2020 ಹೊಸ ವರ್ಷ ಶುರುವಾಗಿ ಒಂದು ತಿಂಗಳೂ ಕಳೆದಿರಲಿಲ್ಲ. ಹೊಸ ವರ್ಷದಲ್ಲೇನಾದರೂ ಸಾಧಿಸೋಣ, ಹೊಸತೇನಾದರೂ ಮಾಡೋಣ. ಕಳೆದ ವರ್ಷವಂತೂ ಮಳೆಯ ಪ್ರಭಾವದಿಂದ ಹಾಳಾಗಿದ್ದ ಜನಜೀವನ ಈ ವರ್ಷವಾದರೂ ಸರಿಹೋಗಬಹುದೇನೋ ಎಂದು ಜೀವನ ಪಯಣ ಆರಂಭಿಸಿದ್ದ ಜನರಿಗೆ ಶಾಕ್ ಕೊಟ್ಟಿದ್ದು ಕೊರೊನಾ ಎಂಬ ಮಹಾಮಾರಿ. ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತೆ, ಚೀನಾದಲ್ಲಿ ಹುಟ್ಟಿದ ಕೊರೊನಾ ಭಾರತಕ್ಕೂ ವಕ್ಕರಿಸಿಬಿಟ್ಟಿತ್ತು.
ಕಣ್ಣಿಗೆ ಕಾಣದ ವೈರಸ್ ಒಂದು ಜನಜೀವನ ಅಸ್ತವ್ಯಸ್ಥ ಮಾಡಿಹಾಕಿತ್ತು. ವೈರಸ್ ಹರಡಬಾರದೆಂದು ದೇಶವನ್ನ ಲಾಕ್ಡೌನ್ ಮಾಡಲಾಯಿತು. ಕೂಲಿ ಕಾರ್ಮಿಕರು, ಬಡವರ ಪರಿಸ್ಥಿತಿ ಅದೋಗತಿಯಾಯಿತು. ನಷ್ಟ ಎಂಬ ಕಾರಣ ಕೊಟ್ಟು ಹಲವರನ್ನ ಕೆಲಸದಿಂದ ತೆಗೆದು ಹಾಕಲಾಯಿತು. ನೆಮ್ಮದಿಯಾಗಿದ್ದ ಜನ ಒಂದು ಹೊತ್ತಿನ ತುತ್ತಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಬೇರೆ ಊರುಗಳಿಗೆ ವಲಸೆ ಹೋದವರು ಅತ್ತ ದುಡಿಯಲೂ ಆಗದೇ, ಇತ್ತ ತವರೂರಿಗೆ ಬರಲೂ ಆಗದೇ ಸಮಸ್ಯೆಗೆ ಸಿಲುಕಿದರು.
ಆಗ ನಮ್ಮವರು ತಮ್ಮವರು ಎಂಬ ಬೇಧ ಭಾವವಿಲ್ಲದೇ ಕೂಲಿಕಾರ್ಮಿಕರನ್ನ ಅವರವರ ಊರಿಗೆ ಕಳುಹಿಸಿಕೊಟ್ಟಿದ್ದು ನಟ ಸೋನುಸೂದ್. ಸಿನಿಮಾಗಳಲ್ಲಿ ಖಳನಟನಾಗಿ ಮಿಂಚಿದ್ದ ಸೋನು ಸೂದ್, ನಿಜ ಜೀವನದಲ್ಲಿ ಮಾನವೀಯತೆ ಮೆರೆದು ಹೀರೋ ಎನ್ನಿಸಿಕೊಂಡರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿದ ಸೋನೂಸೂದ್, ವಲಸೆ ಬಂದಿದ್ದ ಕಾರ್ಮಿಕರನ್ನ ತಮ್ಮ ಖರ್ಚಿನಲ್ಲೇ ತವರೂರಿಗೆ ಕಳುಹಿಸಿಕೊಟ್ಟಿದ್ದರು. ರೀಲ್ ಲೈಫ್ನ ಖಳನಾಯಕ, ರಿಯಲ್ ಲೈಫ್ನ ನಾಯಕನೆನ್ನಿಸಿಕೊಂಡ್ರು.
ಇನ್ನು ಸೋನೂಸೂದ್ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಹೇಗೆ, ಇವರು ಎಲ್ಲಿನವರು ಅನ್ನೋದನ್ನ ನೋಡೋದಾದ್ರೆ, ಸೋನುಸೂದ್ ಮೂಲತಃ ಪಂಜಾಬ್ನವರು. ನಾಗ್ಪುರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋನುಸೂದ್ ಬಿಇ ಪದವಿ ಪಡೆದರು. 1999ರಲ್ಲಿ ತಮಿಳು ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ ಸೋನೂ, ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್ಗಳಲ್ಲೂ ಒಳ್ಳೆಯ ನಟನಾಗಿ ಮಿಂಚಿದ್ದಾರೆ. ಆಶಿಕ್ ಬನಾಯಾ ಆಪನೆ ಚಿತ್ರದ ಪಾತ್ರ ಸೋನು ಸೂದ್ರನ್ನ ಬಾಲಿವುಡ್ನಲ್ಲಿ ನೆಲೆಕಂಡುಕೊಳ್ಳುವಂತೆ ಮಾಡಿತ್ತು. ಇವರು ತಮ್ಮ ನಟನೆಯಿಂದ ಹಲವು ಅವಾರ್ಡ್ಗಳಿಗೂ ಭಾಜನರಾಗಿದ್ದಾರೆ.
ಲಾಕ್ಡೌನ್ನಿಂದ ಕಂಗಾಲಾಗಿದ್ದ ಕಾರ್ಮಿಕರನ್ನ ಅವರ ತವರೂರಿಗೆ ಕಳುಹಿಸುವ ಮೂಲಕ ಖಳನಾಯಕ ಪಾತ್ರದಲ್ಲಿ ಮಿಂಚುತ್ತಿದ್ದ ಸೋನುಸೂದ್ ನಿಜ ಜೀವನದಲ್ಲಿ ಒಬ್ಬ ಜವಾಬ್ದಾರಿಯುವ ಮನುಷ್ಯ, ಸಮಾಜ ಸೇವಕ ಎಂಬುದನ್ನು ಸಾಬೀತು ಮಾಡಿದ್ದಾರೆ.