Dharwad News: ಧಾರವಾಡ: ಧಾರವಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಕ್ಷೇತ್ರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮೈಕ್ರೋ ಫೈನಾನ್ಸ್ನವರು 7 ತಿಂಗಳ ಗರ್ಭಿಣಿಯನ್ನು ಹೊರಗಟ್ಟಿ ಮನೆಗೆ ಬೀಗ ಹಾಕಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರ ಕ್ಷೇತ್ರವಾದ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗರ್ಭಿಣಿಯನ್ನು ಹೊರಗಟ್ಟಿ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸಭೆ ಕರೆದಿದ್ದರೂ ಕೂಡ, ಮೈಕ್ರೋ ಫೈನಾನ್ಸ್ನವರು ತಮ್ಮ ಚಾಳಿ ಮುಂದುವರಿಸಿದ್ದಾರೆ.
ಪಿಲಿಪ್ ಬಿಲ್ಲಾ ಎಂಬುವರು ಇಕ್ವಿಟಾಸ್ ಪೈನಾನ್ಸ್ ಕಂಪನಿ ಎಂಬ ಮೈಕ್ರೋ ಫೈನಾನ್ಸ್ನಿಂದ 2023ರಲ್ಲಿ 5 ಲಕ್ಷ ಸಾಲ ಪಡೆದುಕ್ಕೊಂಡಿದ್ದರು. ಆದರೆ ಸಾಲ ತೀರಿಸದ ಕಾರಣ, ಫೈನಾನ್ಸ್ನವರು ಮನೆಯನ್ನು ಸೀಜ್ ಮಾಡಿದ್ದಾರೆ. ಸದ್ಯ ಮನೆಯಿಲ್ಲದೇ ಗರ್ಭಿಣಿ ಮಹಿಳೆ ದೀನಾ ಬಿಲ್ಲಾ ಮನೆಯ ಹೊರಗಡೆ, ಹಿತ್ತಲಿನಲ್ಲಿ ವಾಸಿಸುತ್ತಿದ್ದಾರೆ.
ತೆಗೆದುಕೊಂಡ 5 ಲಕ್ಷದಲ್ಲಿ 2ವರೆ ಲಕ್ಷ ರೂಪಾಯಿ ಅಷ್ಟೇ ಸಾಲ ತೀರಿಸಿದ್ದಾರೆ. ಆದರೆ ಕಳೆದ 6 ತಿಂಗಳಿನಿಂದ ಸಾಲ ತುಂಬದೇ ಇರುವ ಕಾರಣಕ್ಕೆ, ಫೈನಾನ್ಸ್ನವರು ಅಕ್ಟೋಬರ್ನಲ್ಲಿ ಮನೆಗೆ ಬೀಗ ಹಾಕಿದ್ದಾರೆ. ಫೀಲಿಪ್ ಬಿಲ್ಲಾ ಅವರ ತಂದೆ ತೀರಿ ಹೋದಾಗಲೂ, ಎಷ್ಟೇ ಬೇಡಿಕೊಂಡರೂ ಫೈನಾನ್ಸ್ನವರು ಮನೆ ಕೀ ಕೊಡದೇ, ಮಾನವೀಯತೆ ಇಲ್ಲದವರಂತೆ ನಡೆದುಕೊಂಡಿದ್ದಾರೆ.




