Movie News: ದರ್ಶನ್ ಅವರು ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲೀಗ ಕಳೆದ ಒಂದು ತಿಂಗಳಿನಿಂದ ಜೈಲು ಸೇರಿದ್ದಾರೆ. ಇವರೊಂದಿಗ ಹದಿನೇಳು ಮಂದಿ ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ದರ್ಶನ್ ಅವರಿಗೆ ಜೈಲೂಟ ಸರಿಹೊಂದದ ಕಾರಣ, ನನಗೆ ಮನೆಯಿಂದ ಆಹಾರ, ಹಾಸಿಗೆ, ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶ ಕೊಡಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ದರ್ಶನ್ ಪರ ವಕೀಲರು ಇದೀಗ ಹಿಂಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣ, ತಾಂತ್ರಿಕ ದೋಷ ಎನ್ನಲಾಗಿದೆ.
ಸದ್ಯ ಹತ್ಯೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರಿಗೆ ಮನೆಯ ಊಟ ಹಾಗು ಹಾಸಿಗೆ ತರಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದನ್ನೀಗ ದರ್ಶನ್ ಪರ ವಕೀಲರು ಹಿಂಪಡೆದುಕೊಂಡಿದ್ದಾರೆ. ಅಂದಹಾಗೆ, ಈ ಪ್ರಕರಣ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಸೋಮವಾರ ಅರ್ಜಿಯನ್ನು ತಾಂತ್ರಿಕ ಕಾರಣದಿಂದ ವಕೀಲರು ಹಿಂಪಡೆದಿದ್ದಾರೆ. ಹೊಸ ಅರ್ಜಿ ಸಲ್ಲಿಸಲು ಈ ಅರ್ಜಿ ಹಿಂಪಡೆಯಲಾಗಿದೆ ಎಂಬುದು ಸುದ್ದಿ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ ಆದೇಶ ಪ್ರಶ್ನಿಸಬೇಕಾದ್ದರಿಂದ ಈ ಹಿಂದಿನ ಅರ್ಜಿ ಹಿಂಪಡೆದು, ಹೊಸ ಅರ್ಜಿ ಸಲ್ಲಿಸಬೇಕಾಗಿದ್ದರಿಂದ ಅರ್ಜಿ ಹಿಂದಕ್ಕೆ ಪಡೆಯಲಾಗಿದೆ. ಜೈಲಿನಲ್ಲಿ ಮನೆ ಊಟ, ಹಾಸಿಗೆ ಮತ್ತು ಪುಸ್ತಕ ತರಿಸಿಕೊಳ್ಳಲು ಅವಕಾಶ ಕೋರಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ದರ್ಶನ್ಗೆ ಅವಕಾಶ ಕೊಟ್ಟಲ್ಲಿ ಎಲ್ಲ ಕೈದಿಗಳೂ ನಮಗೂ ಆ ವ್ಯವಸ್ಥೆ ಕಲ್ಪಿಸಿ ಎಂದು ಕೇಳುತ್ತಾರೆ. ಹಾಗಾಗಿ ಈ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿತ್ತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ದರ್ಶನ್ ಅರ್ಜಿಯನ್ನು ತಳ್ಳಿ ಹಾಕಲಾಗಿದೆ.