Thursday, July 10, 2025

Latest Posts

ಎಕ್ಸ್‌ಪ್ರೆಸ್ BMTC – ಬಿಎಂಟಿಸಿ ಎಕ್ಸ್‌ಪ್ರೆಸ್ ಬಸ್ ಸ್ಪೆಷಲ್ ಏನು ಗೊತ್ತಾ?

- Advertisement -

ರಾಜ್ಯದಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗಳಿಗೆ ವೇಗಧೂತ ಎಕ್ಸ್‌ಪ್ರೆಸ್ ಬಸ್ ಸೇವೆಗಳು ಇದೆ. ಇದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗ ಬೆಂಗಳೂರಲ್ಲೂ ಬಿಎಂಟಿಸಿ ಎಕ್ಸ್‌ಪ್ರೆಸ್ ಬಸ್‌ಗಳ ಸಂಚಾರ ಆರಂಭವಾಗಿದೆ. ನಗರದ ವಿವಿಧ ಮಾರ್ಗಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಡಿಮೆ ನಿಲುಗಡೆಯ ವೇಗಧೂತ ಬಿಎಂಟಿಸಿ ಬಸ್ ಗಳನ್ನು ಬಿಡಲಾಗಿದೆ. ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದ್ದಾರೆ. ಈ ಬಸ್‌ಗಳಿಗೆ ಹತ್ತುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತು ಉತ್ತಮ ಸ್ಪಂದನೆ ಕೂಡ ವ್ಯಕ್ತವಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ನಗರದ ಪ್ರಮುಖ ಮಾರ್ಗಗಳ ಸಂಚಾರಕ್ಕಾಗಿ 5 ವೇಗಧೂತ ಎಕ್ಸ್‌ಪ್ರೆಸ್ ಬಸ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗುತ್ತಿದೆ. ಎಲ್ಲಾ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್‌ನಿಂದಲೇ ಹೊರಡುವುದಿಲ್ಲ. ಬದಲಾಗಿ ಬೇರೆ ಬೇರೆ ನಿಲ್ದಾಣಗಳಿಂದ ಉದ್ದೇಶಿತ ಸ್ಥಳಕ್ಕೆ ಜನರನ್ನು ತಲುಪಿಸುತ್ತಿವೆ.

ಉದಾಹರಣೆಗೆ ಮೆಜೆಸ್ಟಿಕ್ ಕೆಂಪೇಗೌಡ ಬಸ್‌ನಿಲ್ದಾಣ-ನೆಲಮಂಗಲ ವರೆಗೆ Ex 285 c ಬಸ್ ಬಿಡಲಾಗಿದೆ. ನೀವು ಈ ಬಸ್ ಏರಿದರೆ ಕೇವಲ ಐದು ಸ್ಟಾಪ್‌ಗಳನ್ನು ಮಾತ್ರವೇ ನೀಡುತ್ತದೆ. ಮಲ್ಲೇಶ್ವರಂ ಸೆಂಟ್ರಲ್, 18ನೇ ಕ್ರಾಸ್, ಗೋವರ್ಧನ್ ಟಾಕೀಸ್, ಗೊರಗುಂಟೆ ಪಾಳ್ಯ ಮತ್ತು ಅರಿಶಿಣಕುಂಟೆ ಟೋಲ್ ಹೀಗೆ ಅತೀ ಕಡಿಮೆ ನಿಲುಗಡೆ ಮೂಲಕ ವೇಗದ ಸಾರಿಗೆ ಸೇವೆ ಜನರಿಗೆ ಲಭ್ಯವಾಗಿದೆ. ಇದರಿಂದ ಜನರಿಗೆ ಸಮಯ ಉಳಿತಾಯವಾಗುತ್ತದೆ ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೇಗ ತಲುಪಬಹುದಾಗಿದೆ.

ಇನ್ನು ಈ ಬಸ್ ಗಳ ಟಿಕೆಟ್‌ದರ ಮತ್ತು ಮಾಸಿಕ ಪಾಸ್ ಸಿಗುತ್ತಾ ಅಂತ ನೋಡುತ್ತಾ ಹೋದರೆ –
ಬಸ್ ಗಳ ನಿಗದಿತ ನಿಲುಗಡೆಯಿಂದ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಒಂದು ಕಡೆ ಹತ್ತಿದರೆ ನೀವು ತಲುಪ ಬೇಕಾದ ಜಾಗ ಕೆಲವೇ ನಿಮಿಷಗಳಲ್ಲಿ ಬಂದು ಬಿಡುತ್ತದೆ. ಮೆಜೆಸ್ಟಿಕ್ ಕೆಂಪೇಗೌಡ ಬಸ್‌ನಿಲ್ದಾಣ-ನೆಲಮಂಗಲ ವರೆಗೆ ಒಬ್ಬರಿಗೆ 46 ರೂಪಾಯಿ ಟಿಕೆಟ್ ಶುಲ್ಕ ಇದೆ. ಇದೇ ರೀತಿ ಇನ್ನುಳಿದ ಬಸ್‌ಗಳಿಗೂ ಟಿಕೆಟ್ ಶುಲ್ಕ ವಿಧಿಸಲಾಗಿದೆ. ನೀವು ಮಾಸಿಕ ಪಾಸ್ ಬೇಕಾದಲ್ಲಿ ನೀವು 1500 ರೂಪಾಯಿ ಪಾವತಿ ಮಾಡಿ ತೆಗೆದುಕೊಳ್ಳಬಹುದಾಗಿದೆ. ಟೋಲ್ ಮಾರ್ಗಗಳಲ್ಲಿ ಅನ್ವಯಿಸುವ ದರವನ್ನು ಪಾವತಿಸುವುದು ಕಡ್ಡಾಯ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಸೇವೆ ಇರಲಿದೆ.

ಇನ್ನು ಯಾವ್ಯಾವ ಮಾರ್ಗಗಳಲ್ಲಿ ಬಿಎಂಟಿಸಿ ಸಂಚಾರ ಮಾಡುತ್ತೆ ಅಂತ ನೋಡ್ತಾ ಹೋದ್ರೆ –
ಬನಶಂಕರಿ-ಅತ್ತಿಬೆಲೆ ( ಬಸ್ ಸಂಖ್ಯೆ Ex 600F), ಬನಶಂಕರಿ ಟಿಟಿಎಂಸಿ-ಹೆರೋಹಳ್ಳಿ (Ex 213v), ಮೆಜೆಸ್ಟಿಕ್ ಕೆಂಪೇಗೌಡ ಬಸ್‌ನಿಲ್ದಾಣ-ಅತ್ತಿಬೆಲೆ (Ex KBS 3!), ಮೆಜೆಸ್ಟಿಕ್ ಕೆಂಪೇಗೌಡ ಬಸ್‌ನಿಲ್ದಾಣ-ದೇವನಹಳ್ಳಿವರೆಗೆ (Ex 298M) ವೇಗಧೂತ ಎಕ್ಸ್‌ಪ್ರೆಸ್ ಬಸ್‌ಗಳ ಕಾರ್ಯಾಚರಣೆ ಆರಂಭವಾಗಿದೆ.

ಈ ಮೊದಲು ಮೆಜೆಸ್ಟಿಕ್ ಅಥವಾ ಬೆಂಗಳೂರು ಹೃದಯಭಾಗದಿಂದ ದೂರದ ನಿಲ್ದಾಣಗಳಿಗೆ ಹೋಗಬೇಕಾದರೆ ಪ್ರಯಾಣಿಕರಿಗೆ ಹೆಚ್ಚಿನ ಸಮಯ ಹಿಡಿಯುತ್ತಿತ್ತು. ಅಲ್ಲದೇ ಹೆಚ್ಚಿನ ನಿಲ್ದಾಣ ನಿಲುಗಡೆಗೆ ಜನ ಹೈರಾಣಾಗುತ್ತಿದ್ದರು. ಆದರೆ ಈಗ ವಿಶೇಷ ಬಸ್ ಬಿಡುಗಡೆಯಿಂದಾಗಿ ಕಡಿಮೆ ಸಮಯದಲ್ಲಿ ಒಂದೇ ಬಸ್‌ನಲ್ಲಿ ಗಮ್ಯಸ್ಥಳ ತಲುಪುತ್ತಿದ್ದಾರೆ. ಹೀಗಾಗಿ ಈ ಬಿಎಂಟಿಸಿ ವೇಗಧೂತ ಎಕ್ಸ್‌ಪ್ರೆಸ್ ಬಸ್ ಗಳಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ.

- Advertisement -

Latest Posts

Don't Miss