಮಾವೇಶವಾ? ಇಲ್ಲಿಂದ ದೇಶಕ್ಕೆ ಯಾವ ದೇಶದಲ್ಲಿ ಯಾವ ಸಂದೇಶ ಕೊಡ್ತೀರಿ? ಇದು ಗ್ಯಾರಂಟಿ ಮಾಡಲ್ ಅಂತೆ. ಗ್ಯಾರಂಟಿಗಳನ್ನು ಜಾರಿ ಮಾಡಿದ ಮೇಲೆಯೇ ರೈತ ಆತ್ಮಹತ್ಯೆಗಳು ನಡೆಯುತ್ತಿವೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಕೃಷಿ ಏನು ಮಾಡುತ್ತಿದೆ? ಅಲ್ಲಿ ರೇಟ್ ಫಿಕ್ಸ್ ಮಾಡಿಕೊಂಡು ಜಲ್ಸಾ ಮಾಡುತ್ತಿದ್ದಾರೆ. ಕೃಷಿ ಇಲಾಖೆಯಲ್ಲಿ ನಿಮ್ಮ ಸಾಧನೆ ಏನು. ಲೂಟಿ ಮಾಡಿಬಿಟ್ಟರು ಎಂದು ಬಿಜೆಪಿತನ್ನು ದೂರಿದಿರಿ. ನಿಮ್ಮ ಸಾಧನೆ ಏನು? ಈ ಸಂದೇಶ ಕೊಡಿ ನಿಮ್ಮ ಮಹಾಘಟಬಂಧನ್ ನಲ್ಲಿ ಎಂದು ಅವರು ಲೇವಡಿ ಮಾಡಿದರು.
ರೈತರ ಬಗ್ಗೆ ಮಹಾಘಟಬಂಧನ್ ಸಭೆಯಲ್ಲಿ ಏನು ಹೇಳ್ತೀರಿ ಹೇಳಿ. ಸದನದಲ್ಲಿಯು ಮೊದಲು ಈ ಬಗ್ಗೆ ಚರ್ಚೆ ಮಾಡಿ. ಆರ್ಥಿಕ ಪರಿಸ್ಥಿತಿ ಬಗ್ಗೆ ಕುಮಾರಸ್ವಾಮಿ ಮಾತಾಡಿದರು ಅಂತ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೊಂಡು ಓಡಾಡ್ತಾ ಇದ್ದಾರೆ. ಎಸ್.ಎಂ ಕೃಷ್ಣಾ, ಧರ್ಮಸಿಂಗ್ ಕಾಲದಲ್ಲಿ ಆದ ಸಾಲದ ಬಗ್ಗೆ ಗೊತ್ತಿದೆಯಾ? ಕಾಂಗ್ರೆಸ್ ಕಾಲದಲ್ಲಿ ಅತಿ ಹೆಚ್ಚು ಸಾಲ ಮಾಡಲಾಗಿದೆ. ಈಗ 85 ಸಾವಿರ ಕೋಟಿ ಸಾಲ ಯಾಕೆ ಮಾಡುತ್ತಿದ್ದೀರಿ? ರೈತರನ್ನು ಬದುಕುಳಿಸಲು ಸಾಲ ಮಾಡುತ್ತಿದ್ದೀರಾ? ಶಿಕ್ಷಣ, ಆರೋಗ್ಯ ಇಲಾಖೆಗೆ ಏನು ಕೊಟ್ಟಿರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Rahul Gandhi : ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾಂಗ್ರೆಸ್ ನಾಯಕರು