Tuesday, June 3, 2025

Latest Posts

ಹುಬ್ಬಳ್ಳಿಯ ಟೈಗರ್ಸ್‌ಗೆ ಹೆದರಿದ ಶಿವಮೊಗ್ಗ ಸ್ಟ್ರೈಕರ್ಸ್‌

- Advertisement -

 

ಮೈಸೂರು:ಮೊಹಮ್ಮದ್‌ ತಾಹ (78*) ಹಾಗೂ ಶ್ರೀನಿವಾಸ್‌ ಶರತ್‌ (41) ಅವರ ಬ್ಯಾಟಿಂಗ್‌ ನೆರವಿನಿಂದ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 6 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್‌ ಮಹಾರಾಜ ಟ್ರೋಫಿಯಲ್ಲಿ ಮತ್ತೆ ಜಯದ ಲಯಕ್ಕೆ ತಿರುಗಿದೆ.

134 ರನ್‌ ಜಯದ ಗುರಿ ಹೊತ್ತ ಹುಬ್ಬಳ್ಳಿ ಟೈಗರ್ಸ್‌ ಪರ ಮೊಹಮ್ಮದ ತಹಾ 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ಅಜೇಯ 78 ರನ್‌ ಸಿಡಿಸಿ ಇನ್ನೂ 16 ಎಸೆತ ಬಾಕಿ ಇರುವಾಗಲೇ ಜಯ ತಂದಿತ್ತರು.

ಸಿದ್ಧಾರ್ಥ್‌ ಅಸಾಧಾರಣ ಬ್ಯಾಟಿಂಗ್‌:
ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್‌ ಎದುರಾಳಿ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡವನ್ನು 133 ರನ್‌ಗೆ ಕಟ್ಟಿ ಹಾಕಿತು. ಕೃಷ್ಣಮೂರ್ತಿ ಸಿದ್ಧಾರ್ಥ್‌ (62*) ಮತ್ತು ಡಿ. ಅವಿನಾಶ್‌ (41) ಹೊರತುಪಡಿಸಿದರೆ ಉಳಿದ ಆಟಗಾರರು ಹುಬ್ಬಳ್ಳಿ ಟೈಗರ್ಸ್‌ ಬೌಲಿಂಗ್‌ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.

ರೋಹನ್‌ ಕದಮ್‌, ಬಿ.ಆರ್‌. ಶರತ್‌ ಹಾಗೂ ನಾಯಕ ಕೃಷ್ಣಪ್ಪ ಗೌತಮ್‌ 1, 3, 4 ಎಂದು ಪೆವಿಲಿಯನ್‌ ಹಾದಿ ಹಿಡಿದದ್ದು ಶಿವಮೊಗ್ಗ ರನ್‌ ಗಳಿಕೆಗೆ ನಿಯಂತ್ರಣ ಬೀಳಲು ಪ್ರಮುಖ ಕಾರಣವಾಯಿತು. ನಾಯಕ ಅಭಿಮನ್ಯು ಮಿಥುನ್‌ (20ಕ್ಕೆ 2) ಹಾಗೂ ಹಾಗೂ ವಾಸುಕಿ ಕೌಶಿಕ್‌ 25ಕ್ಕೆ 3 ಉತ್ತಮ ಬೌಲಿಂಗ್‌ ಪ್ರದರ್ಶಿಸಿ ಶಿವಮೊಗ್ಗವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು.

26 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಶಿವಮೊಗ್ಗಕ್ಕೆ ನೆರವಾದುದು ಕೃಷ್ಣಮೂರ್ತಿ ಶರತ್‌ ಅವರ ಇನ್ನಿಂಗ್ಸ್‌. 53 ಎಸೆತಗಳನ್ನೆದುರಿಸಿದ ಶರತ್‌ 6 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ ಅಜೇಯ 62 ರನ್‌ ಗಳಿಸಿ ತಂಡಕ್ಕೆ ನೆರವಾದರು.

ಇನ್ನೊಂದೆಡೆ ಡಿ. ಅವಿನಾಶ್‌ 36 ಎಸೆತಗಳನ್ನೆದುರಿಸಿ 2 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 41 ರನ್‌ ಗಳಿಸಿ ಶರತ್‌ ಅವರಿಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದರು. ನಿನ್ನೆ 84 ರನ್‌ ಗಳಿಸಿ ಆತ್ಮವಿಶ್ವಾಸ ಮೂಡಿಸಿದ್ದ ರೋಹನ್‌ ಕದಮ್‌ ಇಂದು 1 ರನ್‌ ಗಳಿಸಿ ಪೆವಿಲಿಯನ್‌ ಸೇರಿದ್ದು ಶಿವಮೊಗ್ಗದ ಮೊತ್ತದ ಮೇಲೆ ಕಡಿವಾಣ ಹಾಕಿದಂತಾಯಿತು.

ಸಂಕ್ಷಿಪ್ತ ಸ್ಕೋರ್‌:
ಶಿವಮೊಗ್ಗ ಸ್ಟ್ರೈಕರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 133 (ಕೆ ಸಿದ್ಧಾರ್ಥ್‌ 62* ಡಿ. ಅವಿನಾಸ್‌ 41, ಅಭಿಮನ್ಯು ಮಿಥುನ್‌ 20ಕ್ಕೆ 2, ಕೌಶಿಕ್‌ 25ಕ್ಕೆ 3)
ಹುಬ್ಬಳ್ಳಿ ಟೈಗರ್ಸ್‌: 17.2 ಓವರ್‌ಗಳಲ್ಲಿ 4 ವಿಕೆಟ್‌ಗೆ 134 (ಮೊಹಮ್ಮದ್‌ ತಾಹ 78*, ಶರತ್‌ 41, ಸ್ಟಾಲಿನ್‌ ಹೂವರ್‌ 13ಕ್ಕೆ 1)

- Advertisement -

Latest Posts

Don't Miss