Tuesday, May 20, 2025

Latest Posts

ನಾವ್‌ ಬಿಡಲ್ಲ, ಆಪರೇಷನ್‌ ಸಿಂಧೂರ್ ಮುಂದುವರೆಸ್ತೀವಿ : ಪಾಕ್‌ಗೆ ಮಣ್ಣು ಮುಕ್ಕಿಸಲು ಸರ್ವಪಕ್ಷ ಸಭೆಯಲ್ಲಿ ಭಾರತ ಶಪಥ..!

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಪಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ಕೈಗೊಂಡಿರುವ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ಯಶಸ್ವಿಯಾಗಿದೆ. ಭಾರತೀಯ ಸೇನೆಯ ಈ ಸಾಹಸ ಹಾಗೂ ಶೌರ್ಯವನ್ನು ಪಕ್ಷಾತೀತವಾಗಿ ಎಲ್ಲ ನಾಯಕರು ಕೊಂಡಾಡುತ್ತಿದ್ದಾರೆ. ಈ ನಡುವೆ ಭಾರತದ ಆಪರೇಷನ್‌ ಸಿಂಧೂರ್‌ ಕುರಿತು ವಿಪಕ್ಷಗಳಿಗೆ ಮಾಹಿತಿ ನೀಡಬೇಕು ಹಾಗೂ ಅದರ ಸಾಧಕ – ಬಾಧಕಗಳ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರವು ಸರ್ವಪಕ್ಷ ಸಭೆ ನಡೆಸಿದೆ. ಈ ವೇಳೆ ಆಪರೇಷನ್‌ ಸಿಂಧೂರ್‌ ಕೈಗೊಳ್ಳುವ ಮುನ್ನ ಭಾರತ ಸರ್ಕಾರ ಯಾವ್ಯಾವ ತಯಾರಿ ಮಾಡಿಕೊಂಡಿತ್ತು, ಹಾಗೂ ಕಾರ್ಯಾಚರಣೆ ಸಂದರ್ಭದಲ್ಲಿ ಯಾವ ಸ್ಥಳಗಳ ಮೇಲೆ ಹೇಗೆ ದಾಳಿ ನಡೆಸಲಾಗಿದೆ ಎನ್ನುವ ಮಾಹಿತಿಯನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಭೆಯ ಗಮನಕ್ಕೆ ತಂದಿದ್ದಾರೆ.

ಇನ್ನೂ ಈ ವೇಳೆ ಮಾತನಾಡಿರುವ ಅವರು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಪಿಒಕೆದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ದಾಳಿಯಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಭಾರತದ ಭಯೋತ್ಪಾದನಾ ನಿರ್ಮೂಲನಾ ಆಂದೋಲನದ ಅಡಿಯಲ್ಲಿ ಈ ಕಾರ್ಯಾಚರಣೆಯು ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡಿತ್ತು ಮತ್ತು ಅವೆಲ್ಲವನ್ನೂ ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಮುಂದುವರೆಯುತ್ತಿರುವ ಕಾರ್ಯಾಚರಣೆಯಾಗಿದೆ. ಭಾರತವು ಮತ್ತಷ್ಟು ದಾಳಿಗಳನ್ನು ನಡೆಸಬೇಕಾಗಿಲ್ಲ. ಆದರೆ ಪಾಕ್ ಪಡೆಗಳು ದಾಳಿ ಮಾಡಿದರೆ ಮತ್ತೆ ಪ್ರತಿದಾಳಿ ನಡೆಸುತ್ತದೆ ರಾಜನಾಥ್‌ ಖಡಕ್ ವಾರ್ನಿಂಗ್‌ ನೀಡಿದ್ದಾರೆ.

ಈ ಸಮಯದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ..

ಎಲ್ಲಾ ನಾಯಕರು ರಾಜಕೀಯವನ್ನು ಬದಿಗಿಟ್ಟು ಪ್ರಬುದ್ಧತೆ ಪ್ರದರ್ಶಿಸಿದ್ದಾರೆ. ಪ್ರಸ್ತುತ ಸಮಯದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ, ಆಪರೇಷನ್ ಸಿಂಧೂರ್‌ಗಾಗಿ ಎಲ್ಲರೂ ಭಾರತೀಯ ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ್ದಾರೆ ಮತ್ತು ಈ ವಿಷಯದಲ್ಲಿ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ನಮಗೆ ಕೆಲವು ಸಲಹೆಗಳು ಸಹ ಬಂದಿವೆ. ಆಪರೇಷನ್ ಸಿಂಧೂರ್ ನ್ನು ಸ್ಕಾಲ್ಪ್ ಕ್ಷಿಪಣಿ ಮತ್ತು ಹ್ಯಾಮರ್ ಬಾಂಬ್‌ನಂತಹ ನಿಖರ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆಯಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ 25 ನಿಮಿಷಗಳ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಕೇಂದ್ರ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನವು ಪ್ರತಿದಿನ ಗಡಿಯಾಚೆಗಿನ ಗುಂಡಿನ ದಾಳಿಯನ್ನು ನಡೆಸುತ್ತಿದೆ. ಎಲ್‌ಒಸಿಯಾದ್ಯಂತ ಇರುವ ಉರಿ, ಕುಪ್ವಾರಾ, ಬಾರಾಮುಲ್ಲಾ ಮತ್ತು ಅಖ್ನೂರ್‌ನಂತಹ ವಲಯಗಳನ್ನು ಪಾಕ್ ಸೇನೆ ಗುರಿಯಾಗಿಸಿಕೊಂಡಿರುವುದರಿಂದ ಇಲ್ಲಿಯವರೆಗೆ ಒಬ್ಬ ಸೈನಿಕ ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ. ಭಾರತೀಯ ಸೇನೆಯು ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ನಾವು ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರು ಹಲವು ವಿಚಾರಗಳ ಕುರಿತು ಚರ್ಚಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದರು. ಆದರೆ ಸರ್ಕಾರ ಮನಸ್ಸು ಮಾಡಲಿಲ್ಲ ಎಂದು ಸಂಸದ ರಾಹುಲ್ ರಾಹುಲ್ ಗಾಂಧಿ ಹೇಳಿದ್ದಾರೆ. ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಕೇಂದ್ರ ಸರ್ಕಾರ ಹೇಳಿದ್ದನ್ನು ನಾವು ಕೇಳಿದ್ದೇವೆ. ಕೆಲವು ಗೌಪ್ಯ ಮಾಹಿತಿಯನ್ನು ಹೊರಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರದವರು ಹೇಳಿದ್ದಾರೆ. ನಾವೆಲ್ಲರೂ ಸರ್ಕಾರದೊಂದಿಗಿದ್ದೇವೆ ಜೊತೆ ಇದ್ದೇವೆ ಅಂತ ಕೇಂದ್ರಕ್ಕೆ ಹೇಳಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಯಾವೆಲ್ಲ ನಾಯಕರು ಕೇಂದ್ರದ ಸಭೆಯಲ್ಲಿ ಭಾಗಿಯಾಗಿದ್ದರು..?

ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಎಸ್ ಜೈಶಂಕರ್, ಜೆಪಿ ನಡ್ಡಾ ಮತ್ತು ನಿರ್ಮಲಾ ಸೀತಾರಾಮನ್ ಸರ್ಕಾರವನ್ನು ಪ್ರತಿನಿಧಿಸಿದರೆ, ಕಾಂಗ್ರೆಸ್ ನಿಂದ ರಾಹುಲ್ ಗಾಂದಿ ಮತ್ತು ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ನ ಸಂದೀಪ್ ಬಂಡೋಪಾಧ್ಯಾಯ ಮತ್ತು ಡಿಎಂಕೆಯ ಟಿಆರ್ ಬಾಲು ಪ್ರಮುಖ ವಿರೋಧ ಪಕ್ಷದ ನಾಯಕರಲ್ಲಿ ಸೇರಿದ್ದಾರೆ. ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಎಎಪಿಯ ಸಂಜಯ್ ಸಿಂಗ್, ಶಿವಸೇನೆಯ ಯುಬಿಟಿಯ ಸಂಜಯ್ ರಾವತ್, ಎನ್‌ಸಿಪಿ ಎಸ್‌ಪಿಯ ಸುಪ್ರಿಯಾ ಸುಳೆ, ಬಿಜೆಡಿಯ ಸಸ್ಮಿತ್ ಪಾತ್ರ ಮತ್ತು ಸಿಪಿಐ ಎಂನ ಜಾನ್ ಬ್ರಿಟ್ಟಾಸ್ ಭಾಗಿಯಾಗಿದ್ದರು. ಜೆಡಿಯು ನಾಯಕ ಸಂಜಯ್ ಝಾ, ಕೇಂದ್ರ ಸಚಿವ ಮತ್ತು ಎಲ್‌ಜೆಪಿ ರಾಮ್ ವಿಲಾಸ್ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಏಪ್ರಿಲ್‌ 24ರಂದು ನಡೆದಿದ್ದ ಮೊದಲ ಸರ್ವಪಕ್ಷ ಸಭೆ..

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕರ ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು , ಇದರಲ್ಲಿ ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ ಬಹಾವಲ್ಪುರ್ ಮತ್ತು ಲಷ್ಕರ್-ಎ-ತೈಬಾದ ಬೇಸ್ ಮುರಿಡ್ಕೆ ಸೇರಿವೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಹತ್ಯಾಕಾಂಡದ ಎರಡು ವಾರಗಳ ನಂತರ ಆಪರೇಷನ್ ಸಿಂಧೂರ್ ಅಡಿಯಲ್ಲಿ ನಡೆಸಿದ ಕ್ಷಿಪಣಿ ದಾಳಿಯ ಬಗ್ಗೆ ನಾಯಕರಿಗೆ ಮಾಹಿತಿ ನೀಡಿದೆ. ಅಲ್ಲದೆ ಏಪ್ರಿಲ್‌ 22ರ ಪಹಲ್ಗಾಮ್‌ ದಾಳಿಯ ಬಳಿಕ ಕೇಂದ್ರ ಸರ್ಕಾರ ಏಪ್ರಿಲ್ 24 ರಂದು ಸರ್ವಪಕ್ಷ ಸಭೆ ಕರೆದು ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿತ್ತು, ಆಗ ವಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು.

- Advertisement -

Latest Posts

Don't Miss