ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ ಸೋಲಿಸಲು ಇಂಡಿಯಾ ಮೈತ್ರಿಕೂಟ ಸದ್ದಿಲ್ಲದೇ ಸಿದ್ಧತೆ ನಡೆಸ್ತಿದೆ. ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ನಡುವೆ ಸ್ಥಾನ ಹೊಂದಾಣಿಕೆ ವಿಚಾರದಲ್ಲಿ ಮೂಡಿದ್ದ ಭಿನ್ನಮತ ಶಮನಗೊಂಡಿದೆ. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಮೋದಿಗೆ ಶಾಕ್ ಕೊಡಲು ಇಂಡಿಯಾ ಕೂಟ ಸಜ್ಜಾಗಿದೆ.
ಇಂಡಿಯಾ ಮೈತ್ರಿಕೂಟದಲ್ಲಿ ಬಿಕ್ಕಟ್ಟು ತಲೆದೋರುತ್ತಿದ್ದಂತೆ ಶ್ರೀನಗರಕ್ಕೆ ಆಗಮಿಸಿದ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರು, ನ್ಯಾಷನಲ್ ಕಾನ್ಫರೆನ್ಸ್ ಪ್ರಮುಖರಾದ ಫಾರೂಕ್ ಅಬ್ದುಲ್ಲಾ ಹಾಗೂ ಉಮರ್ ಅಬ್ದುಲ್ಲಾ ಅವರೊಂದಿಗೆ ಚರ್ಚಿಸಿದ್ರು.
ಒಟ್ಟು 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನ್ಯಾಷನಲ್ ಕಾನ್ಫರೆನ್ಸ್ಗೆ 51, ಕಾಂಗ್ರೆಸ್ಗೆ 32 ಸ್ಥಾನ ಹಂಚಿಕೆ ಮಾಡಲಾಗಿದೆ. ಐದು ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಫ್ರೆಂಡ್ಲಿ ಫೈಟ್ ನಡೆಸಲು ನಿರ್ಧಾರ ಕೈಗೊಂಡಿವೆ. ಸಿಪಿಐಎಂ, ಪ್ಯಾಂಥರ್ಸ್ ಪಕ್ಷಕ್ಕೆ ತಲಾ ಒಂದು ಸ್ಥಾನವನ್ನು ಬಿಟ್ಟುಕೊಡಲಾಗಿದೆ.
2014ರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 15 ಹಾಗೂ ಕಾಂಗ್ರೆಸ್ 12 ಸ್ಥಾನ ಹಾಗೂ ಸಿಪಿಐಎಂ 1 ಸ್ಥಾನ ಗೆದ್ದಿತ್ತು. ಹೀಗಾಗಿ, ಒಂದಾಗಿ ಚುನಾವಣೆ ಎದುರಿದ್ರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರದ ಹಿನ್ನಲೆ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಜೊತೆ ಕೈಜೋಡಿಸಿದೆ.
ಕ್ಷೇತ್ರಗಳ ಹಂಚಿಕೆ ನಂತರ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಸ್ಥಾನ ಹಂಚಿಕೆ, ಹೊಂದಾಣಿಕೆ ಮಾತುಕತೆ ಪೂರ್ಣಗೊಂಡಿದೆ. ಉಭಯ ಪಕ್ಷಗಳು ಜಮ್ಮು ಮತ್ತು ಕಾಶ್ಮೀರ ರಕ್ಷಿಸಲು ವಿಭಜನೆಯ ಬೀಜ ಬಿತ್ತುವ ಶಕ್ತಿಗಳ ವಿರುದ್ಧ ಒಗ್ಗೂಡಿ ಹೋರಾಟ ನಡೆಸಲಿವೆ ಎಂದು ತಿಳಿಸಿದ್ರು.
ಒಟ್ನಲ್ಲಿ 10 ವರ್ಷಗಳ ಬಳಿಕ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೀತಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿರೋ ಕಾಂಗ್ರೆಸ್, ದೇಶದ ಮುಕುಟವನ್ನೂ ಗೆಲ್ಲೋಕೆ ರಣತಂತ್ರವನ್ನೂ ರೂಪಿಸಿದೆ. ಹಾಗೆಯೇ, ಬಿಜೆಪಿ ಕೂಡ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ.