ಹೊಸದಿಲ್ಲಿ: ಕಾಮನ್ವೆಲ್ತ್ ಗೇಮ್ಸ್ ಸಮೀಪಿಸುತ್ತಿರುವಂತೆಯೆ ಭಾರತೀಯ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ತಾವು ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಹಾಗೂ ಕೆಲವರಿಂದ ರಾಜಕೀಯ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಲವ್ಲಿನಾ ಅವರು ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.
“ನಾನು ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ನನಗೆ ಒಲಿಂಪಿಕ್ಸ್ ಪದಕ ಗೆಲ್ಲಲು ನೆರವು ನೀಡಿದ ಕೋಚ್ಗಳನ್ನೆಲ್ಲ ಬದಲಿಸಲಾಗುತ್ತಿದೆ. ನನಗೆ ಅವರ ಜತೆ ತರಬೇತಿ ನಡೆಸಲು ಅವಕಾಶ ನಿರಾಕರಿಸಲಾಗುತ್ತಿದೆ. ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಸಂಜಯ ಗುರೂಜಿ ಅವರನ್ನೂ ತೆಗೆಯಲಾಗಿದೆ. ನನಗೆ ಸರಿಯಾದ ಸಮಯಕ್ಕೆ ತರಬೇತಿ ನಡೆಸಲೂ ಅವಕಾಶ ನೀಡುತ್ತಿಲ್ಲ. ಅದಕ್ಕಾಗಿ ಬೇರೆಯವರನ್ನು ಬೇಡಬೇಕಾಗಿ ಬರುತ್ತಿದೆ” ಎಂದು ಲವ್ಲಿನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
“ಇದೀಗ ಸಂಜಯ ಗುರೂಜಿ ಅವರನ್ನು ಕಾಮನ್ವೆಲ್ತ್ ಗೇಮ್ಸ್ ಗ್ರಾಮ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ. ಕ್ರೀಡಾಕೂಟ ಆರಂಭವಾಗುವ ಎಂಟು ದಿನಗಳ ಮೊದಲೇ ನನ್ನ ತರಬೇತಿ ಮೊಟಕುಗೊಂಡಿದೆ. ನನ್ನ ಇನ್ನೊಬ್ಬ ಕೋಚ್ನ್ನೂ ಭಾರತಕ್ಕೆ ಮರಳಿ ಕಳಿಸಲಾಗಿದೆ. ನನ್ನ ಮನವಿಗಳನ್ನೆಲ್ಲ ತಿರಸ್ಕರಿಸಲಾಗಿದೆ. ಇದರಿಂದ ನನಗೆ ಏಕಾಗ್ರಚಿತ್ತತೆ ಕಾಯ್ದುಕೊಳ್ಳಲು ಕಷ್ಟವಾಗಿದೆ ” ಎಂದು ಅವರು ದೂರಿಕೊಂಡಿದ್ದಾರೆ.
“ಇಂತಹ ರಾಜಕೀಯವು ವಿಶ್ವ ಚಾಂಪ್ಯನ್ಶಿಪ್ನಲ್ಲಿ ನನ್ನ ಅವಕಾಶ ಹಾಳುಗೆಡವಿತು. ಇದೇ ಪರಿಸ್ಥಿತಿ ಕಾಮನ್ವೆಲ್ತ್ ಗೇಮ್ಸ್ ಅವಕಾಶಕ್ಕೂ ಕಾಡಬಾರದು ಎಂಬುದು ನನ್ನ ಉದ್ದೇಶ. ಇಂತಹ ರಾಜಕೀಯವನ್ನು ಹಿಮ್ಮೆಟ್ಟಿಸಿ ದೇಶಕ್ಕೆ ಪದಕ ತಂದುಕೊಡಲು ಪ್ರಯತ್ನಿಸುವೆ ” ಎಂದು ಅವರು ಹೇಳಿದ್ದಾರೆ.