Tuesday, June 3, 2025

Latest Posts

ಸ್ಯಾಂಡಲ್‌ ಸೋಪ್‌ ಜಟಾಪಟಿ : ಸೋಪ್‌ ಹಚ್ಕೊಂಡ್ರೆ ಆ ನಟಿಯರಂತೆ ಆಗ್ತೀವಾ..? : ಪ್ರತಿಯೊಬ್ಬ ಕನ್ನಡಿಗನೂ ರಾಯಭಾರಿನೇ ; ಸರ್ಕಾರಕ್ಕೆ ತೀಕ್ಷ್ಣವಾಗಿ ತಿವಿದ ರಮ್ಯಾ..

- Advertisement -

ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಮೈಸೂರು ಸ್ಯಾಂಡಲ್‌ ಸೋಪ್‌ ಅನ್ನು ದೇಶಾದ್ಯಂತ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಖ್ಯಾತ ಬಾಲಿವುಡ್‌ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿದೆ. ಅಲ್ಲದೆ 2 ವರ್ಷಗಳ ಕಾಲ ಅವರು ಈ ಮೈಸೂರು ಸ್ಯಾಂಡಲ್‌ ಸೋಪ್‌ನ ಪ್ರಚಾರವನ್ನು ಮಾಡಲಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರವು 6.2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದ್ದು, ಇಷ್ಟೊಂದು ದೊಡ್ಡ ಮೊತ್ತ ನೀಡಿ ನೇಮಕ ಮಾಡಿಕೊಳ್ಳುವ ಅಗತ್ಯವಿತ್ತೇ ಎಂಬ ಪ್ರಶ್ನೆ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕನ್ನಡಪರ ಸಂಘಟನೆಗಳ ವಿರೋಧ..

ಇನ್ನೂ ಇದೇ ವಿಚಾರಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಕೆಎಸ್‌ಡಿಎಲ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶವನ್ನು ಹೊರಹಾಕಿವೆ. ಕನ್ನಡದಲ್ಲಿ ಯಾರು ಸಿಗಲಿಲ್ಲವೆ.? ಕನ್ನಡದಲ್ಲಿ ಅಷ್ಟೊಂದು ಪ್ರತಿಭಾವಂತ ಕಲಾವಿದರು ಇರಲಿಲ್ಲವೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಅಲ್ಲದೆ ಪ್ರಮುಖವಾಗಿ ಕೋಟ್ಯಾಂತರ ರೂಪಾಯಿ ಹಣದಲ್ಲಿ ಒಂದು ಸೋಪ್‌ನ ಪ್ರಮೋಷನ್‌ ಮಾಡುತ್ತಿರುವುದು ಬೇಕಿತ್ತಾ ಎಂದು ಕಿಡಿ ಕಾರಿವೆ. ಇನ್ನೂಈ ವಿವಾದದ ನಡುವೆ ನಟಿ ರಮ್ಯಾ ಅವರು ಎಂಟ್ರಿ ಕೊಟ್ಟಿದ್ದು, ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಬ್ಬ ಕನ್ನಡಿಗನೂ ರಾಯಭಾರಿನೇ..

ಈ ಉತ್ಪನ್ನಗಳ ಪ್ರಮೋಷನ್‌ಗೆ ರಾಯಭಾರಿಗಳನ್ನು ನೇಮಿಸುವುದು ಹಳೆಯ ಸಂಪ್ರದಾಯ. ಇದರಿಂದ ತೆರಿಗೆ ಪಾವತಿದಾರರ ಹಣ ವ್ಯರ್ಥಮಾಡಿದಂತಾಗುತ್ತದೆ. ಒಂದು ಉತ್ಪನ್ನಕ್ಕೆ ಜನ ಗ್ರಾಹಕರಾಗಲು, ಆ ಉತ್ಪನ್ನ ಚೆನ್ನಾಗಿರಬೇಕು. ನಮ್ಮ ಮೈಸೂರು ಸ್ಯಾಂಡಲ್‌ ಸೋಪ್ ಉತ್ತಮ ಉತ್ಪನ್ನವಷ್ಟೇ ಅಲ್ಲ, ಅದು‌ ನಮ್ಮ ಪರಂಪರೆಯಯಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಬಳಸಿದ ಪ್ರತಿಯೊಬ್ಬ ವ್ಯಕ್ತಿಯು ಅದರ ರಾಯಭಾರಿನೇ, ಅದರಲ್ಲೂ ಪ್ರತಿಯೊಬ್ಬ ಕನ್ನಡಿಗ ಸಹ ಅದರ ರಾಯಭಾರಿ, ಅದನ್ನು ಪ್ರತಿಯೊಬ್ಬ ಕನ್ನಡಿಗನು ಉಚಿತವಾಗಿ ಜಗತ್ತಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡುತ್ತಾನೆ ಎನ್ನುವ ಮೂಲಕ ರಾಜ್ಯ ಸರ್ಕಾರಕ್ಕೆ ತೀಕ್ಷ್ಣವಾಗಿಯೇ ಚಾಟಿ ಬೀಸಿದ್ದಾರೆ.

ಪಿ.ಎಸ್. ಆಪಲ್‌ಗೆ ಅಂಬಾಸಿಡರ್ರೇ ಇಲ್ಲ..

ಅಲ್ಲದೆ ಪಿ.ಎಸ್. ಆಪಲ್ ಒಂದು ಯಶಸ್ವಿ ಬ್ರ್ಯಾಂಡ್, ಅದು ‘ಬ್ರಾಂಡ್ ಅಂಬಾಸಿಡರ್‌ನ್ನೇ ಹೊಂದಿಲ್ಲ. ರಾಯಭಾರಿಗಾಗಿ ಆ ಕಂಪನಿ ಹಣ ಖರ್ಚು ಮಾಡುವುದಿಲ್ಲ. ಇನ್ನೂ ನಾನು ಕಂಡಂತೆ ಡವ್ ಸೋಪ್‌ನದ್ದು ಅತ್ಯುತ್ತಮ ಅಭಿಯಾನಗಳಲ್ಲಿ ಒಂದಾಗಿದೆ ಎಂದು ರಮ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ತಮನ್ನಾ ಭಾಟಿಯಾ ನೇಮಕಕ್ಕೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯ ಸರ್ಕಾರವು ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ನೀಡುತ್ತಿರುವುದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಕೂಡ ಕನ್ನಡಪರ ಸಂಘಟನೆಗಳ ಪರ ಬ್ಯಾಟ್‌ ಮಾಡಿದ್ದು ಸಂಚಲನ ಮೂಡಿಸಿದೆ.

. ಪಾಶ್ಚಿಮಾತ್ಯ ಜಗತ್ತು ಮತ್ತು ಗಲ್ಫ್ ಪ್ರದೇಶವನ್ನು ತಲುಪುವ ಗುರಿ..

ಇನ್ನೂ ತಮನ್ನಾ ಭಾಟಿಯಾ ನೇಮಕ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಚಿವ ಎಂ.ಬಿ. ಪಾಟೀಲ್‌, ಇದು ಕೆಎಸ್‌ಡಿಎಲ್ ಕರ್ನಾಟಕ ಸೋಪ್‌ ಹಾಗೂ ಡಿಟರ್ಜೆಂಟ್‌ನ ಉತ್ಪನ್ನಗಳನ್ನು ಜಾಗತಿಕ ಬ್ರಾಂಡ್ ಆಗಿ ಬಿಂಬಿಸುವ ಪ್ರಯತ್ನಗಳ ಭಾಗವಾಗಿದೆ. ನಾವು ಅಂತಾರಾಷ್ಟ್ರೀಯ ಬ್ರ್ಯಾಂಡ್ ಅನ್ನು ರಚಿಸಿದ್ದೇವೆ. ಪಾಶ್ಚಿಮಾತ್ಯ ಜಗತ್ತು ಮತ್ತು ಗಲ್ಫ್ ಪ್ರದೇಶವನ್ನು ತಲುಪುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಅನುಗುಣವಾಗಿ ಹೊಸ ಪ್ಯಾಕೇಜಿಂಗ್‌ನೊಂದಿಗೆ ನಾವು ಅದನ್ನು ಪ್ರಪಂಚದಾದ್ಯಂತ ಮಾರಾಟ ಮಾಡುತ್ತೇವೆ. ಈ ದೀರ್ಘಕಾಲೀನ ಕಾರ್ಯತಂತ್ರದ ಭಾಗವಾಗಿ, ನಾವು ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇತರ ನಟಿಯರನ್ನೂ ಪರಿಗಣಿಸಲಾಗಿತ್ತು, ಆದ್ರೆ ಅವರು ಬ್ಯುಸಿ ಇದ್ದಾರೆ..

ತಜ್ಞರ ನೇತೃತ್ವದ ಸಮಿತಿಯ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತರ ನಟಿಯರನ್ನು ಸಹ ಪರಿಗಣಿಸಲಾಗಿತ್ತು. ಆದರೆ ಅನೇಕರು ಈಗಾಗಲೇ ಸ್ಪರ್ಧಾತ್ಮಕ ಉತ್ಪನ್ನಗಳ ಜಾಹೀರಾತಿನಲ್ಲಿ ತೊಡಗಿದ್ದಾರೆ. ಕನ್ನಡತಿಯೇ ಆದ ರಶ್ಮಿಕಾ ಮಂದಣ್ಣ ಇತರ ಉತ್ಪನ್ನಗಳೊಂದಿಗೆ ಜೊತೆಯಾಗಿದ್ದಾರೆ. ಪೂಜಾ ಹೆಗ್ಡೆ ಮತ್ತು ಕಿಯಾರಾ ಅಡ್ವಾಣಿ ಕೂಡ ವಿವಿಧ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. ದೀಪಿಕಾ ಪಡುಕೋಣೆ ಕೂಡ ತಮ್ಮ ಬ್ರ್ಯಾಂಡ್ ಸೇರಿದಂತೆ ಕೆಲವು ಉತ್ಪನ್ನಗಳ ರಾಯಭಾರಿಯಾಗಿದ್ದಾರೆ ಎಂದು ಪಾಟೀಲ್ ಹೇಳಿದ್ದಾರೆ.

ಬ್ರಾಂಡ್ ರಾಯಭಾರಿಯ ಆಯ್ಕೆಯು ಲಭ್ಯತೆ, ಸ್ಪರ್ಧಾತ್ಮಕವಲ್ಲದ ಷರತ್ತುಗಳು, ಸೋಷಿಯಲ್‌ ಮೀಡಿಯಾದಲ್ಲಿ ಭಾಗವಹಿಸುವಿಕೆ, ಬ್ರ್ಯಾಂಡ್‌ನ ಗುರುತಿನೊಂದಿಗೆ ಹೊಂದಾಣಿಕೆ ಮತ್ತು ಮಾರ್ಕೆಟಿಂಗ್ ವ್ಯಾಪ್ತಿ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇದು ವ್ಯವಹಾರದ ಭಾಗವಾಗಿದೆ. ಇದಕ್ಕೆ ಕನ್ನಡದೊಂದಿಗೆ ಯಾವುದೇ ಸಂಬಂಧವಿಲ್ಲ. ಇದು ವ್ಯಾಪಾರ, ನಾವು ವ್ಯವಹಾರದಲ್ಲಿದ್ದೇವೆ. ಇದು ಕರ್ನಾಟಕದ ಬಗ್ಗೆ ಮಾತ್ರವಲ್ಲ; ನಾವು ಬ್ರ್ಯಾಂಡ್ ಅನ್ನು ಜಾಗತಿಕವಾಗಿ ತೆಗೆದುಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.

ನಾವು ಬ್ರ್ಯಾಂಡ್ ಅನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ..

ಕೆಎಸ್‌ಡಿಎಲ್ ಉತ್ಪನ್ನಗಳ ಉತ್ಪಾದನೆಯು ಅಸ್ತಿತ್ವದಲ್ಲಿರುವ ಯಂತ್ರೋಪಕರಣಗಳು ಮತ್ತು ಸಿಬ್ಬಂದಿಗಳೊಂದಿಗೆ ಶೇಕಡಾ 110 ರಷ್ಟು ಹೆಚ್ಚಾಗಿದೆ. ನಾವು ಎಲ್ಲಾ ಲೋಪದೋಷಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಿದ್ದು ಕಾರ್ಯಾಚರಣೆಯನ್ನು ಸುಗಮಗೊಳಿಸಿದ್ದೇವೆ. ನಾವು ಬ್ರ್ಯಾಂಡ್ ಅನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ. ಕೆಎಸ್‌ಡಿಎಲ್‌ನ ವಹಿವಾಟು 2022-23ರಲ್ಲಿ 1,375 ಕೋಟಿ ರೂಪಾಯಿಗಳಿಂದ 2023-24ರಲ್ಲಿ 1,571 ಕೋಟಿ ರೂಪಾಯಿಗಳಿಗೆ ಮತ್ತು 2024-25 ರಲ್ಲಿ 1,788 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ 2022-23 ರಲ್ಲಿ ಸುಮಾರು 182 ಕೋಟಿ ರೂಪಾಯಿಗಳಿದ್ದ ನಿವ್ವಳ ಲಾಭವು 2023-24 ರಲ್ಲಿ 362 ಕೋಟಿ ರೂಪಾಯಿಗಳಿಗೆ ಏರಿದೆ. ಇದೀಗ 2024-25 ರಲ್ಲಿ 415 ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆಯಿದೆ. ಇನ್ನೂ ಮಾರಾಟವನ್ನು 5,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ದೀರ್ಘಾವಧಿಯ ಕಾರ್ಯತಂತ್ರವನ್ನು ನಾವು ಹೊಂದಿದ್ದೇವೆ. ವಿಜಯಪುರದಲ್ಲಿ ಹೊಸ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತಿದೆ. ಹಿಂದೂಸ್ತಾನ್ ಯೂನಿಲಿವರ್‌ನ ಅಧಿಕಾರಿ ರಜನಿಕಾಂತ್ ಅವರನ್ನು ಸಹ ನಾವು ಕರೆತಂದಿದ್ದೇವೆ. ಅವರಿಗೆ 18 ವರ್ಷಗಳ ಅನುಭವವಿದೆ. ಈಗ ನಮಗೆ ಸಲಹೆ ನೀಡುತ್ತಿದ್ದಾರೆ. ನಾವು 23 ಹೊಸ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ ಎಂದು ಸಚಿವ ಎಂ.ಬಿ. ಪಾಟೀಲ್ ತಮನ್ನಾ ನೇಮಕವನ್ನು ಸಮರ್ಥಿಸಿಕೊಂಡಿದ್ದಾರೆ.

- Advertisement -

Latest Posts

Don't Miss