ಸ್ಯಾಂಡಲ್ ವುಡ್ ನ ಜನಪ್ರಿಯ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ಕನ್ನಡ ಸಿನಿ ರಂಗಕ್ಕೆ ಹಲವು ಸಿನಿಮಾಗಳನ್ನ ನೀಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಡಾಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ರು ಹೆಸರು ಗಳಿಸಿದ್ದು ಮಾತ್ರ ‘ಟಗರು’ ಸಿನಿಮಾದ ಮೂಲಕ. ಈ ಸಿನಿಮಾದಲ್ಲಿಯೇ ಇವರಿಗೆ ‘ಡಾಲಿ’ ಎಂಬ ಹೆಸರು ಬಂದದ್ದು. ಅದಷ್ಟೇ ಅಲ್ಲದೆ ‘ಪುಷ್ಪ’ ಸಿನಿಮಾದ ಮೂಲಕ ದಕ್ಷಿಣ ಭಾರತಕ್ಕೂ ಕೂಡ ಚಿರಪರಿಚಿತರಾದರು. ಇನ್ನು ‘ಬಡವ ರಾಸ್ಕಲ್’ ಸಿನಿಮಾಕ್ಕೆ ನಿರ್ಮಾಪಕರಾಗಿ ಕೆಲಸ ಮಾಡಿ ಹೆಸರು ಪಡೆದರು. ಇಷ್ಟೆಲ್ಲ ಕೆಲಸದ ನಡುವೆಯೂ ಸಹ ನಟ ಡಾಲಿ ಹೊಸಬರ ಚಿತ್ರಕ್ಕೆ ಸಾಥ್ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಅಮರ್ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಅಭಿಷೇಕ್ ಅಂಬರೀಷ್ ಎಂಟ್ರಿ ಕೊಟ್ಟರು. ಇದೀಗ ಅವರ ಎರಡನೇ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ನಲ್ಲಿ ಬ್ಯುಸಿಯಾಗಿದ್ದಾರೆ. ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಹಾಗೂ ಸೂರಿ ಇವರಿಬ್ಬರ ಮೊದಲ ಕಾಂಬಿನೇಷನ್ ಸಿನಿಮಾ ಇದು. ಹಾಗಾಗಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ದುಪ್ಪಟ್ಟಾಗಿದೆ.
ನಿನ್ನೆ (ಶುಕ್ರವಾರ) ಮೈಸೂರಿನಲ್ಲಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಈ ವೇಳೆ ನಟ ಡಾಲಿ ಧನಂಜಯ್ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರ ತಂಡಕ್ಕೆ ಶುಭ ಕೋರಿ, ನಿರ್ದೇಶಕ ಸೂರಿ ಹಾಗೂ ಅಭಿಷೇಕ್ ಅಂಬರೀಷ್ ಜೊತೆ ಕೆಲ ಕಾಲ ಸಮಯ ಕಳೆದಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ