ಮೊದಲ ದಿನವೇ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಜಾಗದಲ್ಲಿ ವಿಘ್ನ!

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಸಾಕ್ಷಿಯನ್ನ SIT ತಂಡ ಬೆನ್ನಟ್ಟಿದೆ. ಈಗಾಗಲೇ ಅನಾಮಿಕ ವ್ಯಕ್ತಿಯಿಂದ ಶವ ಹೂತಿಟ್ಟ ಸ್ಥಳವನ್ನು ಗುರುತಿಸಿ 20 ಕಾರ್ಮಿಕರಿಂದ ಅಗೆಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಮೃತದೇಹ ಪತ್ತೆಗೆ ಜಾಗ ಅಗೆಯುವ ಕಾರ್ಯಕ್ಕೆ ನೀರಿನ ಒರತೆ ಅಡ್ಡಿಯಾಗಿದೆ. ಅಂದರೆ ಆ ಜಾಗದಲ್ಲಿ ಈಗ ನೀರು ಚಿಮ್ಮುತ್ತಿದೆ.

ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗ, ನೇತ್ರಾವತಿ ನದಿಯ ಪಕ್ಕದಲ್ಲೇ ಇದೆ. ನದಿಗೂ ಈ ಜಾಗಕ್ಕೂ 10 ಮೀಟರ್ ಅಂತರವೂ ಇಲ್ಲ. ಇಲ್ಲಿ ಅಗೆದಂತೆ ನೀರು ಬರುತ್ತಿದೆ. ಹಾಗಾಗಿ ಜೆಸಿಬಿಯನ್ನು ಸ್ಥಳಕ್ಕೆ ತರಿಸಿ ಅಗೆಯುವ ಕಾರ್ಯ ಮುಂದುವರಿಸಲು ಎಸ್‌ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಸಾಕ್ಷಿ ದೂರುದಾರ ಮೊದಲು ತೋರಿಸಿದ ಜಾಗದಲ್ಲಿ ಅಗೆಯುವ ಕಾರ್ಯವನ್ನು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭಿಸಲಾಗಿತ್ತು. ಸುಮಾರು 3 ಅಡಿ ಆಳದವರೆಗೆ ಅಗೆಯಲಾಗಿದೆ. ಮೃತದೇಹದ ಕುರುಹುಗಳು ಇದುವರೆಗೂ ಸಿಕ್ಕಿಲ್ಲ. ಮಣ್ಣು ಅಗೆದಂತೆ ನೀರು ಒಸರುತ್ತಿದೆ. ಹಾಗಾಗಿ ಜೆಸಿಬಿ ತರಿಸಿ ಅಗೆಯುವ ಕಾರ್ಯ ಮುಂದುವರಿಸಲಾಗುತ್ತದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಸಾಕ್ಷಿ ದೂರುದಾರನಿಗೆ ತೃಪ್ತಿಯಾಗುವವರೆಗೆ ಹಾಗೂ ನಮಗೂ ಇನ್ನು ಅಗೆಯುವ ಅಗತ್ಯವಿಲ್ಲ ಎಂದು ನಮಗೂ ಮನವರಿಕೆ ಆಗುವವರೆಗೆ ಅಗೆಯುವ ಕಾರ್ಯ ಮುಂದುವರಿಸಲಿದ್ದೇವೆ. ಸದ್ಯಕ್ಕೆ ಒಂದೇ ಜಾಗವನ್ನು ಅಗೆದಿದ್ದೇವೆ. ಇದು ಪೂರ್ಣಗೊಂಡ ಬಳಿಕವೇ ಬೇರೆ ಜಾಗದಲ್ಲಿ ಅಗೆಯುವ ಕಾರ್ಯ ಆರಂಭಿಸಲಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಸ್‌ಐಟಿಯ ಡಿಐಜಿ ಎಂ.ಎನ್.ಅನುಚೇತ್ ಹಾಗೂ ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author