Hassan News: ಹಾಸನ: ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂದು ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳಿಂದ ಖಾಸಗಿ ಕಂಪೆನಿಯೊಂದರಿಂದ ನೋಂದಾವಣಿ ಶುಲ್ಕದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಹಿನ್ನೆಲೆ ಉದ್ಯೋಗ ಆಕಾಂಕ್ಷಿಗಳು ಅರ್ಜಿಗಳಿಗೆ ಬೆಂಕಿ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಮಧ್ಯಸ್ಥಿಕೆಯಲ್ಲಿ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಇಲಾಖೆ, ಕಲಾ ಕಾಲೇಜು ಯುವ ಜನತೆಯ ಸಬಲೀಕರಣ, ದಿಶಾ ಗ್ರೂಪ್ಸ್ ಎಂಬ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಈ ಘಟನೆ ನಡೆದಿದೆ.
ಉದ್ಯೋಗ ಅರಸಿ ಇಂದು ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯ ಉದ್ಯೋಗ ಆಕಾಂಕ್ಷಿಗಳು ಕಲಾ ಕಾಲೇಜಿಗೆ ಬಂದಿದ್ದರು. ಈ ವೇಳೆ ದಿಶಾ ಗ್ರೂಪ್ಸ್ ಸಂಸ್ಥೆಯಿಂದ ನೋಂದಾವಣಿ ಹೆಸರಿನಲ್ಲಿ ತಲಾ 300 ರೂಪಾಯಿ ಶುಲ್ಕ ಪಡೆದಿದ್ದು, ಉದ್ಯೋಗ ಅರಸಿ ಬಂದಿದ್ದ ಬಡ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಉದ್ಯೋಗ ಮೇಳದಲ್ಲಿ ಭವಹಿಸುವ ಸರ್ಕಾರಿ ಕಲಾ ಕಾಲೇಜು ವಿಧ್ಯಾರ್ಥಿಗಳಿಗೆ ಮಾತ್ರ ವಿನಾಯಿತಿ ನೀಡಿ ಇನ್ನುಳಿದ, ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ತಲಾ 300 ರೂಪಾಯಿ ಪಡೆದಿದ್ದು, ಇದನ್ನು ಖಂಡಿಸಿ ಕೆಲ ವಿಧ್ಯಾರ್ಥಿಗಳು ಪ್ರತಿಭಟನೆಗೂ ಮುಂದಾದರು. ಕೊನೆಗೆ ಪೊಲೀಸರ ಮಧ್ಯ ಪ್ರವೇಶದಿಂದ ಉದ್ಯೋಗ ಆಕಾಂಕ್ಷಿಗಳಿಗೆ ಹಣವನ್ನು ವಾಪಸ್ ಕೊಡಿಸಿದ್ದಾರೆ.
ಈ ಬಗ್ಗೆ ಪ್ರಾಂಶುಪಾಲರಾದ ಪುಟ್ಟರಾಜು ಮಾತನಾಡಿ, ಜಿಲ್ಲೆಯಲ್ಲಿನ ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಹಣ ವಸೂಲಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದರು.
ತಕ್ಷಣ ದಿಶಾ ಗ್ರೂಪ್ಸ್ ಸಂಸ್ಥೆಯ ಮಾಲೀಕ ಪುನೀತ್ ಎಂಬಾತನನ್ನು ಕರೆಸಿ ಪ್ರಾಂಶುಪಾಲರಾದ ಪುಟ್ಟರಾಜು ತರಾಟೆಗೆ ತೆಗೆದುಕೊಂಡರು, ತಮ್ಮ ಈ ಕೆಲಸದಿಂದ ನಮ್ಮ ಕಾಲೇಜಿಗೆ ಕೆಟ್ಟ ಹೆಸರು ಬರಲಿದೆ, ಇಂಥಹ ಕೆಲಸ ಮಾಡಕೂಡದು ಎಂದು ಎಚ್ಚರಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್