Political News: ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿದ್ದಕ್ಕೆ ಜೆಡಿಎಸ್, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ Tweet ಮಾಡಿ, ವಾಗ್ದಾಳಿ ನಡೆಸಿದ್ದಾರೆ.
ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವುದು ಅಭಿವೃದ್ಧಿಯಲ್ಲ, ಅದು ಒಂದು ಫಲಕ ಬದಲಾವಣೆ ಮಾತ್ರ. ಐತಿಹಾಸಿಕವಾಗಿ ಆಳವಾದ ಬೇರುಗಳು ಮತ್ತು ಇತಿಹಾಸ ಹೊಂದಿರುವ ಜಿಲ್ಲೆಯನ್ನು ರಿಯಲ್ ಎಸ್ಟೇಟ್ ಯೋಜನೆಯ ಕರಪತ್ರದಂತೆ ಮರುನಾಮಕರಣ ಮಾಡಲಾಗುತ್ತಿದೆ.
ಊರ ಹೆಸರು ಮರುನಾಮಕರಣವು ಬೆಳವಣಿಗೆಗೆ ಮಾಂತ್ರಿಕ ದಂಡವಾಗಿದ್ದರೆ, ಕನಕಪುರವನ್ನು ಕೌಲಲಾಂಪುರ್ ಎಂದು ಮರುನಾಮಕರಣ ಮಾಡಿ ಈಗ ಅಂತರರಾಷ್ಟ್ರೀಯ ನಗರವಾಗಿ ಪರಿವರ್ತಿಸಬಹುದಿತ್ತು, ಆದರೆ ದುಃಖಕರವೆಂದರೆ, ನಿಮ್ಮ ಹೊಸ ನಾಮಕರಣ ದಿಂದ ರಸ್ತೆ ಗುಂಡಿಗಳು ಸುಧಾರಣೆ ಕಾಣುವುದಿಲ್ಲ ಎಂದು ನಿಖಿಲ್ ಹೇಳಿದ್ದಾರೆ..
ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಮನಗರದಲ್ಲಿ ಒಂದೇ ಒಂದು ಅಭಿವೃದ್ಧಿ ಯೋಜನೆಯೂ ಆರಂಭಗೊಂಡಿಲ್ಲ, ನೀವು ರಾಜಕೀಯ ಹೋರ್ಡಿಂಗ್ಸ್ ಗಳನ್ನೇ ಮೂಲ ಸೌಕರ್ಯ ಅಂದುಕೊಂಡಂತಿದೆ. ಇದೆ ರೀತಿ ಮುಂದುವರೆದರೆ, ಮಾನ್ಯ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಡಿ.ಕೆ. ಸಿಎಂ ಕುಮಾರ್ ಎಂದು ಮರುನಾಮಕರಣ ಮಾಡಬಹುದು, ಏಕೆಂದರೆ ನಾಯಕತ್ವ ಇಲ್ಲದಿದ್ದಾಗ, ಬ್ರ್ಯಾಂಡಿಂಗ್ ಮಾತ್ರ ಪ್ರಣಾಳಿಕೆಯಾಗುತ್ತದೆ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.