Hassan News: ಮದುವೆ ಅಂದರೆ ಬರೀ ಒಂದು ಸಂಭ್ರಮದ ಕಾರ್ಯಕ್ರಮವಲ್ಲ. ಅದು ಆ ಮಕ್ಕಳನ್ನು ಹೆತ್ತ ಅಪ್ಪ ಅಮ್ಮನ ಹಲವು ವರ್ಷದ ಕನಸು. ಯಾರ ಬಳಿಯೂ ಸಾಲ ಮಾಡದೇ, ಸ್ವಾಭಿಮಾನದಿಂದ ಮದುವೆ ಮಾಡಬೇಕು ಅಂತಾ ಕೆಲವರು ವರ್ಷಗಟ್ಟಲೇ ಕೂಡಿಟ್ಟ ಎಲ್ಲ ಸೇವಿಂಗ್ಸ್ ಸುರಿದುಬಿಡುವ ದಿನ. ಇನ್ನು ಕೆಲವರು ಸಾಲ ಸೋಲ ಮಾಡಿ, ಹೇಗೋ ದುಡ್ಡು ಹೊಂದಿಸಿ, ಮಕ್ಕಳನ್ನು ದಡ ತಲುಪಿಸಿಬಿಡಬೇಕು ಎಂದು ಕಾದು ಕುಳಿತ ದಿನ.
ಹೀಗಿರುವ ಮಗಳು ಹಸೆಮಣೆ ತನಕ ಬಂದು ಕುಳಿತು, ತಾಳಿ ಕಟ್ಟುವ ಸಮಯದಲ್ಲಿ ವಧು ಮದುವೆ ಮಂಟಪ ಬಿಟ್ಟು ಹೋದರೆ ಆ ತಂದೆ ತಾಯಿಗೆ ಹೇಗಾಗುವುದಿಲ್ಲ. ಇದು ಯಾವುದೋ ಸಿನಿಮಾ ಕಥೆಯಲ್ಲ ಬದಲಾಗಿ, ಹಾಸನದಲ್ಲಿ ನಿಜವಾಗಿಯೂ ನಡೆದ ಘಟನೆ.
ಹಾಸನದ ಆದಿಚುಂಚನಗಿರಿ ಕಲ್ಯಾಣಮಂಟಪದಲ್ಲಿ ಈ ಘಟನೆ ನಡೆದಿದ್ದು, ಹಾಸನ ತಾಲೂಕಿನ ಬೂವನಹಳ್ಳಿ ಯುವತಿ ಮತ್ತು ಆಲೂರು ತಾಲೂಕಿನ ಯುವಕನಿಗೆ ಮದುವೆ ಫಿಕ್ಸ್ ಆಗಿತ್ತು. ಆದರೆ ವಧು ಹಸೆಮಣೆ ಏರುತ್ತಿದ್ದಂತೆ, ಆಕೆಯ ಬಾಯ್ಫ್ರೆಂಡ್ ಕಾಲ್ ಮಾಡಿ ಮಾತನಾಡಿದ್ದಾನೆ. ಹಾಗಾಗಿ ತಾಳಿ ಕಟ್ಟುವ ಸಮಯಕ್ಕೆ ವಧು ತನಗೆ ಮದುವೆ ಬೇಡವೆಂದು ಮದುವೆ ಮಂಟಪದಿಂದ ಎದ್ದು ನಡೆದಿದ್ದಾಳೆ.
ಇನ್ನು ತಾನೂ ಕೂಡ ಒತ್ತಾಯಪೂರ್ವಕವಾಗಿ ವಿವಾಹವಾಗುವುದಿಲ್ಲ ಎಂದು ವರ ಕಣ್ಣೀರಿಡುತ್ತ, ಮದುವೆ ಮಂಟಪದಿಂದ ಎದ್ದು ಹೋಗಿದ್ದಾನೆ. ಏನೇ ಹೇಳಿದರೂ ವಧು ಈ ಮದುವೆಗೆ ಓಕೆ ಎನ್ನದಿದ್ದಾಗ, ಕೊನೆ ಘಳಿಗೆಯಲ್ಲಿ ಮದುವೆ ಮುರಿದುಬಿದ್ದಿದೆ.
ವಧುವಿಗೆ ಈ ಮೋದಲೇ ಪ್ರೀತಿ ಇತ್ತು ಅಂತಾ ವಧುವಿನ ಮನೆಯವರಿಗೆ ಗೊತ್ತೇ ಇರಲಿಲ್ಲ. ಮದುವೆ ಮನೆಯಲ್ಲಿಯೇ ಈ ವಿಷಯ ಕೇಳಿ ವಧುವಿನ ಮನೆಯವರಿಗೆ ಮತ್ತು ಮದುವೆಗೆ ಬಂದವರಿಗೆ ಶಾಕ್ ಆಗಿದೆ. ವಧು ವರ ಇಬ್ಬರ ಮನೆಯವರನ್ನು ಪೋಲೀಸರು ಠಾಣೆಗೆ ಕರೆದ“ಯ್ದು ವಿಚಾರಣೆ ನಡೆಸಿದ್ದಾರೆ. ಬಳಿಕ ವಧು ತಾನು ಪ್ರೀತಿಸುತ್ತಿರುವ ಪ್ರಿಯಕರನನ್ನು ಠಾಣೆಗೆ ಕರೆಸಿದ್ದು, ವಧುವಿಗೂ ಪ್ರಿಯಕರನಿಗೂ ಮನೆಯವರ ಸಮ್ಮುಖದಲ್ಲಿ ಗಣಪತಿ ದೇವಸ್ಥಾನದಲ್ಲಿ ಮದುವೆ ಮಾಡಲಾಗಿದೆ.