ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಭಾರತದ ಆಪರೇಷನ್ ಸಿಂಧೂರಕ್ಕೆ ಕಂಗಾಲಾಗಿ ಹೋಗಿರುವ ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ರೀತಿಯಲ್ಲಿ ಭಾರತದ ಕ್ಷಿಪಣಿಗಳಿಂದ ಗುಮ್ಮಿಸಿಕೊಂಡ ಪಾಕಿಸ್ತಾನ ಭಾರತದ ಮೇಲೆ ದೊಡ್ಡ ಮಟ್ಟದ ದಾಳಿಗೆ ವಿಫಲ ಯತ್ನ ನಡೆಸಿದೆ.
ಇನ್ನೂ ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಹಾಗು ಗುಜರಾತ್ನಲ್ಲಿರುವ ಸೇನಾ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಇದರೊಂದಿಗೆ ಶ್ರೀನಗರ, ಪಠಾಣ್ಕೋಟ್, ಅಮೃತಸರ, ಲೂಧಿಯಾನ ಹಾಗೂ ಚಂಡೀಗಢ ಸೇರಿದಂತೆ 15 ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಸೇನೆಯು ಡ್ರೋನ್ ಬಳಸಿ ಕ್ಷಿಪಣಿ ದಾಳಿ ನಡೆಸಿತ್ತು.
ಭಾರತದತ್ತ ಕ್ಷಿಪಣಿ ಬರುತ್ತಿರುವುದನ್ನು ಅರಿತ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ತಾನಾಗಿಯೇ ಆಕ್ಟಿವೇಟ್ ಆಗಿ ಈ ಎಲ್ಲಾ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಇದಕ್ಕೆ ಪ್ರತಿಯಾಗಿ ಇದೇ ಮಾದರಿಯಲ್ಲೇ ಭಾರತದ ವಾಯುಸೇನೆಯು ಪಾಕ್ಗೆ ಉತ್ತರ ನೀಡಿದೆ. ಪರಿಣಾಮ ಪಾಕಿಸ್ತಾನದ ಚೀನಾ ನಿರ್ಮಿತ ಎಚ್ಕ್ಯು 16 ಎಡಿಎಸ್ ಸಿಸ್ಟಮ್ ಸಂಪೂರ್ಣವಾಗಿ ಧ್ವಂಸವಾಗಿದೆ. ಲಾಹೋರ್ನಲ್ಲಿದ್ದ ಈ ಏರ್ ಡಿಫೆನ್ಸ್ ಸಿಸ್ಟಮ್ ಪಾಕಿಸ್ತಾನದ ಪ್ರಮುಖ ವಾಯುನೆಲೆಯಾಗಿತ್ತು.
ಸುದರ್ಶನ ಚಕ್ರ ಪ್ರಯೋಗಕ್ಕೆ ವಾಯು ನೆಲೆ ಧ್ವಂಸ..!
ಇನ್ನೂ ಭಾರತ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಮೇಲೆ ಸುದರ್ಶನ ಚಕ್ರ ಪ್ರಯೋಗ ಮಾಡಿದೆ. ರಷ್ಯಾ ನಿರ್ಮಿತ ಏರ್ ಡಿಫೆನ್ಸ್ ವ್ಯವಸ್ಥೆಯಾದ ಎಸ್-400ಗೆ ಭಾರತೀಯ ಸೇನೆ ಸುದರ್ಶನ ಚಕ್ರ ಎಂದು ಹೆಸರಿಟ್ಟಿದ್ದು, ಇದರ ಮೂಲಕವೇ ನಿನ್ನೆ ರಾತ್ರಿ ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನ ಸೇನೆಯು ಡ್ರೋನ್ ಬಳಸಿ ಕ್ಷಿಪಣಿ ದಾಳಿ ನಡೆಸಿತ್ತು.
ಇದೇ ಮಾದರಿಯಲ್ಲೇ ಭಾರತದ ವಾಯುಸೇನೆಯು ಪಾಕ್ಗೆ ಉತ್ತರ ನೀಡಿದೆ. ಅಲ್ಲದೆ ಪ್ರಮುಖವಾಗಿ ಶೇಖ್ಪುರ, ಸಿಯಾಲ್ಕೋಟ್, ಗುಜರನ್ವಾಲಾ, ನರೊವಾಲಾ ಮತ್ತು ಚಕ್ವಾಲ್ ಮೇಲೂ ಭಾರತದ ಕಾಮಕಾಜಿ ಡ್ರೋನ್ ದಾಳಿ ನಡೆಸಿದೆ. ಒಟ್ಟು 25 ಕ್ಷಿಪಣಿಗಳನ್ನು ಹಾರಿಸಲಾಗಿದೆ. ಇದರಲ್ಲಿ ಏಳು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯನ್ನು ಗುರಿಯಾಗಿಸಿ ಹಾರಿಸಲಾಗಿತ್ತು. ಮೊದಲ ಡ್ರೋನ್ ದಾಳಿಯ ಕೆಲವು ಗಂಟೆಗಳ ನಂತರ, ಭಾರತದ ರಕ್ಷಣಾ ಸಚಿವಾಲಯವು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. ಡ್ರೋನ್ ಬಳಸಿ ಪಾಕಿಸ್ತಾನದ ಲಾಹೋರ್ ಸೇನಾ ನೆಲೆಗಳ ಮೇಲೂ ಭಾರತ ದಾಳಿ ನಡೆಸಿದೆ.
ಎಸ್ 400 ವೈಶಿಷ್ಟ್ಯವೇನು..?
0S-400 ವಾಯು ರಕ್ಷಣಾ ವ್ಯವಸ್ಥೆಯು 600 ಕಿಲೋ ಮೀಟರ್ ದೂರದವರೆಗೆ ವೈಮಾನಿಕ ದಾಳಿಗಳನ್ನು ಪತ್ತೆಹಚ್ಚಬಲ್ಲದು ಮತ್ತು ಫೈಟರ್ ಜೆಟ್ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಪ್ರತಿಬಂಧಿಸಬಲ್ಲದು, ಇದು ಭಾರತದ ಭದ್ರತಾ ಶಸ್ತ್ರಾಗಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏಕಕಾಲದಲ್ಲಿ 300 ಸ್ಥಳಗಳಲ್ಲಿ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಷಿಪಣಿಗಳು ಹಲವಾರು ಸ್ಥಳಗಳಿಗೆ ಅಪ್ಪಳಿಸಿ ನೂರಾರು ಜನರನ್ನು ಕೊಂದ ಬಳಿಕ ಭಾರತವು ಪಾಕಿಸ್ತಾನದ ಮೇಲೆ ದಾಳಿ ಡ್ರೋನ್ಗಳನ್ನು ಹಾರಿಸಿ ದಾಳಿ ಮಾಡಿದ್ದು, ಇದರಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಸೇನೆ ಹೇಳಿದ್ದೇನು..?
ಇನ್ನೂ ಭಾರತ ಕೈಗೊಂಡಿರುವ ಆಪರೇಷನ್ ಸಿಂಧೂರ್ 2.0 ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ, ಪಾಕಿಸ್ತಾನದ ಡ್ರೋನ್, ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದೇವೆ. ಪಶ್ಚಿಮ ಭಾರತ, ಉತ್ತರ ಭಾರತದ ನಗರಗಳನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನ ಡ್ರೋನ್, ಕ್ಷಿಪಣಿ ದಾಳಿಗೆ ಯತ್ನಿಸಿತ್ತು. S-400 ಏರ್ಡಿಫೆನ್ಸ್ ಮೂಲಕ ಪಾಕಿಸ್ತಾನದ ದಾಳಿ ತಡೆದಿದ್ದೇವೆ. ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಮೇಲೂ ದಾಳಿ ಮಾಡಿದ್ದೇವೆ ಎಂದು ಹೇಳಿದೆ. ಭಾರತೀಯ ಸೇನೆಯ ಈ ದಾಳಿಯಿಂದ ಪಾಕಿಸ್ತಾನದ ವಾಯು ರಕ್ಷಣಾ ಘಟಕಗಳು ಗಂಭೀರ ಹಾನಿಯನ್ನು ಅನುಭವಿಸಿವೆ ಎಂದು ತಿಳಿಸಿದೆ.
ಭಾರತದ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಹಲವು ವಾಯು ರಕ್ಷಣಾ ರಾಡಾರ್ ವ್ಯವಸ್ಥೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಜಮ್ಮು-ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲ, ಉರಿ, ಪೂಂಚ್, ಮೆಂಧರ್, ರಜೌರಿ ಸೆಕ್ಟರ್ನಲ್ಲಿ ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗಿತ್ತು. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಫಿರಂಗಿ ಬಳಸಿ ಅಪ್ರಚೋದಿತ ದಾಳಿ ನಡೆಸಲಾಗಿತ್ತು. ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ 16 ಜನರು ಮೃತಪಟ್ಟಿದ್ದಾರೆ. ಮೂವರು ಮಹಿಳೆಯರು, ಐವರು ಮಕ್ಕಳು ಸೇರಿದಂತೆ 16 ಜನ ಸಾವನ್ನಪ್ಪಿದ್ದಾರೆ. ಈ ದಾಳಿಗೆ ಭಾರತ ಪ್ರತ್ಯುತ್ತರ ನೀಡಿದ್ದು, ಪಾಕಿಸ್ತಾನ ಸೇನೆ ದಾಳಿ ಮುಂದುವರಿಸಿದರೆ ದಾಳಿ ಮುಂದುವರೆಸಲಾಗುವುದು ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.