ಮೊದಲ ಭಾಗದಲ್ಲಿ ಶಿವನ 4 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಶರಭಾವತಾರ, ಪಿಪ್ಲಾವತಾರ, ನಂದಿ ಅವತಾರ, ಭೈರವನ ಅವತಾರದ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನೂ 4 ಅವತಾರದ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ..
ಐದನೇಯದ್ದು ಅಶ್ವತ್ಥಾಮ. ದ್ರೋಣಾಚಾರ್ಯರ ಒಬ್ಬನೇ ಮಗನಾದ ಅಶ್ವತ್ಥಾಮ ಚಿರಂಜೀವಿ ಎಂಬ ವರ ಪಡೆದವನಾಗಿದ್ದ. ಕಾಲ, ಕ್ರೋಧ, ಯಮ ಮತ್ತು ಶಿವನ ಅವತಾರವಾಗಿದ್ದ ಅಶ್ವತ್ಥಾಮನ ಜನ್ಮಕ್ಕಾಗಿ ದ್ರೋಣಾಚಾರ್ಯರು ಶಿವನನ್ನು ಕುರಿತು ಕಠಿಣ ತಪಸ್ಸು ಮಾಡಿದ್ದರು. ಈಗಲೂ ಕೂಡ ಅಶ್ವತ್ಥಾಮ ಬದುಕಿದ್ದಾನೆಂದೇ ಹೇಳಲಾಗುತ್ತದೆ.
ಆರನೇಯದಾಗಿ ವೀರಭದ್ರನ ಅವತಾರ. ಸತಿದೇವಿಯ ತಂದೆ ದಕ್ಷರಾಜ ಯಜ್ಞಕ್ಕಾಗಿ ತನ್ನನ್ನು ತನ್ನ ಪತಿಯನ್ನು ಕರೆಯಲಿಲ್ಲವೆಂದು ಅವಮಾನಿತಳಾಗಿ ಅಗ್ನಿಗೆ ಹಾರಿದ್ದಳು. ಇದರಿಂದ ಕ್ರೋಧಿತನಾಗಿದ್ದ ಶಿವ ಆಕೆಯ ಶವವನ್ನು ಹಿಡಿದು, ಕ್ರೋಧದಿಂದ ನರ್ತಿಸಿದಾಗ, ನೆಲಕ್ಕೆ ಬಡಿದ ಅವನ ಜಟೆಯ ಸಣ್ಣ ಭಾಗದಿಂದ ಜನ್ಮಿಸಿದವನೇ ವೀರಭದ್ರ. ಇವನು ದಕ್ಷರಾಜ ಸಂಹಾರ ಮಾಡಿದನು. ನಂತರ ದೇವತೆಗಳು ಹೇಳಿದ ಮೇರೆಗೆ, ಶಿವ, ದಕ್ಷನಿಗೆ ಆಡಿನ ಮುಖವನ್ನು ಸೇರಿಸಿ, ಮತ್ತೆ ಜೀವಭಿಕ್ಷೆ ನೀಡಿದ್ದ.
ಏಳನೇಯದ್ದು ಗೃಹಪತಿ ಅವತಾರ. ನರ್ಮದಾ ನದಿ ತೀರದಲ್ಲಿ ಧರ್ಮಪುರವೆಂಬ ಊರಿತ್ತು. ಅಲ್ಲಿ ವಿಶ್ವಾನರ್ ಹೆಸರಿನ ಮುನಿ ಮತ್ತು ಅವರ ಪತ್ನಿ ಸುಚೇಶ್ಮತಿ ವಾಸವಿದ್ದರು. ಅವರಿಗೆ ಸಂತಾನವಿರಲಿಲ್ಲ. ಹಾಗಾಗಿ ಸುಚೇಶ್ಮತಿ ತನಗೆ ಶಿವನ ಸಮಾನನಾದ ಪುತ್ರ ಬೇಕೆಂದು, ಮುನಿಗಳಲ್ಲಿ ಕೇಳಿದಳು. ಅದಕ್ಕಾಗಿ ಮುನಿಗಳು ಕಾಶಿಗೆ ಬಂದು ಶಿವನನ್ನು ಕುರಿತು ತಪಸ್ಸು ಮಾಡಿದರು. ತಪಸ್ಸಿನ ಫಲವಾಗಿ ಜನಿಸಿದವನೇ ಗೃಹಪತಿ.
ಎಂಟನೇಯದ್ದು ಋಷಿ ದೂರ್ವಾಸರ ಅವತಾರ. ಅನುಸೂಯಾ ದೇವಿಯ ಮನೆಗೆ ಬಂದ ತ್ರಿಮೂರ್ತಿಗಳು, ಬಾಲಕರಾಗಿ ಅನುಸೂಯಾಳ ಸ್ತನಪಾನ ಮಾಡಿದರು. ನಂತರ ತಮ್ಮ ನಿಜ ರೂಪಕ್ಕೆ ಬಂದು, ತಮ್ಮ ಅಂಶಗಳೇ ನಿಮ್ಮ ಹೊಟ್ಟೆಯಲ್ಲಿ ಪುತ್ರರಾಗಿ ಹುಟ್ಟಲಿ ಎಂದು ವರ ನೀಡದರು. ಹೀಗಾಗಿ ಬ್ರಹ್ಮನ ಅಂಶವಾಗಿ ದತ್ತಾತ್ರೇಯ, ವಿಷ್ಣುವಿನ ಅಂಶವಾಗಿ ಚಂದ್ರ, ಶಿವನ ಅಂಶವಾಗಿ ದೂರ್ವಾಸ ಮುನಿಗಳು ಜನಿಸಿದರು.
ಉಳಿದ ಅವತಾರಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯೋಣ.