ಬಾಂಗ್ಲಾದೇಶ ವೇಗಿ ಮುಸ್ತಾಫಿಜರ್ ರಹ್ಮಾನ್ರನ್ನು ಐಪಿಎಲ್ನಿಂದ ಹೊರಗಿಟ್ಟ ಬಳಿಕ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈಗ ಖಡಕ್ ಸೂಚನೆ ಜೊತೆಗೆ ಎಚ್ಚರಿಕೆಯನ್ನೂ ಕೊಟ್ಟಿದೆ.
ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲೇ ಆಡಬೇಕೆಂದು ಬಾಂಗ್ಲಾಗೆ ತಾಕೀತು ಮಾಡಿರುವ ಐಸಿಸಿ, ಇದರ ಬಗ್ಗೆ ಜನವರಿ 21ಕ್ಕೂ ಮುನ್ನ ತಿಳಿಸುವಂತೆ ಸೂಚಿಸಿದೆ. ತಪ್ಪಿದ್ರೆ ಬೇರೊಂದು ತಂಡಕ್ಕೆ ಅವಕಾಶ ನೀಡುವುದಾಗಿ ಎಚ್ಚರಿಕೆ ನೀಡಿದೆ.
ಇನ್ನು, ಬಾಂಗ್ಲಾದೇಶ ತಂಡ ತನ್ನ ಬೇಡಿಕೆಗೇ ಜೋತು ಬಿದ್ದರೆ, ಆ ಜಾಗಕ್ಕೆ
ಸ್ಕಾಟ್ಲೆಂಡ್ ಪ್ರವೇಶ ಗಿಟ್ಟಿಸಿಕೊಳ್ಳಬಹುದು ಸಾಧ್ಯತೆ ಇದೆ. ಬಿಸಿಸಿಐ ಸೂಚನೆ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ತೆಗೆದುಹಾಕಿದ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.
ಇಂದು ತನ್ನ ನಿರ್ಧಾರ ತಿಳಿಸಲು ಬಾಂಗ್ಲಾದೇಶಕ್ಕೆ ಇಂದು ಕೊನೆ ದಿನವಾಗಿದೆ. ಒಂದು ವೇಳೆ ಭಾರತಕ್ಕೆ ಬರಲು ನಿರಾಕರಿಸಿದರೆ, ಶ್ರೇಯಾಂಕದ ಆಧಾರದ ಮೇಲೆ ಬೇರೆ ತಂಡಕ್ಕೆ ಪಂದ್ಯಾವಳಿಯಲ್ಲಿ ಆಡಲು ಅವಕಾಶ ನೀಡುವುದಕ್ಕೆ ಅವರು ಸಿದ್ಧರಾಗಿರಬೇಕು ಎಂದು ಐಸಿಸಿ ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದ ಆಟಗಾರರ ಭದ್ರತೆಯನ್ನು ಉಲ್ಲೇಖಿಸಿ, ಬಿಸಿಬಿ ತನ್ನ ರಾಷ್ಟ್ರೀಯ ತಂಡವು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯುವ ಗುಂಪು ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದೆ.




