ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಕಸದ ರಾಶಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಉದ್ಯಮಿ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ ಸರ್ಕಾರ–ಐಟಿ ವಲಯದ ನಡುವಿನ ಟ್ವೀಟ್ ವಾರಿಗೆ ಕಾರಣವಾಯಿತು. ನಾನೇ ಬೆಂಗಳೂರಿನ 10ಕ್ಕೂ ಹೆಚ್ಚು ರಸ್ತೆಗಳ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂಬ ಅವರ ಟ್ವೀಟ್ ನಂತರ, ಅವರು ಕನ್ನಡದವರಲ್ಲ ಎಂಬ ಚರ್ಚೆಯೂ ಹರಿದಾಡಿತು.
ಈ ವಿವಾದಕ್ಕೆ ಕಿರಣ್ ಮಜುಂದಾರ್ ಶಾ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಬೆಂಗಳೂರಿನಲ್ಲೇ ಹುಟ್ಟಿದ್ದು, 7 ದಶಕಗಳಿಂದ ಇಲ್ಲಿ ಪ್ರೀತಿಯಿಂದ ನೆಲೆಸಿದ್ದೇನೆ. ಕನ್ನಡ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ ಮತ್ತು ಕನ್ನಡ ಓದಲು, ಬರೆಯಲು, ಮಾತನಾಡಲು ಬರುತ್ತದೆ. ಕರ್ನಾಟಕದ ಬಗೆಗಿನ ನನ್ನ ನಿಷ್ಠೆಯನ್ನು ಪ್ರಶ್ನಿಸುವ ಅಗತ್ಯವಿಲ್ಲ. ನಾನು ಹೆಮ್ಮೆಯ ಕನ್ನಡಿಗ ಎಂದು ಹೇಳಿದ್ದಾರೆ.
ರಸ್ತೆಗಳ ಅವ್ಯವಸ್ಥೆ ಕುರಿತು ಐಟಿ ಉದ್ಯಮಿಗಳು ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಅದರಿಂದ ಸರ್ಕಾರ–ಉದ್ಯಮಿಗಳ ನಡುವೆ ವಿವಾದ ಉಂಟಾಯಿತು. ಕಿರಣ್ ಮಜುಂದಾರ್ ಶಾ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆದ ಟ್ವೀಟ್ ವಾರ ಕೂಡ ಸುದ್ದಿಯಾಯಿತು.
ವಿವಾದದ ನಂತರ, ಕಿರಣ್ ಮಜುಂದಾರ್ ಶಾ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದರು. ಸಭೆಯಲ್ಲಿ ಇಬ್ಬರು ನಾಯಕರು ರಸ್ತೆ ಅಭಿವೃದ್ಧಿಗೆ ಭರವಸೆ ನೀಡಿದರೆಂದು ವರದಿಯಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ