Political News: ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಿ ಅವುಗಳನ್ನು ಖಾಸಗಿಯವರ ಪಾಲಾಗದಂತೆ ತಡೆಯಲು ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗ ತಂದಿದೆ. ಆದರೂ ಸಹ ಅಲ್ಲಲ್ಲಿ ಸರ್ಕಾರಿ ಭೂಮಿ ಖಾಸಗಿ ಭೂಗಳ್ಳರ ಪಾಲಾಗುತ್ತಿರುವುದು ಕಂಡು ಬರುತ್ತಿದೆ.
ಇನ್ನೂ ಇದಕ್ಕೆ ಪೂರಕವೆಂಬಂತೆಯೇ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ತಲಘಟ್ಟಪುರ ಗ್ರಾಮದ ಸರ್ವೆ ನಂಬರ್ 30ರಲ್ಲಿ ಸುಮಾರು 150 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 11.16 ಎಕರೆ ಸರ್ಕಾರಿ ಸ್ವತ್ತ ಖಾಸಗಿಯವರ ಪಾಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಗೆ ಕಣ್ಣ..
ಪ್ರಮುಖವಾಗಿ ಸರ್ಕಾರಿ ಆಸ್ತಿಯನ್ನು ರಕ್ಷಣೆ ಮಾಡಬೇಕಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳೇ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಹಸೀಲ್ದಾರ್ ಕಚೇರಿಯ ಅಧಿಕಾರಿ, ನೌಕಕರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಕಣ್ಣ ಹಾಕಿದ್ದಾರೆ. ಈ ಮೂಲಕ ಸರ್ಕಾರಿ ಭೂಮಿಯನ್ನು ನುಂಗಣ್ಣರ ಕೈಸೇರುವಂತೆ ಮಾಡಿದ್ದಾರೆ ಎಂದು ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
11.16 ಎಕರೆ ಜಮೀನು, 150 ಕೋಟಿಗೂ ಅಧಿಕ ಮೌಲ್ಯ..
ಈ ಸಂಬಂಧ ಅವರು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಈ 11.16 ಎಕರೆ ಜಾಗವು ಸಂಪೂರ್ಣವಾಗಿ ಸರ್ಕಾರಿ ಸ್ವತ್ತಾಗಿದೆ. ಈ ಸ್ವತ್ತಿನ ಪ್ರಸ್ತುತ ಮಾರುಕಟ್ಟೆ ದರ ಸುಮಾರು 150 ಕೋಟಿ ರೂಪಾಯಿಗಳಿಗೂ ಅಧಿಕವಿದೆ. ಈ ಆಸ್ತಿಗೆ ಸಂಬಂಧಿಸಿದ ಪ್ರಕರಣವು ಕಳೆದ ಎರಡು ವರ್ಷಗಳಿಂದ ಚಾಲ್ತಿಯಲ್ಲಿದೆ.
ಮೂರು ಹೋಬಳಿ ವ್ಯಾಪ್ತಿಯಲ್ಲಿ ಹತ್ತಾರು ಸರ್ಕಾರಿ ಆಸ್ತಿಗಳು ಗುಳುಂ..
ಈಗಾಗಲೇ ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ, ಕೆಂಗೇರಿ ಹೋಬಳಿ ಹಾಗೂ ಯಶವಂತಪುರ ಹೋಬಳಿ ವ್ಯಾಪ್ತಿಯಲ್ಲಿ ಹತ್ತಾರು ಸರ್ಕಾರಿ ಸ್ವತ್ತುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವ ಕೆ.ಎನ್. ಸುರೇಂದ್ರ ಎಂಬಾತನ ಹಣದ ಪ್ರಭಾವಕ್ಕೆ ಒಳಗಾಗಿ ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಹಾಗೂ ನೌಕರರು ಈ ಸರ್ಕಾರಿ ಸ್ವತ್ತನ್ನು ಆ ಸರ್ಕಾರಿ ಭೂಗಳ್ಳನ ಪಾಲಾಗುವಂತೆ ಟಿಪ್ಪಣಿ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕಡತವು ಸದ್ಯದಲ್ಲೇ ಬೆಂಗಳೂರು ನಗರ ಜಿಲ್ಲೆ ಸಹಾಯಕ ಆಯುಕ್ತರಾಗಿರುವ ಅಪೂರ್ವ ಬಿದರಿ ಅವರ ಕಚೇರಿಗೆ ಟಪಾಲು ಮುಖಾಂತರ ತಲುಪುತ್ತಿರುವ ವಿಷಯ ಬಹಿರಂಗವಾಗಿದೆ. ಹೀಗಾಗಿ ಈ ಅಮೂಲ್ಯ ಸರ್ಕಾರಿ ಸ್ವತ್ತು ನೆಲಗಳ್ಳನ ಪಾಲಾಗದಂತೆ ಕ್ರಮ ವಹಿಸುವ ಹಾಗೂ ಆ ಸ್ವತ್ತನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ತಮ್ಮದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಪ್ಪಿತಸ್ಥ ಅಧಿಕಾರಿಗಳು, ನೌಕರರ ವಿರುದ್ಧ ಕ್ರಮ ಕೈಗೊಳ್ಳಿ..
ಈ ಸಂಬಂಧ ಕೂಡಲೇ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸರ್ಕಾರಿ ಸ್ವತ್ತು ಕೆ.ಎನ್. ಸುರೇಂದ್ರ ಎಂಬ ಸರ್ಕಾರಿ ಭೂದಾಹಿಗೆ ಸೇರುವಂತೆ ಕಾನೂನು ಬಾಹಿರ ಟಿಪ್ಪಣಿ ಹಾಳೆಗಳನ್ನು ತಯಾರಿಸಿರುವ ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿಯ ಭ್ರಷ್ಟ ಅಧಿಕಾರಿ ಮತ್ತು ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಎನ್.ಆರ್. ರಮೇಶ್ ದೂರಿನಲ್ಲಿ ಒತ್ತಾಯಿಸಿದ್ದಾರೆ.