Saturday, April 19, 2025

Latest Posts

21 ಎಕರೆ ಭೂಮಿಗೆ ಎಷ್ಟು ಬೆಲೆ ಗೊತ್ತಾ..? : ಶಾಕ್‌ ನೀಡುತ್ತೆ ಚಂದ್ರಬಾಬು ನಿರ್ಧಾರ..!

- Advertisement -

Political News: ದೇಶದಲ್ಲಿಯೇ ಆಂಧ್ರಪ್ರದೇಶವನ್ನು ಆಕರ್ಷಕ ಐಟಿ ಹಬ್‌ ಮಾಡಲು ಹೊರಟಿರುವ ಚಂದ್ರಬಾಬು ನಾಯ್ಡು ಸರ್ಕಾರದ ನಿರ್ಧಾರ ಇದೀಗ ಎಲ್ಲರನ್ನೂ ದಂಗು ಬಡಿಸಿದೆ. ಸದಾ ಐಟಿ ಕ್ಷೇತ್ರದಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುವ ಕನಸು ಕಾಣುತ್ತಿರುವ ಆಂಧ್ರಪ್ರದೇಶ ಸರ್ಕಾರ ಅಚ್ಚರಿ ಎನ್ನುವ ಬೆಲೆಗೆ ತನ್ನ ಜಮೀನು ಮಾರಾಟ ಮಾಡಿ ಚರ್ಚೆಯ ಮುನ್ನೆಲೆಗೆ ಬಂದಿದೆ.

99 ಪೈಸೆಗೆ 21 ಎಕರೆ ಭೂಮಿ..

ಇನ್ನೂ ತನ್ನ ರಾಜ್ಯಕ್ಕೆ ಹೆಚ್ಚಿನ ಐಟಿ ಕಂಪನಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಟಾಟಾ ಸಮೂಹದ ಒಡೆತನದಲ್ಲಿನ ಟಿಸಿಎಸ್‌ ಕಂಪನಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕಚೇರಿ ತೆರೆಯಲು ಕೇವಲ 99 ಪೈಸೆಗೆ 21.6 ಎಕರೆ ಭೂಮಿಯನ್ನು ನೀಡುವ ಮೂಲಕ ಎಲ್ಲರಿಗೂ ನಾಯ್ಡು ಸರ್ಕಾರ ಶಾಕ್‌ ನೀಡಿದೆ. ಈ ಕುರಿತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಆಂಧ್ರ ಸರ್ಕಾರದ ಈ ಕ್ರಮವು ದೇಶದ ಐಟಿ ಹಬ್‌ ಆಗಿರುವ ಬೆಂಗಳೂರಿಗೆ ಕೌಂಟರ್‌ ನೀಡುವುದರ ಭಾಗವಾಗಿದೆ.

1,370 ಕೋಟಿ ರೂಪಾಯಿ ಹೂಡಿಕೆ..!

ಅಲ್ಲದೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಕಂಪನಿಯು, 21.6 ಎಕರೆ ಭೂಮಿಯಲ್ಲಿ ತನ್ನ ಕಚೇರಿ ತೆರೆಯಲಿದೆ. ಕಂಪನಿ 1370 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಅಲ್ಲದೆ ಮುಂದಿನ 2 ರಿಂದ 3 ವರ್ಷದಲ್ಲಿ 12,000 ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಕಂಪನಿಯನ್ನು ರಾಜ್ಯಕ್ಕೆ ಕರೆತರುವುದರಲ್ಲಿ ಐಟಿ ಸಚಿವ ನಾರಾ ಲೋಕೇಶ್‌ ಪಾತ್ರ ಮುಖ್ಯವಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೂ ಬೆಂಗಳೂರಿನಲ್ಲಿ ಮಳೆ ಅವಾಂತರವಾಗಿ ಮೂಲಸೌಕರ್ಯದ ಬಗ್ಗೆ ಭಾರೀ ಟೀಕೆ ವ್ಯಕ್ತವಾದಾಗಲೆಲ್ಲಾ ಆಂಧ್ರದ ರಾಜಕಾರಣಿಗಳು ಕರ್ನಾಟಕ ಬಿಟ್ಟು ಆಂಧ್ರಕ್ಕೆ ಬನ್ನಿ ಎಂದು ಜಾಲತಾಣದ ಮೂಲಕವೇ ಐಟಿ-ಬಿಟಿ ಕಂಪನಿಗಳಿಗೆ ಓಪನ್ ಆಫರ್‌ ನೀಡುತ್ತಿದ್ದರು. ಆದರೂ ಯಾವುದೇ ಕಂಪನಿಗಳು ಬೆಂಗಳೂರನ್ನು ತೊರೆದಿರಲಿಲ್ಲ. ಇಷ್ಟು ದಿನ ಹಿನ್ನಡೆ ಅನುಭವಿಸಿದ್ದ ಆಂಧ್ರ ಸರ್ಕಾರವೀಗ ಹೊಸ ತಂತ್ರದ ಮೂಲಕ ಐಟಿ ಕಂಪನಿಗಳಿಗೆ ಗಾಳ ಹಾಕಲು ಮುಂದಾಗಿದೆ.

ವರ್ಕೌಟ್‌ ಆಗುತ್ತಾ ಮೋದಿ ಫಾರ್ಮುಲಾ..?

ಇನ್ನೂ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಾಟಾ ಮೋಟರ್ಸ್‌ ಕಂಪನಿಯ ವಿಚಾರದಲ್ಲಿ ಅನುಸರಿಸಿದ್ದ ತಂತ್ರಗಾರಿಕೆಯನ್ನು ನಾಯ್ಡು ಸರ್ಕಾರ ಅನುಸರಿಸಿದೆ. ಆಗ ಗುಜರಾತ್‌ನ ಸನ್ನದ್‌ನಲ್ಲಿ ಕೇವಲ 99 ಪೈಸೆಗೆ ಮೋದಿ ಸ್ಥಳ ನೀಡಿದ್ದರು. ಈ ನಿರ್ಧಾರದಿಂದಾಗಿ ಗುಜರಾತ್‌ನಲ್ಲಿ ಉದ್ಯಮಗಳ ಹರಿವು ಹೆಚ್ಚಾಗಿತ್ತು. ಹೀಗಾಗಿ ಆಂಧ್ರ ಸರ್ಕಾರದ ಈ ಕ್ರಮವು ಐಟಿ ಕ್ಷೇತ್ರದ ಸನ್ನದ್‌ ಕ್ಷಣ ಎಂದು ಆಂಧ್ರ ಅಧಿಕಾರಿಗಳು ಬಣ್ಣಿಸಿದ್ದಾರೆ. ಆದರೆ ಆಗಿನ ಸ್ಥಿತಿಯೇ ಬೇರೆಯಾಗಿತ್ತು, ಈಗಿನ ಸನ್ನಿವೇಶವೇ ವಿಭಿನ್ನವಾಗಿದೆ. ಹೀಗಾಗಿ ನಾಯ್ಡು ಸರ್ಕಾರದ ಈ ಪ್ಲಾನ್‌ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

- Advertisement -

Latest Posts

Don't Miss