Monday, May 12, 2025

Latest Posts

ಖರ್ಗೆ ಸಭೆ ಖಾಲಿ ಖಾಲಿ : ಅಧ್ಯಕ್ಷರೇ ಇದೆಂಥಾ ಅನ್ಯಾಯ..?

- Advertisement -

ಪಾಟ್ನಾ : ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳೆದೆರಡು ದಿನಗಳ ಹಿಂದೆ ಅವರು ಬಿಹಾರದ ಬಕ್ಸಾರ್‌ನಲ್ಲಿ ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ್‌ ಎಂಬ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿರೀಕ್ಷಿತ ಜನರು ಸೇರದ ಹಿನ್ನೆಲೆ ಖಾಲಿ ಕುರ್ಚಿಗಳಿಗೆನೇ ಭಾಷಣ ಮಾಡಿ ಬಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಪಹಾಸ್ಯ ಹಾಗೂ ಟೀಕೆಗೆ ಗುರಿಯಾಗಿತ್ತು. ಕಾಂಗ್ರೆಸ್‌ ನಾಯಕರಿಗೂ ಇದರಿಂದ ಮುಜುಗರದ ಸನ್ನಿವೇಶ ನಿರ್ಮಾಣವಾಗಿತ್ತು. ಆದರೆ ಇದೀಗ ಇದರಿಂದ ತಪ್ಪಿಸಿಕೊಳ್ಳಲು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ ಅಲ್ಲಿನ ಕಾಂಗ್ರೆಸ್‌ ಜಿಲ್ಲಾಧ್ಯಕ್ಷನನ್ನೇ ಅಮಾನತು ಮಾಡಲಾಗಿದೆ.

ಮುಜುಗರಕ್ಕೀಡಾಗಿದ್ದ ನಾಯಕರು..

ಬಿಹಾರದಲ್ಲಿ ಮುಂಬರಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಆಗಮಿಸುವ ಮಾಹಿತಿ ಇದ್ದರೂ ಸಹ ಅಲ್ಲಿ ಜನರು ಸೇರಿರಲಿಲ್ಲ. ಇದರಿಂದ ವೇದಿಕೆಯಲ್ಲಿದ್ದ ನಾಯಕರಿಗೆ ತೀವ್ರ ಕಸಿವಿಸಿ ಉಂಟಾಗಿತ್ತು. ಸಮಾವೇಶದ ಮಧ್ಯದಲ್ಲಿಯೇ ಕಾಂಗ್ರೆಸ್‌ ನಾಯಕರು ಕುರ್ಚಿಗಳಲ್ಲಿ ಕುಳಿತುಕೊಳ್ಳುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ನಾಯಕರ ಮಾತುಗಳಿಗೆ ಜನರು ಸೊಪ್ಪು ಹಾಕದಿದ್ದರಿಂದ ಬಹುತೇಕ ಕುರ್ಚಿಗಳೆಲ್ಲ ಖಾಲಿ ಖಾಲಿಯಾಗಿಯೇ ಉಳಿದಿದ್ದವು. ಬಕ್ಸಾರ್‌ನ ಸ್ಥಳೀಯ ಕಾಂಗ್ರೆಸ್ ಶಾಸಕ ಸಂಜಯ್ ಕುಮಾರ್ ತಿವಾರಿ ಸಮಾವೇಶದ ವೇದಿಕೆಯಿಂದಲೇ ಮುಂದೆ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮೈಕ್‌ ಮೂಲಕ ಜನರಲ್ಲಿ ವಿನಂತಿಸುತ್ತಿದ್ದರು. ಈ ವಿಡಿಯೋ ಎಲ್ಲೆಡೆ ಭಾರೀ ಸದ್ದು ಮಾಡುವ ಮೂಲಕ ವಿಪಕ್ಷಗಳಿಗೆ ಆಹಾರವಾಗಿತ್ತು.

ಅನಿರ್ದಿಷ್ಟಾವಧಿಗೆ ಅಮಾನತು..

ಬಿಹಾರದ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲವರು, ರಾಜ್ಯಾಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ಬಕ್ಸಾರ್‌ನ ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್, ಸಸಾರಂನ ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ ರಾಮ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಈ ವೇದಿಕೆ ಮೇಲಿದ್ದರು. ಸಮಾವೇಶದಲ್ಲಿ ಕಡಿಮೆ ಜನರು ಸೇರಿರುವ ಕಾರಣಕ್ಕೆ ವೇದಿಕೆಯ ಮೇಲಿದ್ದ ಗಣ್ಯರಿಗೆ ಅವಮಾನ ಆದಂತಾಗಿತ್ತು. ಹೀಗಾಗಿ ಶಿಸ್ತು ಕ್ರಮದ ದೃಷ್ಟಿಯಿಂದ ಜಿಲ್ಲಾಧ್ಯಕ್ಷ ಮನೋಜ್ ಕುಮಾರ್ ಪಾಂಡೆ ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ. ಇನ್ನುಳಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಂದ ಅವರನ್ನು ಕೈ ಬಿಡಲಾಗಿದೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ಕೋಶದ ಅಧ್ಯಕ್ಷ ರಾಜೇಶ್ ರಾಥೋಡ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ತಯಾರಿ..

ಬಿಹಾರದಲ್ಲಿ ಈ ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಹೇಗಾದರೂ ಅಲ್ಲಿ ಅಧಿಕಾರವನ್ನು ಹಿಡಿಯಲೇಬೇಕೆಂಬ ಹಠ ತೊಟ್ಟಿರುವ ಬಿಜೆಪಿಯು ಈಗಾಗಲೇ ಅಲ್ಲಿ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು, ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಅವರ ಎಲ್‌ಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮತ್ತೊಮ್ಮೆ ನಿತೀಶ್ ಕುಮಾರ್ ನಾಯಕತ್ವದಲ್ಲಿ ಬಿಹಾರವನ್ನು ಆಳುವ ಲೆಕ್ಕಾಚಾರದಲ್ಲಿ ಎನ್‌ಡಿಎ ಮೈತ್ರಿಕೂಟ ಸಿದ್ದತೆ ನಡೆಸುತ್ತಿದೆ. ಇತ್ತ ಆರ್‌ಜೆಡಿಯೊಂದಿಗೆ ತಮ್ಮ ಸಖ್ಯ ಬೆಳೆಸಿರುವ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟವು ಬಿಹಾರವನ್ನು ತನ್ನ ತೆಕ್ಕೆಗೆ ಪಡೆಯುವ ನಿಟ್ಟಿನಲ್ಲಿ ಸಮಾವೇಶಗಳನ್ನು ಆಯೋಜಿಸುವುದರ ಮೂಲಕ ಜನರನ್ನು ತಲುಪಲು ರೂಪು ರೇಷೆಗಳನ್ನು ಸಿದ್ದಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಖರ್ಗೆ ಅವರು ಅಲ್ಲಿ ಸಮಾವೇಶ ನಡೆಸಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೂ ಕೂಡ ಸಮಾವೇಶ ನಡೆಸಿ ಚುನಾವಣಾ ರಣ ಕಹಳೆ ಮೊಳಗಿಸಿದ್ದರು.

- Advertisement -

Latest Posts

Don't Miss