Janmashtami Special: ಜನ್ಮಾಷ್ಠಮಿಯ ಪ್ರಯುಕ್ತವಾಗಿ ನಾವಿಂದು ಶ್ರೀಕೃಷ್ಣ ಮುಕುಟದ ಮೇಲೆ ನವಿಲುಗರಿ ಇರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
ನಮಸ್ಕಾರ ಪ್ರಿಯ ಭಾನುಃ, ಜಲಧಾ ಪ್ರಿಯ ಶಿವಃ, ಅಲಂಕಾರ ಪ್ರಿಯ ಕೃಷ್ಣ, ನೈವೇದ್ಯ ಪ್ರಿಯ ಗಣಾಧಿಪತಿ ಅನ್ನೋ ಶ್ಲೋಕವಿದೆ. ಅಂದ್ರೆ ಸೂರ್ಯನಿಗೆ ನಮಸ್ಕಾರವೆಂದರೆ ಪ್ರಿಯ, ಶಿವನಿಗೆ ಜಲಾಭಿಶೇಕವೆಂದರೆ ಪ್ರಿಯ ಅದೇ ರೀತಿ ಗಣಪತಿಗೆ ನೈವೇದ್ಯವೆಂದರೆ ಪ್ರಿಯ, ಮತ್ತು ಶ್ರೀಕೃಷ್ಣನಿಗೆ ಅಲಂಕಾರವೆಂದರೆ ಪ್ರಿಯ.
ಶ್ರೀಕೃಷ್ಣನನ್ನು ಸಾಧಾರಣ ಬಾಲಕನ ರೀತಿ ಊಹಿಸಿಕ“ಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಮೈತುಂಬ ಆಭರಣ, ರೇಷ್ಣೆ ವಸ್ತ್ರ, ಪಿತಾಂಬರ, ವೈಜಯಂತಿ ಮಾಲೆ, ಕೈಯಲ್ಲಿ ಕೊಳಲು. ಜತೆಗೆ ಆತನ ಅಂದ ದುಪ್ಪಟ್ಟು ಮಾಡಲು ಇರುವ ಮುಕುಟದ ಮೇಲಿನ ನವಿಲು ಗರಿ. ಇದು ಶ್ರೀಕೃಷ್ಣನ ಅಲಂಕಾರದ ರೀತಿ.
ಶ್ರೀಕೃಷ್ಣ ತನ್ನ ಮುಕುಟದಲ್ಲಿ ಏಕೆ ನವಿಲುಗರಿ ಧರಿಸುತ್ತಾನೆ ಎಂಬುದಕ್ಕೆ ಉತ್ತರ ರಾಮಾಯಣದಲ್ಲಿ ನಿಮಗೆ ಸಿಗುತ್ತದೆ. ತ್ರೇತಾಯುಗದಲ್ಲಿ ವನವಾಸದ ಸಂದರ್ಭದಲ್ಲಿ, ರಾಮ-ಲಕ್ಷ್ಮಣ ಮತ್ತು ಸೀತೆ ನಡೆದು ಬರುವಾಗ, ಸೀತೆಗೆ ಬಾಯಾರಿಕೆಯಾಗುತ್ತದೆ. ಆದರೆ ಸಮೀಪದಲ್ಲಿ ಎಲ್ಲಿಯೂ ನೀರು ಸಿಗುವುದಿಲ್ಲ. ಆಗ ಶ್ರೀರಾಮ ಪ್ರಕೃತಿಯನ್ನು ಕುರಿತು ನದಿ ಇರುವ ಜಾಗ ತೋರಿಸಲು ಪ್ರಾರ್ಥಿಸುತ್ತಾನೆ.
ಅಲ್ಲೇ ಇದ್ದ ನವಿಲು ಆತನ ಪ್ರಾರ್ಥನೆ ಕೇಳಿ, ಇಂಥ ಸತ್ಕಾರ್ಯಕ್ಕೆ ದೇವರು ನನ್ನನ್ನು ಆಯ್ಕೆ ಮಾಡಿದ್ದಾನೆಂದು ತಿಳಿದು, ಶ್ರೀರಾಮನಲ್ಲಿ ಹೋಗಿ, ನಾನು ನನ್ನ ಗರಿಯನ್ನು ಬೀಳಿಸುತ್ತ ಹೋಗುತ್ತೇನೆ. ನೀವು ಅದರಂತೆ ನನ್ನನ್ನು ಹಿಂಬಾಲಿಸಿ ಬನ್ನಿ ಎನ್ನುತ್ತದೆ. ಶ್ರೀರಾಮ ಕೂಡ ನವಿಲಿನ ಹಿಂದೆ ಹೋಗುತ್ತಾನೆ.
ನದಿ ಸಿಗುತ್ತದೆ. ಸೀತೆಯ ಬಾಯಾರಿಕೆ ಆರುತ್ತದೆ. ಆದರೆ ಗರಿಯನ್ನು ಹರಡಿ ಬಂದಿದ್ದ ನವಿಲು ಸಾವಿನ ಸ್ಥಿತಿಗೆ ತಲುಪುತ್ತದೆ. ಆಗ ಶ್ರೀರಾಮ ನನ್ನ ಸೀತೆಯ ದಣಿವಾರಿಸಲು ನೀನು ನಿನ್ನ ಪ್ರಾಣವನ್ನೇ ತ್ಯಾಗ ಮಾಡಿದೆ. ಮುಂದಿನ ಯುಗದಲ್ಲಿ ನಾನು ನಿನ್ನ ಋಣ ತೀರಿಸುತ್ತೇನೆ ಎಂದು ಹೇಳುತ್ತಾನೆ. ಹಾಗಾಗಿಯೇ ದ್ವಾಪರ ಯುಗದಲ್ಲಿ ಶ್ರೀಕೃಷ್ಣ ತನ್ನ ಮುಕುಟದ ಮೇಲೆ ನವಿಲು ಗರಿ ಧರಿಸುತ್ತಾನೆ.




