Political News: ಕೆ.ಆರ್.ಎಸ್ ಡ್ಯಾಮ್ ಬಳಿ ಟ್ರಯಲ್ ಬ್ಲಾಸ್ಟ್ ಮಾಡಲು, ಜಿಲ್ಲಾಡಳಿತ ಮುಂದಾಗಿದ್ದು, ಇದನ್ನು ಸಂಸದೆ ಸುಮಲತಾ ವಿರೋಧಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುಮಲತಾ, ಕೆ. ಆರ್.ಎಸ್ ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ಗಿಂತ ಹೆಚ್ಚು ತೀವ್ರತೆಯಲ್ಲಿ ಗಣಿಗಾರಿಕೆಗಳು ಬಳಸುತ್ತಿರುವ ಸೈಲೆಂಟ್ ಬ್ಲಾಸ್ಟ್ ಹಾಗೂ ಮೆಗಾ ಬ್ಲಾಸ್ಟ್ ಗಳ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿ, ಕೆ.ಆರ್.ಎಸ್ ಅಣೆಕಟ್ಟೆಯ ಹಿತ ರಕ್ಷಣೆಯ ದೃಷ್ಟಿಯಿಂದ ವರದಿ ಸಲ್ಲಿಸದೆ, ಗಣಿ ಮಾಲೀಕರಿಗೆ ಅನುಕೂಲವಾಗುವಂತೆ ಕೆ.ಆರ್.ಎಸ್ ಸಮೀಪ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿರುವ ಜಿಲ್ಲಾಡಳಿತದ ನಡೆಯನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.
ಏಕೆಂದರೆ ಟ್ರಯಲ್ ಬ್ಲಾಸ್ಟ್ ನ ತೀವ್ರತೆ ಕೇವಲ 200 ಮೀಟರ್ ವ್ಯಾಪ್ತಿಯ ವರೆಗೆ ಮಾತ್ರ ವ್ಯಾಪಿಸುತ್ತದೆ, ಆದರೆ ಇವರಿಗೂ ಕೆ.ಆರ್.ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ನಡೆದಿರುವ ಯಾವುದೇ ಗಣಿಗಾರಿಕೆಯೂ ಟ್ರಯಲ್ ಬ್ಲಾಸ್ಟ್ ಮಾದರಿಯಲ್ಲಿ ನಡೆದಿಲ್ಲ, ಬದಲಾಗಿ Silent Blast, Mega Blast ಗಳನ್ನು ಮಾಡಿ seismically active zone ನಲ್ಲಿರುವ ಕೆ.ಆರ್.ಎಸ್ ಅಣೆಕಟ್ಟೆಗೆ ಅಪಾಯ ತಂದೊಟ್ಟಿದೆ. ಕೆ.ಆರ್.ಎಸ್ ಡ್ಯಾಮ್ ಅನ್ನು ಲಕ್ಷ್ಮಣತೀರ್ಥ – ಕೆ.ಆರ್.ಎಸ್ – ಬೆಂಗಳೂರು ನಡುವೆ ಇರುವ Mega lineament ನ ಒಂದೇ ಸೆಲೆಯ ಕಲ್ಲಿನ ಬಂಡೆಯ ಮೇಲೆ ಕಟ್ಟಲಾಗಿದೆ. ಈ ರೀತಿಯ ಅಣೆಕಟ್ಟೆಗಳನ್ನು (Sukri-Mortar Dam) ಎಂದು ಕರೆಯಲಾಗುತ್ತದೆ.
ಗಣಿಗಾರಿಕೆಗಳಲ್ಲಿ ಉಪಯೋಗಿಸುವ ಸ್ಪೋಟಕಾಂಶಗಳು ಹಾಗೂ ಸ್ಪೋಟಕ ಮಾದರಿಗಳಾದ ಸೈಲೆಂಟ್ ಬ್ಲಾಸ್ಟ್ ಮತ್ತು ಮೆಗಾ ಬ್ಲಾಸ್ಟ್ ಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿಯೊಳಗೆ ವಿಸ್ತೀರ್ಣ ಗೊಂಡಿರುವ ಕೆ.ಆರ್.ಎಸ್ ನ ಕಲ್ಲು ಬಂಡೆಯ ಸೆಲೆಗಳಲ್ಲಿ ಕಂಪನ (vibration) ಸೃಷ್ಟಿಸಿ, ಕೆ.ಆರ್.ಎಸ್ ಅಣೆಕಟ್ಟೆಗೆ ಅಪಾಯ ತಂದೊಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೆ.ಆರ್.ಎಸ್ ಅಣೆಕಟ್ಟೆಯ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿರುವುದು ಮುಂಜಾಗ್ರತಾ ಕ್ರಮವಾಗಿ ಉತ್ತಮ ನಿರ್ಧಾರವಾಗಿದೆ ಎಂದು ಸುಮಲತಾ ಹೇಳಿದ್ದಾರೆ.
ನ್ಯಾಯಾಲಯದ ಆದೇಶಕ್ಕೆ ಮಂಕು ಬೂದಿ ಎರಚಿ ಟ್ರಯಲ್ ಬ್ಲಾಸ್ಟ್ ಮೂಲಕ ಮತ್ತೆ ನ್ಯಾಯಾಲಯದ ಆದೇಶವನ್ನು ತಿದ್ದುಪಡಿ ಮಾಡಿಸಿ ಅಕ್ರಮ ಗಣಿಗಾರಿಕೆಗೆ ಉತ್ತೇಜನ ನೀಡಲು ಮುಂದಾಗಿರುವ ಈ ನಿರ್ಧಾರಕ್ಕೆ ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.
ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು: ಡಿಸಿಎಂ ಡಿಕೆಶಿ