Hubli News: ಹುಬ್ಬಳ್ಳಿ: ಕೈ ಶಾಸಕ ಸಂಗಮೇಶ್ ಪುತ್ರ ಮಹಿಳಾ ಅಧಿಕಾರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದು, ಈ ಘಟನೆ ಬಗ್ಗೆ ನನಗೆ ಮಾಹಿತಿಯೇ ಇಲ್ಲವೆಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಜಾರಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಟೀಲರು, ನನಗೆ ವಿಷಯದ ಬಗ್ಗೆ ಮಾಹಿತಿಯೇ ಇಲ್ಲವೆಂದು ಹೇಳಿದ್ದಾರೆ. ಶಾಸಕರ ಪುತ್ರನ ದರ್ಪದ ಬಗ್ಗೆ ಈಗಾಗಲೇ ವರದಿ ಬಿತ್ತರವಾಗಿದ್ದು, ರಾಜ್ಯದೆಲ್ಲೆಡೆ ಸುದ್ದಿಯಾಗಿದೆ. ಆದರೂ ಈ ಬಗ್ಗೆ ಮಾಹಿತಿ ಇಲ್ಲವೆಂದು ಕಾನೂನು ಸಚಿವರು ಹೇಳಿದ್ದಾರೆ. ಅಲ್ಲದೇ ಘಟನೆ ಬಗ್ಗೆ ವಿವರಿಸಿದ ಬಳಿಕ, ಮಹಿಳಾ ಅಧಿಕಾರಿಯ ಮೇಲೆ ದರ್ಪ ತೋರುವ ಘಟನೆ ಆಗಬಾರದು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇಂತಹ ಘಟನೆಗಳ ಬಗ್ಗೆ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತದೆ. ನಾವು ಕಾನೂನು ಬೀಗಿ ಮಾಡುತ್ತಿರುವುದರಿಂದ ಅತೃಪ್ತ ಮನಸ್ಸುಗಳು ಈ ರೀತಿ ವರ್ತಿಸುತ್ತವೆ. ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಸರ್ಕಾರ ಗಮನ ಹರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ತ್ರಿವೇಣಿ ಸಂಗಮ ಪುಣ್ಯ ಸ್ನಾನದ ಬಗ್ಗೆ ಹಗುರವಾಗಿ ಮಾತಾಡುವವರು ಮೂರ್ಖರು ಎಂಬ ಪೆಜಾವರ ಮಠ ಶ್ರೀಗಳ ಪ್ರತಿಕ್ರಿಯಿಸಿದ ವಿಚಾರದ ಬಗ್ಗೆ ಮಾತನಾಡಿದ ಪಾಟೀಲರು, ಯಾರು ಪರ ಪ್ರತಿಕ್ರಿಯೆ ನೀಡಿದ್ದಾರೆ ಅವರೇ ಇದಕ್ಕೆ ಉತ್ತರಿಸಬೇಕು. ಯಾರು ವಿರೋಧ ಪ್ರತಿಕ್ರಿಯೆ ನೀಡಿದ್ದಾರೆ ಅವರೇ ಉತ್ತರಿಸುವುದು ಸೂಕ್ತ ಎಂದು ಕಾನೂನು ಸಚಿವರು ಹೇಳಿದರು.